ನಾಗರಹೊಳೆ ಅಭಯಾರಣ್ಯದಲ್ಲಿ ಕಪ್ಪು ಚಿರತೆ ಕಳೇಬರ ಪತ್ತೆ
ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿ ಕಪ್ಪು ಚಿರತೆಯೊಂದರ ಕಳೇಬರ ಪತ್ತೆಯಾಗಿದೆ. ಹುಲಿಯೊಂದರ ಜೊತೆ ಕಾದಾಡಿ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಅನುಮಾನ ಪಟ್ಟಿದ್ದಾರೆ
ಹುಣಸೂರು, ಫೆಬ್ರವರಿ 9: ಅಪರೂಪದ ಕಪ್ಪುಚಿರತೆಯ ಕಳೇಬರ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ವಲಯ ವ್ಯಾಪ್ತಿಯ ಅರಣ್ಯದಲ್ಲಿ ಪತ್ತೆಯಾಗಿದ್ದು, ಹುಲಿಯೊಂದಿಗೆ ಕಾದಾಡಿ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ.
ಸತ್ತಿರುವ ಕಪ್ಪು ಚಿರತೆಯ ತಲೆ ಮೇಲೆ ಗಾಯದ ಗುರುತುಗಳಿವೆ ಹಾಗೂ ಮೂಳೆ ಮುರಿದಿದೆ. ಪಕ್ಕದಲ್ಲಿ ಹುಲಿಯ ಗುರುತು ಇರುವುದರಿಂದಾಗಿ ಹುಲಿಯೊಂದಿಗೆ ಕಾದಾಟವಾಡಿ ಸತ್ತಿರುವ ಬಗ್ಗೆ ಅರಣಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ನಾಗರಹೊಳೆ ಅಭಯಾರಣ್ಯದ ಆನೆ ಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಭಾಗದ ಮಾರಪಾಲಹಳ್ಳದ ಕೆ.ಎಂ.ಕೊಲ್ಲಿ ಬಳಿ ವನ್ಯಜೀವಿ ವಲಯದ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಸಂಜೆ ಸುಮಾರು 5 ಗಂಟೆ ವೇಳೆ 6 ತಿಂಗಳ ಕಪ್ಪು ಚಿರತೆಯ ಕಳೇಬರ ಕಂಡು ಬಂದಿದ್ದು, ಕೂಡಲೇ ಅವರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.[ಜಂಗಲ್ ಡೈರಿ: ಹಬ್ಬಗಳಲ್ಲಿ ಆನೆಗಳೆಂದರೆ ಸಂಭ್ರಮವಲ್ಲ, ಸಂಕಟ]
ವಿಷಯ ತಿಳಿದು ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ಮಣಿಕಂದನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕುಮಾರ್, ಡಾ. ಉಮಾ ಶಂಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜಾ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.[ಬಂಡೀಪುರದಲ್ಲಿ ವಾಹನಕ್ಕೆ ಬಲಿಯಾದ ಜಿಂಕೆ!]
ಬಳಿಕ ವನ್ಯ ಜೀವಿ ವೈದ್ಯ ಉಮಾಶಂಕರ್ ಮರಣೋತ್ತರ ಪರೀಕ್ಷೆ ನಡೆಸಿದರು. ಕಪ್ಪು ಚಿರತೆಯ ಸಾವಿನ ನಿಖರ ಕಾರಣ ತಿಳಿಯಲು ಅಂಗಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದು, ವರದಿ ಬಂದ ಬಳಿಕ ಕಾರಣ ತಿಳಿಯಲಿದೆ ಎಂದು ಅರಣ್ಯ ಇಲಾಖೆ ಮೂಲಗಳು ಹೇಳಿವೆ.