ಬ್ಯಾಂಕ್ ಎಟಿಎಂನಲ್ಲಿ ವಂಚನೆ ನಡೆದಾಗ ಹೀಗೆ ಮಾಡಿ...
ಬೆಂಗಳೂರು, ಜ. 29: ಎಟಿಎಂ ಕೇಂದ್ರದಲ್ಲಿ 500 ರು. ನೋಟಿನ ಮಧ್ಯೆ 100 ರು. ನೋಟು ಬರುತ್ತಿವೆ. ಈ ಕುರಿತು ಬ್ಯಾಂಕ್ಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಗ್ರಾಹಕರಿಗೆ ವಂಚನೆಯಾಗುತ್ತಿದ್ದರೂ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಹಲವರು 'ಒನ್ಇಂಡಿಯಾ ಕನ್ನಡ'ವನ್ನು ಸಂಪರ್ಕಿಸಿ ದೂರು ನೀಡಿದ್ದರು.
ಈ ದೂರನ್ನು ಹಿಂಬಾಲಿಸಿ ಒನ್ಇಂಡಿಯಾ ಕನ್ನಡ ರಿಯಾಲಿಟಿ ಚೆಕ್ಗೆಂದು ಇಳಿದಾಗ ಎಟಿಎಂ ಕೇಂದ್ರದ ಬಹುದೊಡ್ಡ ಲೋಪ ಬಯಲಾಗಿದೆ. ದುರದೃಷ್ಟವೆಂದರೆ ಈ ಲೋಪದ ಕಾರಣ ಗ್ರಾಹಕರಿಗೆ ಆಗುತ್ತಿರುವ ವಂಚನೆಯನ್ನು ಸಾಬೀತುಪಡಿಸುವುದು ಸಾಧ್ಯವೇ ಇಲ್ಲ. ವಂಚನೆಗೊಂಡ ಗ್ರಾಹಕರು ಹಣ ಕಳೆದುಕೊಳ್ಳುವುದು ಗ್ಯಾರಂಟಿ. [ಎಟಿಎಂ ಕೇಂದ್ರದಲ್ಲಿ ಗ್ರಾಹಕರಿಗೆ ಇದೆಂಥಾ ವಂಚನೆ]
ಸಮಸ್ಯೆಯೇನು? : ಎಟಿಎಂ ಕೇಂದ್ರದಲ್ಲಿ ನಡೆಯುತ್ತಿರುವ ವಂಚನೆ ಕುರಿತು ಹೆಸರು ಹೇಳಲಿಚ್ಛಿಸದ ಬ್ಯಾಂಕ್ ವ್ಯವಸ್ಥಾಪಕರೊಬ್ಬರನ್ನು ಭೇಟಿಯಾಗಿ ಪ್ರಶ್ನಿಸಿದಾಗ ವಂಚನೆ ನಡೆಯುವ ರೀತಿಯನ್ನು ಅವರು ವಿವರಿಸಿದ್ದಾರೆ. ಒಂದು ವೇಳೆ ಬ್ಯಾಂಕ್ನಿಂದ ಪರಿಹಾರ ಸಿಗದಿದ್ದರೆ ಏನು ಮಾಡಬೇಕು ಎಂಬುದನ್ನೂ ತಿಳಿಸಿದ್ದಾರೆ. [100 ರು. ಕೇಳಿದ್ರೆ 500 ರು. ಕೊಡುತ್ತೆ]
ಎಟಿಎಂ ನೋಟಿನ ಸಂಖ್ಯೆ ಎಣಿಸುತ್ತೆ
ಎಟಿಎಂ ಯಂತ್ರದಲ್ಲಿ ಹಣ ಹಾಕಲು ವಿಶೇಷ ಕ್ಯಾಬಿನ್ಗಳಿರುತ್ತವೆ. 100, 500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ಬೇರೆ ಬೇರೆ ಕ್ಯಾಬಿನ್ಗೆ ಹಾಕಿರಲಾಗುತ್ತದೆ. ನಿಗದಿತ ಕ್ಯಾಬಿನ್ನಲ್ಲಿರುವ ನೋಟುಗಳನ್ನು ಎಣಿಸಿ, ನೋಟುಗಳ ಸಂಖ್ಯೆಯ ಆಧಾರದ ಮೇಲೆ ಹಣದ ಮೊತ್ತವನ್ನು ಲೆಕ್ಕಹಾಕುವುದು ಎಟಿಎಂ ಯಂತ್ರದ ಕಾರ್ಯವಿಧಾನ.
ಎಟಿಎಂ ಯಂತ್ರದ ದೊಡ್ಡ ಲೋಪ
ಎಟಿಎಂ ಯಂತ್ರದ ಹಣ ಕೊಡುವಾಗ ನೋಟಿನ ಸಂಖ್ಯೆ ಎಣಿಸುತ್ತದೆಯೇ ವಿನಃ ಪರೀಕ್ಷಿಸುವುದಿಲ್ಲ. ಇದು ಎಟಿಎಂ ಯಂತ್ರದ ಪ್ರಮುಖ ಲೋಪದೋಷ. ಈ ಲೋಪವೇ ವಂಚನೆಗೆ ಹೆಚ್ಚು ಕಾರಣವಾಗುತ್ತಿದೆ.
ಶಾಖೆಗೆ ಹೊಂದಿಕೊಂಡ ಎಟಿಎಂನಲ್ಲಿ ಹಣ ಪಡೆಯಿರಿ
ಎಟಿಎಂ ಕೇಂದ್ರದಲ್ಲಿ ಹಣ ಹಾಕುವ ಪ್ರಕ್ರಿಯೆ ಕೆಲವು ಬ್ಯಾಂಕ್ಗಳಲ್ಲಿ ಕೆಲವು ರೀತಿ ಇರುತ್ತದೆ. ಕೆಲವು ಬ್ಯಾಂಕ್ನಲ್ಲಿ ಸಾಮಾನ್ಯವಾಗಿ ಬ್ಯಾಂಕ್ ಶಾಖೆಗೆ ಹೊಂದಿಕೊಂಡಿರುವ ಎಟಿಎಂ ಕೇಂದ್ರಕ್ಕೆ ಬ್ಯಾಂಕ್ನವರೇ ಹಣ ಹಾಕುತ್ತಾರೆ. ಈ ಸಂದರ್ಭ ಹಲವರು ನೋಟುಗಳನ್ನು ಲೆಕ್ಕ ಮಾಡುವ ಕಾರಣ ವಂಚನೆ ನಡೆಯುವುದಿಲ್ಲ. ಆದ್ದರಿಂದ ಬ್ಯಾಂಕ್ ಶಾಖೆಗೆ ಹೊಂದಿಕೊಂಡಿರುವ ಎಟಿಎಂ ಕೇಂದ್ರದಲ್ಲಿ ಹಣ ಪಡೆಯಿರಿ.
ವಂಚನೆ ಸಾಬೀತು ಕಷ್ಟಸಾಧ್ಯ
ಬ್ಯಾಂಕ್ ಶಾಖೆಗೆ ಹೊಂದಿಕೊಂಡಿರದೇ ದೂರದಲ್ಲಿರುವ ಹಲವು ಎಟಿಎಂ ಕೇಂದ್ರಗಳಿಗೆ ಔಟ್ ಸೋರ್ಸ್ ಮೂಲಕ ಹಣ ಹಾಕಲಾಗುತ್ತದೆ. ಇಂತಹ ಹಲವು ಎಟಿಎಂ ಕೇಂದ್ರಗಳಲ್ಲಿ ವಂಚನೆ ನಡೆದ ಕುರಿತು ದೂರು ಬಂದಿವೆ. ಆದರೆ, ಸಾಬೀತು ಮಾಡುವುದು ಸಾಧ್ಯವಿಲ್ಲ.
ಇಲ್ಲಿ ವಂಚನೆ ನಡೆಯುವ ಸಂಭವನೀಯತೆ ಹೆಚ್ಚು
ಇನ್ನು ಹಲವು ಬ್ಯಾಂಕ್ಗಳಲ್ಲಿ ಎಲ್ಲ ಎಟಿಎಂ ಕೇಂದ್ರಗಳಿಗೂ ಹಣ ಹಾಕುವುದು ಔಟ್ಸೋರ್ಸ್ನವರದ್ದೇ ಕೆಲಸ. ಇಂತಹ ಸಂದರ್ಭ ವಂಚನೆ ನಡೆಯುವ ಸಂಭವನೀಯತೆ ಹೆಚ್ಚಾಗಿರುತ್ತದೆ.
ಯಾರಿಗೂ ತಿಳಿಯುವುದಿಲ್ಲ
ಬ್ಯಾಂಕ್ಗಳಲ್ಲಿರುವ ಎಟಿಎಂ ಕೇಂದ್ರಗಳಿಗೆ ಹಣ ಹಾಕುವವರು ಕೈಚಳಕ ತೋರುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಅವರು 500 ರು. ನೋಟುಗಳಲ್ಲಿ ಒಂದು ನೋಟು ತೆಗೆದು ಆ ಜಾಗದಲ್ಲಿ 100 ರು. ನೋಟು ಇಟ್ಟರೆ ಯಾರಿಗೂ ತಿಳಿಯುವುದಿಲ್ಲ.
ಬ್ಯಾಂಕ್ ಯೋಚಿಸುವುದು ಹೀಗೆ
ಬ್ಯಾಂಕ್ ಪ್ರಕಾರ ವ್ಯವಹಾರ ಸರಿಯಾಗಿ ಆಗಿರುತ್ತದೆ. ಲೆಕ್ಕವೂ ಸರಿಯಾಗಿ ಬಂದಿರುತ್ತದೆ. ಆದ್ದರಿಂದ ಗ್ರಾಹಕರು ತಮಗಾದ ವಂಚನೆಯನ್ನು ಸಾಬೀತು ಮಾಡುವುದು ಕಷ್ಟಸಾಧ್ಯ. ತಮಗೆ ವಂಚನೆ ಆಗಿದೆ ಎಂದ ಗ್ರಾಹಕರೇ ಹಣ ಹೊಡೆಯಲು ಚಾಲಾಕಿತನ ತೋರಿರಬಹುದು. ಈ ನಿಟ್ಟಿನಲ್ಲಿಯೇ ಬ್ಯಾಂಕ್ಗಳು ಹೆಚ್ಚು ಯೋಚಿಸುತ್ತವೆ.
ಒಮ್ಮೆ ನಡೆದಲ್ಲಿ ಮತ್ತೆ ನಡೆಯಲ್ಲ
ಇಂತಹ ಹಲವು ದೂರುಗಳಲ್ಲಿ ಕಂಡುಬಂದಿರುವ ಸಾಮಾನ್ಯ ಅಂಶಗಳಿವೆ! ಇಂತಹ ವಂಚನೆ ನಡೆದ ಎಟಿಎಂ ಕೇಂದ್ರದಲ್ಲಿ ಮತ್ತೆ ಹಲವು ದಿನಗಳವರೆಗೆ ವಂಚನೆ ನಡೆದ ಪ್ರಕರಣ ಕಂಡುಬರುವುದಿಲ್ಲ.
ಮುನ್ನೆಚ್ಚರಿಕೆ ವಹಿಸಿರುತ್ತಾರೆ
ಒಂದು ಕ್ಯಾಬಿನ್ನಲ್ಲಿ ಹಣದ ಮಧ್ಯೆ ಒಮ್ಮೆ ಮಾತ್ರ ಕಡಿಮೆ ಮುಖಬೆಲೆಯ ನೋಟು ಇಟ್ಟಿರಲಾಗುತ್ತದೆ. ಓರ್ವ ಗ್ರಾಹಕನಿಗೆ ಆದ ಸಮಸ್ಯೆ ಮತ್ತೋರ್ವನಿಗೆ ಅದೇ ಸಂದರ್ಭದಲ್ಲಿ ಆಗುವುದಿಲ್ಲ. ಹೀಗಾದರೆ ವಂಚನೆ ಸಾಬೀತಾಗುವ ಭೀತಿಯಿರುವ ಕಾರಣ ವಂಚನೆಕಾರರು ಮುನ್ನೆಚ್ಚರಿಕೆ ವಹಿಸಿರುತ್ತಾರೆ.
ಬ್ಯಾಂಕ್ಗೆ ಹೋಗಿ ಲಿಖಿತ ದೂರು ನೀಡಿ
ಹೀಗೆ ವಂಚನೆಗೊಳಗಾದ ಗ್ರಾಹಕರು ಮೊದಲು ಬ್ಯಾಂಕ್ಗೆ ತೆರಳಿ ಲಿಖಿತ ದೂರು ನೀಡಬೇಕು. ಒಂದು ವೇಳೆ ಬ್ಯಾಂಕ್ ಈ ದೂರನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನೋಡಲ್ ಅಧಿಕಾರಿಗೆ ಇಮೇಲ್ ಮಾಡಬೇಕು.
ಗ್ರಾಹಕರ ನ್ಯಾಯಾಲಯ ಕೊನೆಯ ಆಶಾಕಿರಣ
ಆ ನಂತರವೂ ಪರಿಹಾರ ಸಿಗದಿದ್ದರೆ ಗ್ರಾಹಕರ ನ್ಯಾಯಾಲಯಕ್ಕೆ ಹೋಗುವುದು ಅನಿವಾರ್ಯವಾಗಿರುತ್ತದೆ. ನೆನಪಿಡಿ ಈ ಎಲ್ಲ ಸಂದರ್ಭದಲ್ಲಿ ನೀವು ಮಾಡಿದ ವ್ಯವಹಾರದ ರಿಸಿಟ್ ಹಾಗೂ ಈ ಕುರಿತು ಮೊಬೈಲ್ಗೆ ಬಂದ ದೃಢೀಕರಣ ಸಂದೇಶ ಮುಖ್ಯವಾಗಿರುತ್ತದೆ. ಏಕೆಂದರೆ ಇದರಲ್ಲಿ ವ್ಯವಹಾರದ ಕೋಡ್ ದಾಖಲಾಗಿರುತ್ತದೆ.