ಬಂಡೀಪುರದಲ್ಲಿ ಹುಲಿ ಹತ್ಯೆ: ಒಬ್ಬನ ಬಂಧನ
ಗುಂಡ್ಲುಪೇಟೆ, ಅಗಸ್ಟ್ 25: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮದ್ದೂರು ಅರಣ್ಯವಲಯದಲ್ಲಿ ಇತ್ತೀಚೆಗೆ ಹುಲಿಯೊಂದನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಅರಣ್ಯಾಧಿಕಾರಿಗಳು ಬೇಟೆಗಾರರ ಪೈಕಿ ಒಬ್ಬನನ್ನು ಗುರುವಾರ ಬಂಧಿಸಿದ್ದಾರೆ.
ಹೊಂಗಳ್ಳಿ ಗ್ರಾಮದ ವೆಂಕಟಶೆಟ್ಟಿ ಬಂಧಿತ ಬೇಟೆಗಾರ. ಈತ ತನ್ನ ಐವರ ತಂಡದವರೊಂದಿಗೆ ಹುಲಿ ಬೇಟೆಯಾಡಲು ತೆರಳಿದ್ದ ಎಂಬ ಗುಪ್ತ ಮಾಹಿತಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೊರೆತಿತ್ತು. ಹೀಗಾಗಿ ವೆಂಕಟಶೆಟ್ಟಿ ಚಲನ ವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ ಹೊಂಗಳ್ಳಿ ಗ್ರಾಮದ ಆತನ ಮನೆಯಲ್ಲಿ ಬಂಧಿಸಲಾಗಿದೆ.[ಮಕ್ಕಳನ್ನು ಗೂಡ್ಸ್ ವಾಹನಕ್ಕೆ ತುಂಬಿದ ಆಯೋಜಕರು!]
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮದ್ದೂರು ಅರಣ್ಯ ವಲಯದ ಬರಗಿ ಶಾಖೆಯ ಹೊಂಗಳ್ಳಿ ಗಸ್ತು ವಲಯದಲ್ಲಿರುವ ಸೋಮೇಗೌಡನಕಟ್ಟೆ ಹಳ್ಳದ ಬಳಿ ಆಗಸ್ಟ್ 14 ರಂದು 11 ರಿಂದ 12 ವರ್ಷ ಪ್ರಾಯದ ಭಾರೀ ಗಾತ್ರದ ಗಂಡು ಹುಲಿಯ ಕಳೇಬರ ಪತ್ತೆಯಾಗಿತ್ತು. ಹೊಂಗಳ್ಳಿ ಗಸ್ತಿನ ದೋಣಿ ಗಲ್ಲಾರೆ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಗೆ ಹುಲಿಯ ಕಳೇಬರ ಉದ್ದೇಶಿತ ಆನೆ ಪಥದ 10 ಮೀಟರ್ ಮತ್ತು ಆನೆ ಪಥ ರಸ್ತೆಯ 50 ಮೀಟರ್ ಅಂತರದಲ್ಲಿ ಹಳ್ಳದ ನೀರಿನಲ್ಲಿ ಗೋಚರಿಸಿತ್ತು.[ಬಂಡೀಪುರದಲ್ಲಿ ಸರಸ-ಸಲ್ಲಾಪದಲ್ಲಿದ್ದ ಪ್ರೇಮಿಗಳ ಮೇಲೆ ಕೇಸು]
ಇದು ಸ್ಥಳೀಯ ಬೇಟೆಗಾರರ ಕೃತ್ಯ ಎಂಬ ಅನುಮಾನ ಅರಣ್ಯಾಧಿಕಾರಿಗಳಿಗೆ ಬಂದಿತ್ತು. ಹೀಗಾಗಿ ಬೇಟೆಗಾರರ ಬಂಧನಕ್ಕೆ ಬಲೆ ಬೀಸಿ, ಮಾಹಿತಿಯನ್ನು ಕಲೆ ಹಾಕಿದ್ದರು. ಇದೀಗ ಬೇಟೆಗಾರ ವೆಂಕಟಶೆಟ್ಟಿ ಸೆರೆ ಸಿಕ್ಕಿದ್ದು, ಆತನ ಸಹಚರರ ಬಂಧನಕ್ಕಾಗಿ ಬಲೆ ಬೀಸಲಾಗಿದೆ.