ಬಂಡೀಪುರ ರಾಷ್ಟ್ರೀಯ ಉದ್ಯಾನದ ಆಕರ್ಷಣೆ ಹುಲಿ 'ಪ್ರಿನ್ಸ್'ಗೆ ಗಾಯ!
ತನ್ನ ಗಡಿ ದಾಟಿ ತೆರಳಿದ ಪ್ರಿನ್ಸ್ ಹುಲಿಗೆ ಮತ್ತೊಂದು ಹುಲಿಯೊಂದಿಗೆ ಕಾದಾಟವಾಗಿ, ಗಾಯವಾಗಿದೆ. ಈ ಪ್ರಿನ್ಸ್ ಬಂಡೀಪುರ ರಾಷ್ಟ್ರೀಯ ಉದ್ಯಾನದ ಪ್ರಮುಖ ಆಕರ್ಷಣೆ. ಈಗ ಕಾದಾಟವಾಗಿರುವುದು ಅದರದೇ ಮರಿ ಮಾದೇಶನೊಂದಿಗೆ ಎಂಬುದು ಸುದ್ದಿ.
ಚಾಮರಾಜನಗರ, ಡಿಸೆಂಬರ್ 28: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಅಡ್ಡಾಡುತ್ತಾ, ಪ್ರವಾಸಿಗರಿಗೆ ಕಾಣಸಿಗುತ್ತಾ ಮೆಚ್ಚುಗೆಗೆ ಪಾತ್ರವಾಗಿದ್ದ ಪ್ರಿನ್ಸ್ ಕಾದಾಟದಲ್ಲಿ ಗಾಯಗೊಂಡ ಬಗ್ಗೆ ವರದಿಯಾಗಿದೆ. ಪ್ರಿನ್ಸ್ ಅನ್ನು ರಾಯಭಾರಿ ಎಂದೇ ಕರೆಯಲಾಗುತ್ತಿದೆ. ಆದರೆ ಈ ಹುಲಿ ತನ್ನ ಗಡಿ ದಾಟಿದ ಹಿನ್ನೆಲೆಯಲ್ಲಿ ಮತ್ತೊಂದು ಹುಲಿ, ಅದರದೇ ಮರಿ ಎಂದು ಹೇಳಲಾಗುವ ಮಾದೇಶನೊಂದಿಗೆ ಕಾದಾಡಿದೆ.
ಇದರಿಂದಾಗಿ ಬಲಿಷ್ಠ ಮಾದೇಶ ತನ್ನ ಜನ್ಮಕ್ಕೆ ಕಾರಣವಾದ ಪ್ರಿನ್ಸ್ ಅನ್ನೇ ಸೋಲಿಸಿದೆ. ಈ ಸಂದರ್ಭದಲ್ಲಿ ನಡೆದ ಕಾದಾಟದಲ್ಲಿ ಪ್ರಿನ್ಸ್ ಹುಲಿಯ ತಲೆಯ ಬಲಭಾಗಕ್ಕೆ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಬಂಡೀಪುರದ ಮಂಗಲ ಮತ್ತು ಮೂಲಾಪುರ ಕೆರೆ ಬಳಿ ಕಳೆದೆರಡು ದಿನಗಳಿಂದ ಪ್ರಿನ್ಸ್ ಹುಲಿ ಮಲಗಿದ್ದನ್ನು ಕಂಡು, ಅದನ್ನು ಗಮನಿಸಿದಾಗ ಕಾದಾಟವಾಡಿದ ವಿಚಾರ ಬೆಳಕಿಗೆ ಬಂದಿದೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]
ಪ್ರಿನ್ಸ್ ಬಗ್ಗೆ ಜನರಿಗೆ ಕುತೂಹಲವಿದ್ದು, ಇದನ್ನು ನೋಡುವುದಕ್ಕಾಗಿಯೇ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದರಿಂದ ಆದಾಯವೂ ಹೆಚ್ಚುತ್ತಿದೆ. ಸದ್ಯ ಗಾಯವಾಗಿದ್ದರೂ ಪ್ರಾಣಕ್ಕೇನೂ ತೊಂದರೆಯಿಲ್ಲ ಎನ್ನಲಾಗುತ್ತಿದೆ. ಆದರೆ ಗಾಯಗೊಂಡಿರುವ ಕಾರಣದಿಂದ ಪ್ರಿನ್ಸ್ ಚಟುವಟಿಕೆಯಿಂದ ದೂರವಾಗಿದ್ದು, ಮಲಗಿ ವಿಶ್ರಾಂತಿ ಪಡೆಯುತ್ತಿದೆ. ಸದಾ ಉತ್ಸಾಹದ ಚಿಲುಮೆಯಾಗಿ ಓಡಾಡಿಕೊಂಡಿದ್ದ ಪ್ರಿನ್ಸ್ ಮೌನಕ್ಕೆ ಜಾರಿರುವುದು ಪ್ರವಾಸಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ.