ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇಂದ್ರ ಸಚಿವ ವಿಕೆ ಸಿಂಗ್ ದಂಪತಿ
ಗುಂಡ್ಲುಪೇಟೆ, ಜನವರಿ 10: ತಾಲೂಕಿನ ಇತಿಹಾಸ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಜನರಲ್ ವಿಜಯಕುಮಾರ್ ಸಿಂಗ್ ಕುಟುಂಬ ಸಮೇತರಾಗಿ ಮಂಗಳವಾರ ಭೇಟಿ ನೀಡಿ, ದೇವರ ದರ್ಶನ ಪಡೆದರು.
ಬೆಂಗಳೂರಿನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಚಿವರು, ಸಮಾವೇಶ ಮುಗಿದ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಬೆಳಗ್ಗೆ 9 ಗಂಟೆಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ಅವರು ಸಚಿವರಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಹಿಮವದ್ ಗೋಪಾಲಸ್ವಾಮಿ ದರ್ಶನ ಪಡೆದ ನಂತರ ಸ್ವಲ್ಪ ಹೊತ್ತು ಬೆಟ್ಟದ ಪರಿಸರ ವೀಕ್ಷಣೆ ನಡೆಸಿದ ಸಚಿವರು, ಬಂಡೀಪುರ ಸಮೀಪದ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ನಲ್ಲಿ ಉಪಾಹಾರ ಸೇವಿಸಿದರು. ನಂತರ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ತೆರಳಿದರು.[ಭಾರತದ ವಿವಾದಿತ ವಿದೇಶಾಂಗ ಖಾತೆ ಮಂತ್ರಿಗಳು]
ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಹೀರಾಲಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎ.ಮರಡಿಮನಿ, ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ, ತಹಸೀಲ್ದಾರ್ ಕೆ.ಸಿದ್ದು, ಡಿವೈಎಸ್ ಪಿ ಎಸ್.ಇ.ಗಂಗಾಧರಸ್ವಾಮಿ, ಪಿಎಸ್ ಐ ಬಿ.ಎನ್.ಸಂದೀಪ್ ಕುಮಾರ್, ಚಾಮರಾಜನಗರದ ಉದ್ಯಮಿ ಸಿ.ಬಿ.ವಿಜಯಕುಮಾರ್ ಇತರರು ಇದ್ದರು.