ಗುಂಡ್ಲುಪೇಟೆ ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ!
ಗುಂಡ್ಲುಪೇಟೆ: ಬರದ ಹಿನ್ನಲೆಯಲ್ಲಿ ಮೇವಿಗೆ ಕೊರತೆ ಕಾಣಿಸಿಕೊಂಡಿದ್ದರಿಂದ ಕೆಲವರು ತಾವು ಸಾಕುತ್ತಿರುವ ಜಾನುವಾರುಗಳನ್ನು ಅವುಗಳ ಮಾಲೀಕರು ಬೀದಿಗೆ ಬಿಡುತ್ತಿದ್ದು, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುವ ದನಗಳು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿವೆ.
ಬೀಡಾಡಿ ದನಗಳ ಹಾವಯಿಂದ ಹಿಂಸೆ ಅನುಭವಿಸುತ್ತಿರುವ ವಾಹನ ಚಾಲಕರಿಗೆ ಅವುಗಳಿಂದ ತಪ್ಪಿಸಿಕೊಂಡು ಚಾಲನೆ ಮಾಡುವುದೇ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ದನಗಳ ಮಾಲಿಕರು ಪಟ್ಟಣದಲ್ಲಿ ದನಗಳನ್ನು ರಸ್ತೆಗೆ ಬಿಡುತ್ತಿದ್ದರೂ ಪುರಸಭೆಯವರು ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣಕ್ಕೊಂದು ಸುತ್ತು ಹೊಡೆದರೆ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಅಂಗಡಿಬೀದಿ, ಚಾಮರಾಜನಗರ ರಸ್ತೆ, ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ, ತಾಲೂಕು ಕಚೇರಿ, ಪುರಸಭೆ ಕಚೇರಿ ಹಾಗೂ ಪ್ರವಾಸಿ ಮಂದಿರದವರೆಗೆ ಹೆದ್ದಾರಿಯ ರಸ್ತೆ ಮಧ್ಯೆ, ಬದಿಯಲ್ಲಿ ಹೀಗೆ ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಮಲಗುವ ಜಾನುವಾರುಗಳು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಬಸ್ ನಿಲ್ದಾಣದ ಎದುರು ರಸ್ತೆ, ಹಳೇ ಆಸ್ಪತ್ರೆ ರಸ್ತೆಗಳಲ್ಲಿಯೂ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ.
ದಿನದಿಂದ ದಿನಕ್ಕೆ ರಸ್ತೆಗೆ ಜಾನುವಾರುಗಳನ್ನು ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆ ದನಗಳನ್ನು ಸೆರೆ ಹಿಡಿದು ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ಪುರಸಭೆ ಮಾಡದೆ ಇರುವುದರಿಂದಾಗಿ ಪಟ್ಟಣದ ತುಂಬಾ ದನಗಳು ಕಂಡು ಬರುತ್ತಿದ್ದು, ಅಂಗಡಿ ಮಾಲಿಕರಿಂದ ಆರಂಭವಾಗಿ ರಸ್ತೆ ಬದಿ ವ್ಯಾಪಾರಿಗಳು, ವಾಹನ ಸವಾರರು ಹಿಡಿಶಾಪ ಹಾಕಿಕೊಂಡು ಓಡಾಡುವಂತಾಗಿದೆ.
ಇಷ್ಟಕ್ಕೂ ಬೀಡಾಡಿ ದನಗಳು ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುವವರಿಗೆ ಸೇರಿದ್ದಲ್ಲ ಎನ್ನಲಾಗುತ್ತಿದೆ. ಹಸು ಸಾಕುವವರು ತಮ್ಮ ಹಸುಗಳನ್ನು ಜತನದಿಂದ ಸಾಕುತ್ತಿದ್ದಾರೆ. ಕೆಲವರು ಕಸಾಯಿಖಾನೆಗೆ ಒಯ್ಯಲೆಂದೇ ಜಾನುವಾರುಗಳನ್ನು ಸಾಕುತ್ತಿದ್ದು ಇಂಥವರು ಜಾನುವಾರುಗಳನ್ನು ಬೀದಿಗೆ ಬಿಟ್ಟು ಅವು ದಷ್ಟಪುಷ್ಠವಾಗಿ ಬೆಳೆದ ಬಳಿಕ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಇನ್ನು ಮುಂದೆಯಾದರೂ ಪುರಸಭೆ ಇತ್ತ ಗಮನಹರಿಸುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.