ಬದುಕು ಬೆಂದು ಹೋಗುವಂತೆ ಮಾಡಿದ ಬಂಡೀಪುರದ ಬೆಂಕಿ ಅನಾಹುತ
ಬಂಡೀಪುರ ಅರಣ್ಯದಲ್ಲಿ ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಯಿಂದ ಎಕರೆಗಟ್ಟಲೆ ಪ್ರದೇಶದಲ್ಲಿ ಮರಗಳು ಬೆಂಕಿಗಾಹುತಿ ಆಗಿವೆ. ಅಷ್ಟೇ ಅಲ್ಲ, ವನ್ಯಜೀವಿಗಳು ಸಹ ಸಾವನ್ನಪ್ಪಿವೆ. ಒಟ್ಟಿನಲ್ಲಿ ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ
ಚಾಮರಾಜನಗರ, ಫೆಬ್ರವರಿ 20: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಂಡೀಪುರ ಅರಣ್ಯ ಕಲ್ಕೆರೆ ವಲಯದ ಪ್ರದೇಶ ಸುಟ್ಟು ಕರಕಲಾಗಿದ್ದು, ಈ ವ್ಯಾಪ್ತಿಯಲ್ಲಿ ಸೂತಕದ ಛಾಯೆ ಆವರಿಸಿದೆ. ಬೆಂಕಿ ಹತ್ತಿ ಉರಿಯುತ್ತಿದ್ದರೆ ಅದರಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಅಧಿಕಾರಿಗಳನ್ನು ರಕ್ಷಿಸಲು ಹೋದ ಅರಣ್ಯ ಸಿಬ್ಬಂದಿ ಮುರುಗಪ್ಪ ತಾವೇ ಬಲಿಯಾಗಿದ್ದಾರೆ. ಮೂವರು ಗಾಯಗೊಂಡು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಕಿಯ ಕೆನ್ನಾಲಗೆಗೆ ಅರಣ್ಯ ಮಾತ್ರವಲ್ಲ ಪ್ರಾಣಿ, ಪಕ್ಷಿಗಳು ಸುಟ್ಟು ನಾಶವಾಗಿವೆ. ಬೆಂಕಿ ಹಚ್ಚಿದವರು ಯಾರು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದ್ದು, ಆರೋಪಿಗಳ ಪತ್ತೆಗೆ ತನಿಖಾ ಕಾರ್ಯ ಆರಂಭಗೊಂಡಿದೆ. ಅರಣ್ಯ ಇಲಾಖೆ ಮೂಲಗಳ ಪ್ರಕಾರ ಯಾವುದೇ ಮಾರ್ಗದಲ್ಲಿಯೂ ಸುಲಭವಾಗಿ ತಲುಪಲು ಸಾಧ್ಯವಾಗದ ಕಲ್ಕೆರೆ ವಲಯವನ್ನು ಆಯ್ಕೆ ಮಾಡಿಕೊಂಡೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.[ಬಂಡೀಪುರದಲ್ಲಿ ಕಾಳ್ಗಿಚ್ಚು ನಂದಿಸಲು ಹೋದ ಸಿಬ್ಬಂದಿ ಸಜೀವ ದಹನ]
ಇದು ಮರಗಳ್ಳರ ಕೃತ್ಯ ಇರಬಹುದೆಂದು ಹೇಳಲಾಗುತ್ತಿದ್ದರೆ, ಮತ್ತೊಂದೆಡೆ ಅತೃಪ್ತ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂಬ ಸಂಶಯವೂ ಇದೆ. ಕಳೆದ ಕೆಲವು ವರ್ಷಗಳ ಹಿಂದೆ ಬಂಡೀಪುರ ಮತ್ತು ನಾಗರಹೊಳೆ ಅರಣ್ಯಕ್ಕೆ ಕೆಲವರು ಬೆಂಕಿ ಹಾಕಿದ್ದರು.
ಅರಣ್ಯ ಸಿಬ್ಬಂದಿ ಬಲಿಯಾಗಿದ್ದು ಇದೇ ಮೊದಲು
ಈಗ ನಡೆದಿರುವ ಕೃತ್ಯ ಅವಮಾನವೀಯವಾಗಿದ್ದು, ಅರಣ್ಯ ಸಿಬ್ಬಂದಿಯೇ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಲಿಯಾಗಿರುವುದು ಇದೇ ಮೊದಲು. ಬಂಡೀಪುರ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಬೆಂಕಿ ಬೀಳುವುದು ಹೊಸತೇನಲ್ಲ. ಅದರಲ್ಲೂ ಈ ಬಾರಿ ಬರದಿಂದಾಗಿ ಕಾಡನ್ನು ಆವರಿಸಿರುವ ಲಂಟಾನ ಒಣಗಿ ನಿಂತಿರುವುದರಿಂದ ಬೆಂಕಿ ಹೊತ್ತಿ ಉರಿಯುವುದನ್ನು ತಡೆಯುವುದು ಕೂಡ ಅಸಾಧ್ಯ ಎಂಬುದು ಅರಣ್ಯಾಧಿಕಾರಿಗಳಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಇಷ್ಟಕ್ಕೂ ಬೆಂಕಿಯನ್ನು ನಂದಿಸಲು ಸರಕಾರ ಆಧುನಿಕ ತಂತ್ರಜ್ಞಾನವನ್ನು ನೀಡಿಲ್ಲ. ಈಗಲೂ ಬೆಂಕಿಯನ್ನು ಸೊಪ್ಪಿನಿಂದಲೇ ಅರಣ್ಯ ಸಿಬ್ಬಂದಿ ಆರಿಸಬೇಕಿದೆ.
ಅರಣ್ಯ ಇಲಾಖೆ ವ್ಯವಸ್ಥೆ ಮಾಡಬೇಕು
ಅರಣ್ಯದ ಯಾವುದೋ ಒಂದು ಭಾಗದಲ್ಲಿ ಬೆಂಕಿ ಹತ್ತಿಕೊಂಡರೆ ಅಲ್ಲಿಗೆ ಅಗ್ನಿಶಾಮಕದಳ ಹೋಗಿ ಬೆಂಕಿ ನಂದಿಸುವುದು ಅಸಾಧ್ಯದ ಮಾತೇ. ಹೀಗಿರುವಾಗ ಅರಣ್ಯ ಇಲಾಖೆಯೇ ಏನಾದರೊಂದು ವ್ಯವಸ್ಥೆ ಮಾಡಬೇಕಾಗಿದೆ.
ಮನುಷ್ಯರ ವಿಕೃತಿಗೆ ಸಾಕ್ಷಿ
ಕಿಡಿಗೇಡಿಗಳು ಸುಮಾರು 5 ಕಡೆ ಬೆಂಕಿ ಹಚ್ಚಿದ್ದು ಇದಕ್ಕೆ ಗಂಧದ ಕಡ್ಡಿ ಹಾಗೂ ಸೊಳ್ಳೆ ಬತ್ತಿಯನ್ನು ಬಳಸಿ, ಅರಣ್ಯಕ್ಕೆ ಬೆಂಕಿ ಹಚ್ಚಿರುವ ಸಂಶಯವೂ ವ್ಯಕ್ತವಾಗಿದೆ. ಬೆಂಕಿ ಹೊತ್ತಿ ಉರಿದ ಪರಿಣಾಮ ಈಗ ಸುಮಾರು 500 ಎಕರೆಗೂ ಹೆಚ್ಚಿನ ಪ್ರದೇಶವು ಬೆಂಕಿಗಾಹುತಿಯಾಗಿದೆ. ಇಡೀ ಅರಣ್ಯ ಕರಕಲಾಗಿದೆ. ಬೆಂಕಿಯಲ್ಲಿ ಬೆಂದ ಪ್ರಾಣಿಗಳ ಕಮಟುವಾಸನೆ ಮೂಗಿಗೆ ಬಡಿಯುತ್ತಿದೆ. ಬೆಂಕಿಗೆ ಸಿಲುಕಿ ಉರಿದ ಮರ, ಗಿಡಗಳು ಮನುಷ್ಯನ ವಿಕೃತಿಗೆ ಸಾಕ್ಷಿಯಾಗಿ ನಿಂತಿವೆ.
ಸಂಘಟನೆಗಳಿಂದ ಉಪಾಹಾರ ವ್ಯವಸ್ಥೆ
ಆದರೂ ಅರಣ್ಯ ಸಿಬ್ಬಂದಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಇವರ ಕಾರ್ಯಕ್ಕೆ ಅನುಕೂಲವಾಗುವಂತೆ ಕೆಲವು ಸಂಘಟನೆಗಳು ಉಪಾಹಾರ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿವೆ.