ಚಾಮರಾಜನಗರದ ಶಿವಪುರ ಗ್ರಾಮದಲ್ಲಿ ವಾನರನಿಗೊಂದು ದೇಗುಲ
ಚಾಮರಾಜನಗರ, ಜುಲೈ 30: ತಾಲೂಕಿನ ಶಿವಪುರ ಗ್ರಾಮದಲ್ಲಿ ಕೋತಿ ಮೃತಪಟ್ಟ ಹಿನ್ನಲೆಯಲ್ಲಿ ನಿರ್ಮಾಣ ಮಾಡಲಾದ ದೇವಾಲಯ ಈಗ ಎಲ್ಲರ ಗಮನಸೆಳೆಯುತ್ತಿದೆ.
ಗ್ರಾಮದಲ್ಲಿ ಕಳೆದ ಮೂರು ತಿಂಗಳ ಹಿಂದೆ ಕೋತಿ ಮರಿಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿತ್ತು. ಮೃತ ಪಟ್ಟ ವಾನರನನ್ನು ಬೀಸಾಡದ ಗ್ರಾಮಸ್ಥರು ಅದನ್ನು ಸಮಾಧಿ ಮಾಡಿ ಅಲ್ಲಿ ಪುಟ್ಟದಾದ ದೇವಾಲಯ ನಿರ್ಮಿಸಿದ್ದು ಅದೀಗ ಉದ್ಘಾಟನೆ ಗೊಂಡಿದೆ.
ಕೋತಿ ಇರುವ ಭಾವಚಿತ್ರವನ್ನು ಹಿಡಿದು ಆಗಮಿಸಿದ ಭಕ್ತರು, ಶ್ರಾವಣ ಮಾಸದ ಮೊದಲ ಶನಿವಾರ ಪೂಜಾ ಕೈಂಕರ್ಯ ನೆರವೇರಿಸಿ ಉದ್ಘಾಟಿಸಿದರು. ಹೀಗಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಶಿವಪುರ ಗ್ರಾಮಸ್ಥರು ಸ್ಥಳೀಯ ಪುರೋಹಿತರನ್ನು ಕಂಡು ವಾನರ ದೇವಾಲಯ ನಿರ್ಮಾಣ ಮಾಡುವ ಬಗ್ಗೆ ಸಲಹೆ ಪಡೆದ ಬಳಿಕ ದೇವಾಲಯ ನಿರ್ಮಾಣ ಮಾಡಲಾಗಿದ್ದು, ಇದರಿಂದ ಗ್ರಾಮಸ್ಥರಿಗೆ ಹನುಮದೇವರು ಒಳ್ಳೆಯದು ಮಾಡುವನು ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.
ಅಂತೂ ಕೋತಿ ಮರಿಗೆ ಗ್ರಾಮಸ್ಥರು ದೇವಾಲಯ ಕಟ್ಟಿಸಿ ದಿನಾಲೂ ಪೂಜಿಸುವ ಮೂಲಕ ಪ್ರಾಣಿಗಳಿಗೆ ದೈವ ಮಹತ್ವ ನೀಡಿದ್ದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರೆ ತಪ್ಪಾಗಲಾರದು.