ಕಪ್ಪು ಹಣ ಬದಲಿಸುವವರ ಜಾಲದಲ್ಲಿ ಸಿಲುಕೀರಿ ಜೋಕೆ!
ಕೇಂದ್ರ ಸರಕಾರ ಈಗ ಚಾಪೆ ಹಾಸಿ, ಕಪ್ಪು ಹಣದವರನ್ನು ಬಲಿ ಹಾಕಲು ಯತ್ನಿಸುತ್ತಿದೆ. ಆದರೆ ಅಂಥವರು ರಂಗೋಲಿ ಕೆಳಗೆ ತೂರಬಹುದು ಅಲ್ಲವೆ?
ಬೆಂಗಳೂರು, ನವೆಂಬರ್ 9: ಐನೂರು, ಸಾವಿರ ರುಪಾಯಿ ನೋಟುಗಳನ್ನು ರದ್ದು ಮಾಡಿರುವ ನಿರ್ಧಾರ ಸ್ವಾಗತಕ್ಕೆ ಅರ್ಹವಾಗಿದೆ. ಇಂಥ ಸನ್ನಿವೇಶದಲ್ಲಿ ಕಪ್ಪು ಹಣ ಇರುವವರು ಯಾವ ದಾರಿಗಳನ್ನು ಅನುಸರಿಸಬಹುದು? ಈ ವಿಚಾರದಲ್ಲಿ ಜನ ಸಾಮಾನ್ಯರು ಸರಕಾರಕ್ಕೆ ಹೇಗೆ ನೆರವಾಗಬಹುದು ಎಂದು ತಿಳಿಸುವ ಪ್ರಯತ್ನವೇ ಇದು.
ನಿಮ್ಮ ಹತ್ತಿರ ಇರುವ ನೂರು ರುಪಾಯಿಗೆ ನೂರಿಪ್ಪತ್ತು ರುಪಾಯಿ ಕೊಡ್ತೀವಿ ಅಂದರೆ ನೀವೇನು ಮಾಡ್ತೀರಿ. ಈ ಸನ್ನಿವೇಶದಲ್ಲಿ ಅಂಥ ದಂಧೆ ಅರಂಭವಾಗುವ ಎಲ್ಲ ಸೂಚನೆ ಇದೆ. ಎರಡು ಲಕ್ಷ ರುಪಾಯಿ ಮೇಲ್ಪಟ್ಟ ವಹಿವಾಟಿನ ಮೇಲಷ್ಟೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತದೆ. 1,99,000 ರುಪಾಯಿ ವರೆಗೆ ಅಲ್ಲ. ಆದ್ದರಿಂದ ಹೆಚ್ಚಿನ ಹಣ ನೀಡಿ, ತಮ್ಮ ಕಪ್ಪು ಹಣವನ್ನು ಬದಲಿಸಿಕೊಳ್ಳುವ ಅವಕಾಶ ಇದೆ.[ಸರ್ಜಿಕಲ್ ಸ್ಟ್ರೈಕ್ ಅಂದ್ರೆ... ಹಿಂಗಿರಬೇಕು! ಸೂಪರ್!]
ಅದು ಹೇಗೆಂದರೆ, ನೀವು ಗಮನಿಸಿರಬಹುದು. ಕೆಲ ಹೋಟೆಲ್ ಗಳಲ್ಲಿ ಚಿಲ್ಲರೆ ಹಣ ನೀಡಿದರೆ ನಾವು ಶೇ 10ರಷ್ಟು ಕಮಿಷನ್ ಕೊಡ್ತೀವಿ ಅಂತ ಬೋರ್ಡ್ ಹಾಕಿರ್ತಾರೆ. ಅದೇ ರೀತಿ ನಿಮ್ಮ ಬಳಿಯಿರುವ ಹಣಕ್ಕೆ ಹೆಚ್ಚುವರಿ ಹಣ ನೀಡುವ ಆಮಿಷ ತೋರಿಸಿ, ತಮ್ಮ ಕಪ್ಪು ಹಣದ ಬಣ್ಣ ಬದಲಿಸಿಕೊಳ್ಳಲು ಯತ್ನಿಸಬಹುದು.
ಇನ್ನು ದೊಡ್ಡ ಮೊತ್ತದ ಇನ್ಷೂರೆನ್ಸ್ ಹಣ, ನಿವೃತ್ತಿಯಾದ ನಂತರ ಬರುವ ದೊಡ್ಡ ಮೊತ್ತ, ಮನೆ ಮಾರಿದ ಹಣ ಬಂದಿದ್ದರೆ ಅಂಥವರನ್ನೇ ಹುಡುಕಿ ಅಥವಾ ಏಜೆಂಟರ ಮೂಲಕ ಗುರುತಿಸಿ, ಹೆಚ್ಚಿನ ಹಣದ ಆಸೆ ತೋರಿಸಿ ಕಪ್ಪು ಹಣದ ಬದಲಾವಣೆ ಮಾಡಿಕೊಳ್ಳುವ ಚಾಣಾಕ್ಷತನ ತೋರಿಸಬಹುದು.
ನಿಮಗೆ ಬಂದ ಇಂಥ ಹಣಕ್ಕೆ ಅಧಿಕೃತ ದಾಖಲೆ ಇರುತ್ತದೆ. ಅದನ್ನು ಖರೀದಿಸಿ, ಉದಾಹರಣೆಗೆ ಎನ್ ಎಸ್ ಸಿ ಸರ್ಟಿಫಿಕೇಟ್. ಸ್ವಲ್ಪ ಹೆಚ್ಚಿನ ಮೊತ್ತ ನೀಡಿ, ನಿಮ್ಮಿಂದ ಆ ಸರ್ಟಿಫಿಕೇಟ್ ಖರೀದಿಸಬಹುದು. ಇನ್ನು ನಿವೃತ್ತಿ ನಂತರ ಬಂದ ಹಣವನ್ನು ಸಾಲದ ರೂಪದಲ್ಲಿ ಪಡೆದಂತೆ ದಾಖಲೆ ಸೃಷ್ಟಿಸಬಹುದು.[ಹಳೇ 500, 1,000 ರುಪಾಯಿ ನೋಟು ಏನು ಮಾಡೋದು: ಪ್ರಶ್ನೋತ್ತರಗಳು..]
ಅಧಿಕೃತ ಗುರುತಿನ ಚೀಟಿಯ ದಾಖಲೆಯಿರುವ, ಮಧ್ಯಮ ವರ್ಗದವರನ್ನೇ ಹುಡುಕಿ, ಅಂಥವರ ಹೆಸರಿನಲ್ಲಿ ಹಣ ಪಡೆಯುವ ಪ್ರಯತ್ನ ಮಾಡಬಹುದು. ಅಂಥ ವ್ಯಕ್ತಿಗೆ ಒಂದು ವ್ಯವಹಾರಕ್ಕೆ ಸಾವಿರವೋ ಐನೂರೋ ನೀಡಿ, ತಮ್ಮ ಬಳಿಯ ಹಣವನ್ನು ಆತ ಅಥವಾ ಆಕೆ ಮೂಲಕ ಅಧಿಕೃತ ಮಾಡಿಕೊಳ್ಳುವುದು.
ಇನ್ನು ನಿಮ್ಮ ಬಳಿ ಚಿನ್ನದ ನಾಣ್ಯವೋ ಅಥವಾ ಆಭರಣವೋ ಇದ್ದು, ಇಂದಿನ ಮಾರುಕಟ್ಟೆ ದರಕ್ಕಿಂತ ಗ್ರಾಮ್ ಗೆ ಮೂನ್ನೂರೋ ನಾನೂರು ಹೆಚ್ಚು ಮೊತ್ತ ನೀಡಿ ಖರೀದಿಸಬಹುದು. ಎರಡು ಲಕ್ಷದ ಮಿತಿಯಂತೂ ಇದ್ದೇ ಇದೆ. ಅದನ್ನೇ ಮುಂದು ಮಾಡಿಕೊಂಡು ಕಪ್ಪು ಹಣವನ್ನು ಚಿನ್ನವಾಗಿ ಪರಿವರ್ತಿಸಿಕೊಳ್ಳುವ ಅವಕಾಶ ಇದೆ.[ನಕಲಿ ನೋಟು ಜಾಲ ಮಟ್ಟಹಾಕಿದ ನರೇಂದ್ರ ಮೋದಿ]
ಇನ್ನು ಕೆಲವು ಆದಾಯಗಳಿಗೆ ಭಾರತದಲ್ಲಿ ತೆರಿಗೆ ಇಲ್ಲ. ಮತ್ತು ಒಂದು ರಾಜ್ಯದ ಜನರಿಗೆ ತೆರಿಗೆ ಹಾಕುವುದಿಲ್ಲ. ಆ ರೀತಿ ಅದಾಯಕ್ಕೆ ತೆರಿಗೆ ಇಲ್ಲದ ಮೂಲವನ್ನೇ ಹುಡುಕಿ, ತಮ್ಮ ಹಣವನ್ನು ಬದಲಿಸಿಕೊಳ್ಳುವ ದಾರಿ ಹುಡುಕಿಕೊಳ್ಳಬಹುದು. ಕೇಂದ್ರ ಸರಕಾರ ಈಗ ಚಾಪೆ ಹಾಸಿ, ಕಪ್ಪು ಹಣದವರನ್ನು ಬಲಿ ಹಾಕಲು ಯತ್ನಿಸುತ್ತಿದೆ. ಆದರೆ ಅಂಥವರು ರಂಗೋಲಿ ಕೆಳಗೆ ತೂರಬಹುದು ಅಲ್ಲವೆ?
ಆದ್ದರಿಂದ ಇಂಥ ಘನವಾದ ಉದ್ದೇಶ ಇಟ್ಟುಕೊಂಡು ಮಾಡಿರುವ ಕೆಲಸ ಹುಸಿ ಹೋಗುವುದು ಬೇಡ. ಸಣ್ಣ-ಪುಟ್ಟ ಆಮಿಷಗಳಿಗೆ ಬಲಿಯಾಗಬೇಡಿ. ಅಂಥವರು ಕಂಡುಬಂದರೆ ಸಂಬಂಧಪಟ್ಟವರಿಗೆ ದೂರು ನೀಡಿ.