ವೃದ್ಧರಿಗೆ, ಅಂಗವಿಕಲರಿಗೆ ಪ್ರತ್ಯೇಕ ಸರತಿ, ಬ್ಯಾಂಕ್ಗಳಿಗೆ ಆದೇಶ
ನಾಲ್ಕು ದಿನದ ಅವಧಿಯಲ್ಲಿ ದೇಶದ ನಾನಾ ಬ್ಯಾಂಕ್ ಗಳಲ್ಲಿ ಇಪ್ಪತ್ತೊಂದು ಕೋಟಿ ಟ್ರಾನ್ಸಾಕ್ಷನ್ ಆಗಿವೆ. ಇದೀಗ ಹೊಸ ಐನೂರು ರುಪಾಯಿ ನೋಟು ಕೂಡ ಚಲಾವಣೆಗೆ ಬಂದಿದ್ದು, ಒತ್ತಡ ಕಡಿಮೆ ಮಾಡುವುದಕ್ಕೆ ಕೂಡ ಸರಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
ಬೆಂಗಳೂರು, ನವೆಂಬರ್ 14: ನವೆಂಬರ್ 10ರಿಂದ 13ರ (ಸಂಜೆ 5ರ ವರೆಗೆ) ಮಧ್ಯೆ 3 ಲಕ್ಷ ಕೋಟಿ ರುಪಾಯಿಯಷ್ಟು ಹಳೇ 500, 1000 ರುಪಾಯಿ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮೆ ಮಾಡಲಾಗಿದೆ. ಇನ್ನು ಬ್ಯಾಂಕ್ ಗಳಲ್ಲಿ ಮಾಡಿರುವ ವಿಥ್ ಡ್ರಾ, ಹಣ ಬದಲಾವಣೆ ಹಾಗೂ ಎಟಿಎಂನಿಂದ ಗ್ರಾಹಕರು ಡ್ರಾ ಮಾಡಿರುವ ಒಟ್ಟು ಮೊತ್ತ 50 ಸಾವಿರ ಕೋಟಿ ರುಪಾಯಿಗೂ ಹೆಚ್ಚಿದೆ.
ನಾಲ್ಕು ದಿನದ ಅವಧಿಯಲ್ಲಿ ದೇಶದ ನಾನಾ ಬ್ಯಾಂಕ್ ಗಳಲ್ಲಿ ಇಪ್ಪತ್ತೊಂದು ಕೋಟಿ ಟ್ರಾನ್ಸಾಕ್ಷನ್ ಆಗಿವೆ. ಇದೀಗ ಹೊಸ ಐನೂರು ರುಪಾಯಿ ನೋಟು ಕೂಡ ಚಲಾವಣೆಗೆ ಬಂದಿದ್ದು, ಜನರ ಮೇಲಿನ ಒತ್ತಡ ಕಡಿಮೆ ಮಾಡುವುದಕ್ಕೆ ಕೂಡ ಸರಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.[ಎಟಿಎಂ, ಹಣ ಹಿಂಪಡೆತ: ಬ್ಯಾಂಕುಗಳಿಗೆ ಕೇಂದ್ರದ ಮಹತ್ವದ ಸೂಚನೆ]
ಗ್ರಾಮೀಣ ಭಾಗಗಳಲ್ಲಿ ಹಣದ ಲಭ್ಯತೆಯ ಸಮಸ್ಯೆಗಳಾಗಿದ್ದಲ್ಲಿ ಅದನ್ನು ನಿವಾರಿಸಲು ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಗೆ ಎಲ್ಲ ಅನುಕೂಲಗಳನ್ನು ಮಾಡಿಕೊಡುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರದಿಂದ ಮನವಿ ಮಾಡಲಾಗಿದೆ. ಅಸ್ಸಾಂ ಸರಕಾರ ಬ್ಯಾಂಕ್ ಗಳ ಸಹಕಾರದೊಂದಿಗೆ ಮೊಬೈಲ್ ಬ್ಯಾಂಕಿಂಗ್ ವಾಹನಗಳನ್ನು ನಿಯೋಜಿಸಿ, ತುರ್ತು ವ್ಯಹಾರಗಳಿಗೆ ಅನುಕೂಲವಾಗುವಂತೆ ರಾಜ್ಯ ಸರಕಾರಿ ನೌಕರರನ್ನು ನೇಮಿಸಿದೆ.
ಮೊಬೈಲ್ ಬ್ಯಾಂಕಿಂಗ್ ವಾಹನಗಳನ್ನು ಮುಖ್ಯ ಆಸ್ಪತ್ರೆ ಬಳಿಯಲ್ಲಿ ವ್ಯವಸ್ಥೆ ಮಾಡುವಂತೆ ಎಲ್ಲ ಬ್ಯಾಂಕ್ ಗಳಿಗೆ ಸಲಹೆ ನೀಡಲಾಗಿದೆ. ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರತಿ ವ್ಯವಸ್ಥೆ ಮಾಡುವಂತೆ ಬ್ಯಾಂಕ್ ಗಳಿಗೆ ತಿಳಿಸಲಾಗಿದೆ.[ಅಪ್ಪಾ ಸದ್ಯ, 500 ರು ಹೊಸ ನೋಟುಗಳು ಬ್ಯಾಂಕಲ್ಲಿ ಸಿಗುತ್ತಿವೆ!]
ಸದ್ಯಕ್ಕೆ ಬ್ಯಾಂಕ್ ನಲ್ಲಿ ಹಣ ಬದಲಾವಣೆಗೆ ವಿಧಿಸಿರುವ ಮಿತಿಯನ್ನು ನಾಲ್ಕರಿಂದ ನಾಲ್ಕೂವರೆ ಸಾವಿರಕ್ಕೂ, ಎಟಿಎಂ ವಿಥ್ ಡ್ರಾ ಮೊತ್ತವನ್ನು ಎರಡೂವರೆ ಸಾವಿರಕ್ಕೆ ಹೆಚ್ಚಿಸಲಾಗಿದೆ. ಬ್ಯಾಂಕ್ ಗಳಿಂದ ವಾರಕ್ಕೆ ಇಪ್ಪತ್ನಾಲ್ಕು ಸಾವಿರ ರುಪಾಯಿ ವಿಥ್ ಡ್ರಾ ಮಾಡಬಹುದಾಗಿದೆ. ಮುಂಚೆ ಈ ಮೊತ್ತ 20 ಸಾವಿರ ಇತ್ತು. ಈಗ ದಿನದ ಮಿತಿ ಹತ್ತು ಸಾವಿರವನ್ನು ತೆಗೆಯಲಾಗಿದೆ.
ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರಕಾರದ ಒಡೆತನದಲ್ಲಿರುವ ಮಳಿಗೆಗಳಲ್ಲಿ ಹಳೆ ನೋಟುಗಳನ್ನು ಸ್ವೀಕರಿಸದಿದ್ದರೆ ದೂರು ದಾಖಲಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.