ಹಳೆ ನೋಟುಗಳ ನಿಷೇಧ ಫೋನ್ ಕೊಳ್ಳುವವರಿಗೆ ವರದಾನ
ನೋಟು ನಿಷೇಧ ಪರಿಣಾಮ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿಗೂ ತೊಂದರೆಯುಂಟುಮಾಡುತ್ತಿದ್ದು, ಗ್ರಾಹಕರನ್ನು ಸೆಳೆಯಲು ಮೊಬೈಲ್ ವ್ಯಾಪಾರಿಗಳು ವಿಶೇಷ ಕೊಡುಗೆಗಳನ್ನು ಪರಿಚಯಿಸುತ್ತಿದ್ದಾರೆ.
ಬೆಂಗಳೂರು, ನವೆಂಬರ್,14: ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರ ಕ್ರಮ ಮೊಬೈಲ್ ಫೋನ್ ಕೊಳ್ಳುವವರಿಗೆ ಈಗ ವರದಾನವಾಗಿದೆ.
ನೋಟುಗಳ ನಿಷೇಧದಿಂದ ಹಣ ವಿನಿಮಯ ಮಾಡಿಕೊಳ್ಳುವುದರಲ್ಲೇ ಜನರ ಸಮಯ ಕಳೆದುಹೋಗುತ್ತಿದೆ. ಅದು ಕೂಡ ದಿನವೊಂದಕ್ಕೆ ಕೇವಲ 4500ರೂ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶವಿರುವುದರಿಂದ ಜನರ ಕಿಸೆಗಳಲ್ಲಿ ದಿನನಿತ್ಯದ ಖರ್ಚಿಗೆ ಆಗುವಷ್ಟು ಬಿಟ್ಟರೆ ವ್ಯಾಪಾರ ವಹಿವಾಟು ನಡೆಸುವಷ್ಟು ಹಣವಿಲ್ಲ.
ನೋಟು ನಿಷೇಧದಿಂದ ಎಲ್ಲಾ ಬಗೆಯ ವ್ಯಾಪರಗಳ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಸಣ್ಣ ವ್ಯಾಪರಿಗಳನ್ನು ಚಿಲ್ಲರೆ ಸಮಸ್ಯೆ ಕಾಡುತ್ತಿದ್ದರೆ. ದೊಡ್ಡ ವ್ಯಾಪಾರಿಗಳಿಗೆ ಹಣದ ಕೊರತೆ ಕಾಡುತ್ತಿದೆ.
ಇನ್ನು ಎಲೆಕ್ಟ್ರಾನಿಕ್ ಪರಿಕರಗಳ ವ್ಯಾಪರದ ಮೇಲೂ ನೋಟು ನಿಷೇಧ ಕ್ರಮ ಗಂಭೀರ ಪರಿಣಾಮ ಬೀರಿದ್ದು, ಗ್ರಾಹಕರನ್ನು ಸೆಳೆಯುವುದಕ್ಕಾಗಿ ಹಲವು ಮೊಬೈಲ್ ಫೋನ್ ಕಂಪೆನಿಗಳು ಮತ್ತು ಡೀಲರ್ ಗಳು ಜೀರೋ ಡೌನ್ ಪೇಮೆಂಟ್ ನಲ್ಲೇ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಬೆಂಗಳೂರು ಮೂಲದ ಸಂಗೀತ ಮೊಬೈಲ್ ಷೋರೂಂ ಸಹ ಜೀರೋ ಡೌನ್ ಪೇಮೆಂಟ್ ನಲ್ಲಿ ಮೊಬೈಲ್ ವಿಕ್ರಯ ಮಾಡಲು ಮುಂದಾಗಿದೆ.
ಶನಿವಾರದಿಂದಲೇ ನಾವು ಶೂನ್ಯ ಠೇವಣಿಗೆ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದೇವೆ. 12ತಿಂಗಳಲ್ಲಿ ಕಂತಿನ ಮೂಲಕ ಹಣ ಪಾವತಿಸಿದರೆ ಸಾಕು ಎಂದು ಗ್ರಾಹಕರಿಗೆ ಕೊಡುಗೆ ನೀಡುತ್ತಿದ್ದೇವೆ. ಎಂದು ಸಂಗೀತ ಮೊಬೈಲ್ಸ್ ನ ನಿರ್ವಾಹಕ ನಿರ್ದೇಶಕ ಶುಭಾಷ್ ಚಂದ್ರ ತಿಳಿಸಿದ್ದಾರೆ.
ನೋಟು ನಿಷೇಧಕ್ಕೂ ಮುಂಚೆ ಹಲವು ಕಂಪೆನಿಗಳು ಮೊಬೈಲ್ ಫೋನ್ ಗಳನ್ನು ವಸ್ತುವಿನ ದರದ ಸ್ವಲ್ಪ ಭಾಗವನ್ನು ಮುಂಗಡ ಠೇವಣಿಯಾಗಿ ಇರಿಸಿಕೊಂಡು ಉಳಿದ ಹಣವನ್ನು ಕಂತಿನ ರೂಪದಲ್ಲಿ ಪಾವತಿಸಲು ಅವಕಾಶ ಕಲ್ಪಿಸುತ್ತಿದ್ದರು.
ಆದರೆ ನೋಟು ನಿಷೇಧ ಜಾರಿಯಾದ ನಂತರ ಮೊಬೈಲ್ ಕೊಳ್ಳುವ ಗ್ರಾಹಕರಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.
ಎಲೆಕ್ಞ್ಟಾನಿಕ್ ವಸ್ತುಗಳ ಕೊಳ್ಳುವಿಕೆಯಲ್ಲೂ ಸಹ ಗಣನೀಯವಾಗಿ ಇಳಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ವಿಶ್ಲೇಷಕರ ಪ್ರಕಾರ ಈ ಸಮಸ್ಯೆ ಇನ್ನು ಕೆಲವು ವಾರ ಅಥವಾ ದಿನಗಳು ಹೀಗೆ ಮುಂದುವರೆಯಲಿದೆ.
ವ್ಯಾಪಾರ ವೃದ್ಧಿಸಿಕೊಳ್ಳುವುದಕ್ಕಾಗಿ ಈಗಾಗಲೇ ಹಲವು ಮಂದಿ ರಿಟೇಲರ್ ಗಳು ಹೊಸ ಹೊಸ ಕೊಡುಗೆಗಳನ್ನು ಜನರಿಗೆ ಪರಿಚಯಿಸುತ್ತಿದ್ದಾರೆ. ಕೊಡುಗೆಗಳನ್ನೂ ನೋಡಿ ಆದರೂ ಗ್ರಾಹಕರು ಅಂಗಡಿಗಳತ್ತ ಧಾವಿಸುತ್ತಾರೆ ಎಂಬುದು ಮೊಬೈಲ್ ವ್ಯಾಪಾರಿಗಳ ಆಸೆ.