ಚಾಮರಾಜನಗರ: ಅರಣ್ಯಾಧಿಕಾರಿಗಳ ಬಲೆಗೆ ಬಿದ್ದ ಜಿಂಕೆ ಬೇಟೆಗಾರ
ಚಾಮರಾಜನಗರ, ಜುಲೈ 26: ಉರುಳು ಹಾಕಿ ಜಿಂಕೆ ಬೇಟೆಯಾಡುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ವನ್ಯಧಾಮದ ಹನೂರು ಬಫರ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. ನಟರಾಜು ಎಂಬಾತನೇ ಬಂಧಿತ ಆರೋಪಿ. ಈತ ಅರಣ್ಯದಂಚಿನಲ್ಲಿ ಜಮೀನು ಹೊಂದಿದ್ದು, ಆಗಾಗ್ಗೆ ಅರಣ್ಯ ಪ್ರದೇಶದೊಳಗೆ ಅಕ್ರಮ ಪ್ರವೇಶ ಮಾಡಿ, ಬೇಟೆಯಾಡಿದ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ವನ್ಯಧಾಮದ ಹನೂರು ಬಫರ್ ಅರಣ್ಯ ಪ್ರದೇಶದಲ್ಲಿ ಉರುಳಿಗೆ ಸಿಕ್ಕಿ ಜಿಂಕೆ ಮೃತಪಟ್ಟ ಘಟನೆ ಕಳೆದ ಎರಡು ದಿನಗಳ ಹಿಂದೆ ನಡೆದಿತ್ತು. ಬಫರ್ ವಲಯದ ಪಚ್ಚೆದೊಡ್ಡಿ ಡಿ ಲೈನ್ ನಲ್ಲಿ ಜಿಂಕೆ ಮೃತಪಟ್ಟಿದ್ದು ಅರಣ್ಯಾಧಿಕಾರಿಗಳಿಗೆ ತಲೆನೋವು ತಂದಿತ್ತಲ್ಲದೆ, ಇದರ ಹಿಂದೆ ಯಾರಿರಬಹುದು ಎಂಬುದರ ಬಗ್ಗೆ ತನಿಖೆಗೂ ಮುಂದಾಗಿದ್ದರು. ಈ ಮಧ್ಯೆ ಉಪ ಅರಣ್ಯಾಧಿಕಾರಿ ಡಾ.ಎಂ. ಮಾಲತಿಪ್ರಿಯಾ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದಾಗ ಜಿಂಕೆ ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಖಚಿತವಾಗಿತ್ತಲ್ಲದೆ, ತನಿಖೆ ಆರಂಭಿಸಲಾಗಿತ್ತು.
ಆಗ ಹನೂರು ಬಫರ್ ವಲಯದಲ್ಲಿ ಜಿಂಕೆ, ಮೊಲ ಹಾಗೂ ಇನ್ನಿತರ ಸಾಧುಪ್ರಾಣಿಗಳ ಹತ್ಯೆಗಾಗಿ 5 ಮೀಟರ್ ಅಂತರದಲ್ಲಿ ಮೂರು ಕಡೆ ಆರು ಉರುಳನ್ನು ಹಾಕಿರುವುದು ಕಂಡು ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಉರುಳು ಹಾಕಿರುವುದು ಜಮೀನಿನ ಮಾಲೀಕ ನಟರಾಜು ಎಂಬುದು ಪತ್ತೆಯಾಗಿತ್ತು. ಆದ್ದರಿಂದ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೇಟೆಯಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಾಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.