ಕಬಿನಿ ನಾಲೆಗೆ ಉರುಳಿದ ಕಾರು: ಇಬ್ಬರು ಸಾವು
ಚಾಮರಾಜನಗರ, ಅಕ್ಟೋಬರ್ 14: ಇನೋವ ಕಾರಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳು ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಪರಿಣಾಮ ಇಬ್ಬರು ನೀರುಪಾಲಾಗಿ, ಓರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಕುದೇರು ಪೊಲೀಸ್ ಠಾಣಾ ವ್ಯಾಪ್ತಿಯ ಕಬಿನಿ ನಾಲೆಯಲ್ಲಿ ನಡೆದಿದೆ.
ಮೈಸೂರು ಮೂಲದ ದರ್ಶನ್, ಕಾರ್ತಿಕ್ ಮೃತಪಟ್ಟಿದ್ದಾರೆ. ಮತ್ತೊಬ್ಬ ದರ್ಶನ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿರುವ ಏಕಲವ್ಯ ತಾಂತ್ರಿಕ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿರುವ ಇವರು ದಸರಾ ರಜೆ ಮುಗಿಸಿ ಕಾಲೇಜಿಗೆ ಬರುತ್ತಿದ್ದರು.[ಬೆಳ್ಳೂರು : ಮೇಲ್ಸೇತುವೆಯಿಂದ ಬಿದ್ದ ಕಾರು, ಇಬ್ಬರು ಸಾವು]
ಮೈಸೂರಿನಿಂದ ಬೆಳಗ್ಗೆ ಇನೋವಾ ಕಾರಿನಲ್ಲಿ ಟಿ.ನರಸೀಪುರ ಮಾರ್ಗವಾಗಿ ಆಲ್ದೂರು ಕಡೆಯಿಂದ ಉಮ್ಮತ್ತೂರು ಏಕಲವ್ಯ ತಾಂತ್ರಿಕ ಕಾಲೇಜಿಗೆ ಬರುತ್ತಿದ್ದರು. ಆಗ ಕಾರು ನಿಯಂತ್ರಣ ತಪ್ಪಿ, ಕಬಿನಿ ನಾಲೆಗೆ ಉರುಳಿದ ಪರಿಣಾಮ ಕಾರ್ತಿಕ್ ಮತ್ತು ದರ್ಶನ್ ನೀರಿನಲ್ಲೇ ಮುಳುಗಿ ಸಾವನ್ನಪ್ಪಿದ್ದಾರೆ.
ಆದರೆ, ಅದೃಷ್ಟವಶಾತ್ ಚಾಲಕನಾಗಿದ್ದ ವಿದ್ಯಾರ್ಥಿ ದರ್ಶನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನನ್ನು ತಿ.ನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.[ಆಟೋಗೆ ಕ್ಯಾಂಟರ್ ಡಿಕ್ಕಿ: ಓರ್ವ ಸಾವು, 8 ಜನರಿಗೆ ಗಾಯ]
ಕಬಿನಿ ನಾಲೆಯಲ್ಲಿ ಇನೋವಾ ಕಾರು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಜನ ಘಟನೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ನಾಲೆಯಲ್ಲಿ ಮುಳುಗಿದ್ದ ಇಬ್ಬರ ಶವವನ್ನು ಹೊರತೆಗೆದಿದ್ದಾರೆ.[ರಸ್ತೆ ಅಪಘಾತ : ಕಲಬುರಗಿ ಲೋಕಾಯುಕ್ತ ಎಸ್ಪಿ ಸಾವು]
ಆ ನಂತರ ಸಂಪೂರ್ಣ ಜಖಂ ಆಗಿದ್ದ ಕಾರನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು. ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.