ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹೊತ್ತಿ ಉರಿಯುತ್ತಿದೆ ಬಂಡೀಪುರ ಅರಣ್ಯ!
ಚಾಮರಾಜನಗರ, ಫೆಬ್ರವರಿ 24: ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಲ್ಕೆರೆ ಅರಣ್ಯ ವಾಪ್ತಿಯಲ್ಲಿ ಇತ್ತೀಚೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಸಿಬ್ಬಂದಿಯೊಬ್ಬರು ಸಜೀವ ದಹನಗೊಂಡು, ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಗೊಂಡ ಘಟನೆ ಇನ್ನೂ ಹಸಿರಿರುವಾಗಲೇ ಹಿಮವದ್ ಗೋಪಾಲಸ್ವಾಮಿ ಬೆಟ್ಟವಲಯ ಪ್ರದೇಶದಲ್ಲಿ ದುಷ್ಕರ್ಮಿಗಳು ಬೆಂಕಿಯಿಟ್ಟಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ.
ದುಷ್ಕರ್ಮಿಗಳು ಸೊಳ್ಳೆಬತ್ತಿಯನ್ನು ಬಳಸಿ ಅರಣ್ಯಕ್ಕೆ ಬೆಂಕಿ ಹಾಕುತ್ತಿದ್ದಾರೆ ಎನ್ನುವುದು ಪತ್ತೆಯಾಗಿದೆ. ಶುಕ್ರವಾರ ಬೆಳಗ್ಗೆ ಏಳರ ಸಮಯದಲ್ಲಿ ಗೋಪಾಲಸ್ವಾಮಿ ಬೆಟ್ಟ ವಲಯದ ಕಣಿವೆ ಮಲ್ಲಪ್ಪನ ದೇವಸ್ಥಾನ ಹಾಗೂ ಆಲೆಸ್ರಿ ಕಟ್ಟೆ ಕಳ್ಳಬೇಟೆ ನಿಗ್ರಹ ಶಿಬಿರದ ಬಳಿ ಬೆಂಕಿ ಕಾಣಿಸಿಕೊಂಡಿತ್ತು.[ಬದುಕು ಬೆಂದು ಹೋಗುವಂತೆ ಮಾಡಿದ ಬಂಡೀಪುರದ ಬೆಂಕಿ ಅನಾಹುತ]
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ನಂದಿಸಲು ಮುಂದಾಗುತ್ತಿದ್ದಂತೆಯೇ ಸುಮಾರು 15 ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರಿಂದ ಅರಣ್ಯ ಸಿಬ್ಬಂದಿ ಸಂಕಷ್ಟಕ್ಕೀಡಾಗುವಂತಾಯಿತು. ಈ ಪ್ರದೇಶಕ್ಕೆ ಅಗ್ನಿಶಾಮಕ ವಾಹನವಾಗಲೀ ನೀರನ್ನು ಕೊಡೊಯ್ಯುವುದು ಸಾಧ್ಯವಾಗದ ಕಾರಣ ಅರಣ್ಯ ಸಿಬ್ಬಂದಿಯೇ ಸೊಪ್ಪಿನಿಂದ ಬೆಂಕಿಯನ್ನು ನಂದಿಸಬೇಕಾಯಿತು.
ಮೇಲಿಂದ ಮೇಲೆ ಅರಣ್ಯಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವುದೋ ಇಲ್ಲ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳುವುದೋ ಎಂಬ ಜಿಜ್ಞಾಸೆಯಲ್ಲಿದ್ದಾರೆ. ಆಗಾಗ, ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಒಣಗಿ ನಿಂತ ಕುರುಚಲು ಕಾಡುಗಳು ಹೊತ್ತಿ ಉರಿಯುತ್ತಿವೆ. ಬೆಂಕಿಯ ಕೆನ್ನಾಲಿಗೆಗೆ ಮರ-ಗಿಡ ಮಾತ್ರವಲ್ಲದೆ, ಸಣ್ಣ-ಪುಟ್ಟ ಪ್ರಾಣಿಗಳು ಸುಟ್ಟು ಕರಕಲಾಗುತ್ತಿವೆ.[ಬಂಡೀಪುರದಲ್ಲಿನ್ನೂ ಆರದ ಬೆಂಕಿ : ಅಪಾರ ಅರಣ್ಯ ಸಂಪತ್ತು ನಾಶ]
ಬೆಂಕಿ ಬಿದ್ದು ಅರಣ್ಯ ನಾಶವಾಗಿರುವುದರಿಂದ ಹೆಚ್ಚಿನ ಪ್ರಾಣಿಗಳು ಬಂಡೀಪುರ ಅರಣ್ಯವನ್ನು ತೊರೆದು ಬೇರೆಡೆಗೆ ತೆರಳುತ್ತಿವೆ. ಕೆಲವು ಪ್ರಾಣಿಗಳು ಕಬಿನಿ ಹಿನ್ನೀರು ಪ್ರದೇಶದತ್ತ ಸಾಗುತ್ತಿವೆ. ಕೆಲವು ಅಸ್ವಸ್ಥಗೊಂಡ ಪ್ರಾಣಿಗಳು ನಡೆಯಲಾರದೆ ಸಾವನ್ನಪ್ಪುತ್ತಿವೆ.
ಇಷ್ಟಕ್ಕೂ ಅರಣ್ಯಕ್ಕೆ ಬೆಂಕಿ ಹಚ್ಚುವುದರಿಂದ ದುಷ್ಕರ್ಮಿಗಳಿಗೇನು ಲಾಭ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ಅರಣ್ಯಾಧಿಕಾರಿಗಳು ತನಿಖಾ ತಂಡವನ್ನು ರಚಿಸಿ, ದುಷ್ಕರ್ಮಿಗಳನ್ನು ಬಂಧಿಸಿದ ಬಳಿಕವಷ್ಟೆ ದುಷ್ಕರ್ಮಿಗಳು ಅರಣ್ಯಕ್ಕೆ ಬೆಂಕಿ ಹಚ್ಚುತ್ತಿರುವುದರ ಹಿಂದಿನ ಉದ್ದೇಶ ಗೊತ್ತಾಗಬೇಕಿದೆ.