ಉಪಚುನಾವಣೆ ಹವಾ ಜೋರು, ಬ್ಯಾಂಕ್ ವಹಿವಾಟಿನ ಮೇಲೆ ಹದ್ದಿನಕಣ್ಣು!
ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಭಾರೀ ಮೊತ್ತದ ಹಣ ಹರಿದಾಡಬಹುದು ಎಂಬ ನಿರೀಕ್ಷೆಯಲ್ಲಿ ಚುನಾವಣಾಧಿಕಾರಿ ಬ್ಯಾಂಕ್ ವ್ಯವಹಾರಗಳ ಮೇಲೆ ಕಣ್ಣಿರಿಸಿದ್ದಾರೆ. ಅನುಮಾನ ಮೂಡಿಸುವಂಥ ವ್ಯವಹಾರಗಳನ್ನು ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ
ಚಾಮರಾಜನಗರ, ಮಾರ್ಚ್ 18: ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕೆಂಬ ಹಟಕ್ಕೆ ಬಿದ್ದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅದಕ್ಕೋಸ್ಕರ ತಂತ್ರ-ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಈಗಾಗಲೇ ಮತದಾರರ ಮನೆ ಬಾಗಿಲನ್ನು ತಟ್ಟುತ್ತಿರುವ ರಾಜಕೀಯ ನಾಯಕರು ಭರವಸೆ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಚುನಾವಣೆ ಜಿದ್ದಾಜಿದ್ದಿ ಗಮನಿಸಿದರೆ ಹಣದ ಹೊಳೆಯೇ ಹರಿಯಬಹುದೆಂಬ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಇತ್ತ ಕಣ್ಣಿಟ್ಟಿದ್ದು, ಸುಗಮ ಮತ್ತು ಸುವ್ಯವಸ್ಥಿತವಾಗಿ ಮತದಾನ ನಡೆಸಲು ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಏಕಿಷ್ಟು ಮಹತ್ವ?!]
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದರೂ ಇದುವರೆಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಮತಯಾಚನೆ, ಪ್ರಚಾರ ಕಾರ್ಯಕ್ರಮಗಳನ್ನು ತೊಡಗಿಸಿಕೊಂಡಿದ್ದಾರೆ.
ಈ ನಡುವೆ ಯಾವುದೇ ಚುನಾವಣೆ ಅಕ್ರಮಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುವ ಸಲುವಾಗಿ ಬ್ಯಾಂಕ್ ಗಳಲ್ಲಿ ಅಸಹಜ ಹಾಗೂ ಅನುಮಾನಾಸ್ಪದ ವಹಿವಾಟು ನಡೆಸುವವರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ಬಿ. ರಾಮು ಸೂಚನೆ ನೀಡಿದ್ದಾರೆ.[ಉಪಚುನಾವಣೆ ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ - ಬಿಎಸ್ ವೈ]
ಚುನಾವಣೆ ಅವಧಿಯಲ್ಲಿ ಹೆಚ್ಚಿನ ಹಣದ ವಹಿವಾಟು ನಡೆದರೆ ಅದು ಯಾವ ಉದ್ದೇಶಕ್ಕೆ ನಡೆಯುತ್ತಿದೆ ಎಂಬ ಬಗ್ಗೆ ತಿಳಿಯಬೇಕಿದೆ. ಅಸಹಜ ವಹಿವಾಟು ಚುನಾವಣೆ ಅಕ್ರಮಗಳಿಗೆ ಬಳಕೆಯಾಗಲಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದು, ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಎಚ್ಚರ ವಹಿಸಬೇಕು. ಹೀಗಾಗಿ ನಿತ್ಯದ ಹಣ ವರ್ಗಾವಣೆ, ಜಮೆ, ಹಿಂಪಡೆಯುವಿಕೆ ಮೇಲೆ ನಿಗಾ ವಹಿಸಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬ್ಯಾಂಕ್ ಗಳಿಂದ ನಿತ್ಯ 50 ಸಾವಿರ ರುಪಾಯಿಗಿಂತ ಹೆಚ್ಚಿನ ನಗದು ಹಿಂಪಡೆಯುವ ಮತ್ತು ವರ್ಗಾವಣೆ ಮಾಡುವವರ ವಹಿವಾಟಿನ ಮಾಹಿತಿಯನ್ನು ನೀಡಬೇಕು. ಬ್ಯಾಂಕ್ ಗಳಿಂದ ಮಂಜೂರಾಗಿರುವ ಸಾಲ, ಫಲಾನುಭವಿಗಳಿಗೆ ಮಂಜೂರಾಗಿರುವ ಸವಲತ್ತು ಹಣ ಇನ್ನಿತರ ಕಾರಣಗಳಿಗಾಗಿ ಜಮೆಯಾಗಿದ್ದರೆ ಅಂತಹವುಗಳ ಬಗ್ಗೆ ಮಾಹಿತಿ ಅಗತ್ಯವಿಲ್ಲ.[ನಂಜನಗೂಡು ಉಪಚುನಾವಣೆ: ಕದನ ಕಲಿಗಳಿಗೆ ಪ್ರತಿಷ್ಠೆಯ ಕಣ]
ಚುನಾವಣೆ ಉದ್ದೇಶಕ್ಕಾಗಿ ಮಾಹಿತಿ ಪಡೆಯುತ್ತಿರುವ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು. ವಹಿವಾಟಿನ ಹೆಸರಿನಲ್ಲಿ ಯಾರಿಗೆ ತೊಂದರೆ ಕೊಡುವ ಉದ್ದೇಶ ಇದಲ್ಲ ಎಂದು ಜಿಲ್ಲಾಧಿಕಾರಿ ರಾಮು ಸ್ಪಷ್ಟನೆ ನೀಡಿದ್ದಾರೆ.
ಒಬ್ಬರೇ ವ್ಯಕ್ತಿ ಕಾರಣ ಹಾಗೂ ಸೂಕ್ತ ದಾಖಲೆಗಳನ್ನು ನೀಡದೆ ಪ್ರತಿ ದಿನ ಹೆಚ್ಚು ಹಣ ಪಡೆಯುವುದು, ವರ್ಗಾವಣೆ ಮಾಡುವುದು ಅಥವಾ ಜಮೆ ಮಾಡುವ ಪ್ರಕ್ರಿಯೆ ಕಂಡುಬಂದಲ್ಲಿ ಪರಿಶೀಲಿಸಬೇಕು. ಇದಕ್ಕಾಗಿ ಚುನಾವಣೆಗೆ ನೇಮಕವಾಗಿರುವ ಅಧಿಕಾರಿಗಳು ಸಹ ಹೆಚ್ಚು ಹಣ ವಹಿವಾಟಿನ ಬಗ್ಗೆ ಪರಿಶೀಲಿಸಿ ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದನ್ನು ತಿಳಿಯಲಿದ್ದಾರೆ.