ಬಂಡೀಪುರದಲ್ಲಿ ಅಕ್ರಮವಾಗಿ ಹರಿಸಿದ್ದ ವಿದ್ಯುತ್ ಸ್ಪರ್ಶಕ್ಕೆ ಹಸು ಬಲಿ
ಜಮೀನಿನ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಕಾರಣ ಮೇವು ಅರಸಿಹೋದ ಹಸು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಈ ಘಟನೆ ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಮಂಗಲ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ, ಮೇ 24: ಜಮೀನಿನ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಕಾರಣ ಮೇವು ಅರಸಿಹೋದ ಹಸು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಈ ಘಟನೆ ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಮಂಗಲ ಗ್ರಾಮದಲ್ಲಿ ನಡೆದಿದೆ.
ಮಂಗಲ ಗ್ರಾಮದ ನಿವಾಸಿ ತಿಬ್ಬಯ್ಯ ಎಂಬುವರಿಗೆ ಸೇರಿದ ಹಸು ತಂತಿ ಬೇಲಿಗೆ ಹಾಯಿಸಿದ್ದ ಅಕ್ರಮ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಹಸು ಕಳೆದುಕೊಂಡ ರೈತ ತಿಬ್ಬಯ್ಯ ಇದೀಗ ಕಂಗಾಲಾಗಿದ್ದಾರೆ. [ಚಾಮರಾಜನಗರ: ದಕ್ಷ ಅಧಿಕಾರಿ ವರ್ಗಾವಣೆಯಲ್ಲಿ ರಾಜಕೀಯ?]
ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಮಂಗಲ ಗ್ರಾಮದ ತಿಬ್ಬಯ್ಯ ಸಾಕಿದ ಹಸುವನ್ನು ಮೇಯಲು ಬಿಟ್ಟಿದ್ದರು. ಆದರೆ ಅದು ಹಿಂತಿರುಗಿರಲಿಲ್ಲ. ಹೀಗಾಗಿ ಹಸುವನ್ನು ಹುಡುಕಿಕೊಂಡ ತೆರಳಿದ್ದರು. ಈ ವೇಳೆ ಹಸು ಚೆನ್ನೀಕಟ್ಟೆ ಬಳಿ ಕೇರಳ ಮೂಲದ ಬಿಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ಸತ್ತು ಬಿದ್ದಿರುವುದು ಕಂಡುಬಂದಿದೆ.
ಬಿಜು ಎಂಬುವರು ಕಾಡು ಪ್ರಾಣಿಗಳ ಹಾವಳಿ ತಡೆಯಲು ತಂತಿ ಬೇಲಿಗೆ ಅಕ್ರಮ ವಿದ್ಯುತ್ನ್ನು ಹಾಯಿಸಿದ್ದು, ಅದಕ್ಕೆ ಹಸು ಸಿಕ್ಕಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಈ ಕುರಿತು ಗುಂಡ್ಲುಪೇಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.