ಚಾಮರಾಜನಗರ: ಕೆಸರು ನೀರು ಕುಡಿದು ಹೆಣ್ಣಾನೆ ಸಾವು
ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ವಲಯದಲ್ಲಿ 15 ವರ್ಷ ಪ್ರಾಯದ ಹೆಣ್ಣಾನೆಯೊಂದು ಕೆಸರು ನೀರು ಕುಡಿದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರ, ಫಬ್ರವರಿ 16: ಬೇಸಿಗೆಯ ಆರಂಭದ ದಿನಗಳಲ್ಲೇ ಬರದ ಛಾಯೆ ಆವರಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಜನ ನೀರಿಗಾಗಿ ಕಿ.ಮೀ.ಗಟ್ಟಲೆ ನಡೆಯುತ್ತಿದ್ದರೆ, ಅರಣ್ಯದಲ್ಲಿ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರನ್ನು ಅರಸುತ್ತಾ ಓಡಾಡುತ್ತಿವೆ. ಬಾಯಾರಿದ ಪ್ರಾಣಿಗಳು ಸಿಕ್ಕ ಕೆಸರು ನೀರನ್ನು ಕುಡಿದು ಅಸು ನೀಗುತ್ತಿವೆ.
ಕಳೆದು ಕೆಲವು ಸಮಯಗಳ ಹಿಂದೆ ಬಂಡೀಪುರ ಉದ್ಯಾನದಲ್ಲಿ ಕಲುಷಿತ ನೀರು ಕುಡಿದು ಕರಡಿ ಮರಿಗಳು ಸಾವನ್ನಪ್ಪಿದ್ದವು. ಈ ಘಟನೆ ಹಸಿರಿರುವಾಗಲೇ ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ವಲಯದಲ್ಲಿ 15 ವರ್ಷ ಪ್ರಾಯದ ಹೆಣ್ಣಾನೆಯೊಂದು ಕೆಸರು ನೀರು ಕುಡಿದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.[ಬಂಡೀಪುರದಲ್ಲಿ 10 ವರ್ಷ ವಯಸ್ಸಿನ ಹೆಣ್ಣು ಹುಲಿ ಸಾವು]
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ಬಂದ ಬಳಿಕ ಮಾತ್ರ ನೈಜ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗಿದೆ.
ಕೊಳ್ಳೇಗಾಲ ತಾಲೂಕಿನ ವ್ಯಾಪ್ತಿಯಲ್ಲಿ ದಟ್ಟ ಅರಣ್ಯವಿದ್ದು, ಈ ಪ್ರದೇಶದಲ್ಲಿ ಎಲ್ಲ ರೀತಿಯ ವನ್ಯ ಜೀವಿಗಳಿವೆ. ಇದೀಗ ಉಂಟಾಗಿರುವ ನೀರಿನ ಸಮಸ್ಯೆಯಿಂದ ಪ್ರಾಣಿಗಳು ನೀರು ಮತ್ತು ಆಹಾರ ಅರಸಿಕೊಂಡು ಎಲ್ಲೆಂದರಲ್ಲಿ ಅಲೆಯುತ್ತಿದ್ದು, ನೀರು, ಮೇವು ಸಿಗದ ಸಣ್ಣಪುಟ್ಟ ಪ್ರಾಣಿಗಳು ಸಾವಿಗೆ ಶರಣಾಗುತ್ತಿವೆ.
ಕೆರೆ, ಕಟ್ಟೆಗಳಲ್ಲಿ ನೀರು ಬತ್ತಿದ್ದು, ಆನೆಗಳು ನೀರಿಗಾಗಿ ಕೆರೆಗೆ ಇಳಿದು ಅಲ್ಲಿ ಸಿಲುಕಿಕೊಂಡು ಮೇಲೆ ಬರಲು ಪರದಾಡುತ್ತಿವೆ. ಕೆಲವು ಕೆಸರು ನೀರನ್ನೇ ಕುಡಿದು ದಾಹ ತಣಿಸಿಕೊಳ್ಳುತ್ತಿವೆ.[ಬಾಲಮುದುರಿದ ಪ್ರಿನ್ಸ್, ಬಂಡೀಪುರದಲ್ಲೀಗ ಮಾದೇಶನ ಹವಾ!]
ಮುಂದಿನ ಮೂರು ತಿಂಗಳು ಬೇಸಿಗೆಯ ದಿನಗಳಾಗಿದ್ದು, ಮಳೆ ಬಾರದೆ ಹೋದರೆ ಇನ್ನಷ್ಟು ಸಂಕಷ್ಟ ಎದುರಾಗುವುದು ನಿಶ್ಚಿತವಾಗಿದೆ.