Bike Rallyಯಲ್ಲಿ ಭಾಗವಹಿಸಿದ್ದ 300 ಸವಾರರ ವಿರುದ್ಧ ಪ್ರಕರಣ ದಾಖಲು
chamarajanagar, gundlupete by-election, chief minister siddaramaiah, ಚಾಮರಾಜ ನಗರ, ಗುಂಡ್ಲುಪೇಟೆ ಉಪ ಚುನಾವಣೆ, ಮುಖ್ಯಮಂತ್ರಿ ಸಿದ್ದರಾಮಯ್ಯ
ಚಾಮರಾಜನಗರ, ಮಾರ್ಚ್ 14: ಗುಂಡ್ಲುಪೇಟೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಬೈಕ್ ರ್ಯಾಲಿಯಲ್ಲಿ ನಿಯಮ ಉಲ್ಲಂಘಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಕುಮಾರ ಸ್ವಾಮಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಮೇಲೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ನಾಯಕರು ಗುಂಡ್ಲುಪೇಟೆಗೆ ಆಗಮಿಸಿ ಕಾರ್ಯಕರ್ತರ ಸಭೆ ನಡೆಸಿ ಯಶಸ್ವಿಗೊಳಿಸಿದ್ದು, ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಡೆಸಿದ ಬೈಕ್ ರ್ಯಾಲಿ ಎಲ್ಲರ ಗಮನಸೆಳೆದಿತ್ತು.
ಆದರೆ ಈ ಬೈಕ್ ರ್ಯಾಲಿಯ ಹಿಂದಿನ ನಿಗೂಢತೆ ಇದೀಗ ಬಯಲಾಗಿದ್ದು, ರ್ಯಾಲಿಗೆ ಬಂದಿದ್ದ ಕಾರ್ಯಕರ್ತರಿಗೆ ಕಾಂಗ್ರೆಸ್ ವತಿಯಿಂದ ತಲಾ ಮೂರು ಲೀಟರ್ ನಂತೆ ಪೆಟ್ರೋ ನೀಡಿರುವುದು ಜಗಜ್ಜಾಹೀರಾಗಿದ್ದು, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎನಿಸಿದೆ.
ಮಾ 12ರಂದು ಗುಂಡ್ಲುಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ನಿಯಮ ಮೀರಿ ಸುಮಾರು 4 ಸಾವಿರ ಬೈಕುಗಳು ಭಾಗವಹಿಸಿದ್ದವು.
ರ್ಯಾಲಿಯಲ್ಲಿ ಪ್ರತಿ ಬೈಕ್ ಸವಾರರಿಗೆ ತಲಾ 3 ಲೀಟರಂತೆ ಪೆಟ್ರೋಲ್ನ್ನು ಟೋಕನ್ ಮೂಲಕ ಪಟ್ಟಣದ ಪೆಟ್ರೋಲ್ ಬಂಕ್ವೊಂದರಲ್ಲಿ ವಿತರಣೆ ಮಾಡಲಾಗಿತ್ತು.
ಈ ವಿಚಾರ ಬಹಿರಂಗವಾಗಿದ್ದಲ್ಲದೆ, ಇದಕ್ಕೆ ಸಾಕ್ಷ್ಯಾಧಾರಗಳು ದೊರೆತ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಳಿನ್ ಅತುಲ್ ಅವರ ಸೂಚನೆ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಬಿ.ಎನ್.ಸಂದೀಪ್ಕುಮಾರ್ ಪ್ರಕರಣ ದಾಖಲಿಸಿದ್ದಾರೆ.