ಕೇಂದ್ರ ಸರಕಾರಿ ನೌಕರರ ವೇತನ ಹೆಚ್ಚಳದಿಂದ ದೇಶಕ್ಕೇ ಒಳಿತು!
ಬೆಂಗಳೂರು, ಜೂನ್ 28: ಏಳನೇ ವೇತನ ಆಯೋಗದ ಶಿಫಾರಸುಗಳು ಜುಲೈ ಒಂದರಿಂದಲೇ ಜಾರಿ ಆಗುತ್ತದೆ ಎಂಬ ಸುದ್ದಿ ದೇಶದ ಆರ್ಥಿಕತೆಗೆ ಬಲ ತುಂಬುವಂಥದ್ದು ಎಂದು ಈಗ ಎಲ್ಲ ಕಡೆ ಕೇಳಿಬರುತ್ತಿದೆ. ಏಕೆಂದರೆ ಈ ನಿರ್ಧಾರದಿಂದ ಐವತ್ತು ಲಕ್ಷಕ್ಕೂ ಹೆಚ್ಚು ಕೇಂದ್ರ ಸರಕಾರಿ ನೌಕರರಿಗೆ ಅನುಕೂಲವಾಗುತ್ತದೆ.
ಏಳನೇ ವೇತನ ಆಯೋಗದ ಶಿಫಾರಸಿಗೆ ಕೇಂದ್ರ ಸರಕಾರದ ಒಪ್ಪಿಗೆ
ಇದು ಅಷ್ಟಕ್ಕೇ ನಿಲ್ಲುವುದಿಲ್ಲ. ದೇಶದ ಆರ್ಥಿಕತೆಗೆ ಬಲ ತುಂಬುತ್ತದೆ. ಅದು ಹೇಗೆ ಅಂತೀರಾ? ಈಗ ವೇತನ ಜಾಸ್ತಿ ಆಗುವುದರ ಜತೆಗೆ ಅದರ ಬಾಕಿ ಮೊತ್ತ, ಅಂದರೆ ಪೂರ್ವಾನ್ವಯ ಆಗುವಂತೆ ಹಣ ಉದ್ಯೋಗಿಗಳ ಕೈ ಸೇರುತ್ತದೆ. ಮನೆ ಖರೀದಿಸಬೇಕು, ಕಾರು ಕೊಳ್ಳಬೇಕು, ಚಿನ್ನ ಖರೀದಿಸಬೇಕು ಹೀಗೆ ನಾನಾ ಆಸೆಗಳನ್ನಿಟ್ಟುಕೊಂಡವರು ಅವುಗಳಿಗಾಗಿ ಖರ್ಚು ಮಾಡ್ತಾರೆ.
ಅಷ್ಟೇ ಅಲ್ಲ, ಗೃಹ ಬಳಕೆ ವಸ್ತುಗಳ ಖರೀದಿ, ಪ್ರವಾಸ ಕೂಡ ಮಾಡುವ ಸಾಧ್ಯತೆ ಇರುತ್ತದೆ. ಎಲ್ಲ ಖರ್ಚಿನ ಬಾಬ್ತೇ ಅನ್ನೋದಾದರೆ, ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವವರು, ಷೇರು ಮಾರುಕಟ್ಟೆಯಲ್ಲಿ, ಮ್ಯೂಚುವಲ್ ಫಂಡ್ ಗಳಲ್ಲಿ ಹಣ ತೊಡಗಿಸುವವರು, ಆದಾಯ ತೆರಿಗೆ ಉಳಿಸಲು ಹೂಡಿಕೆ ಮಾಡುವವರು, ತಾವು ಪಡೆದಿದ್ದ ಸಾಲವನ್ನು ಮರು ಪಾವತಿಸುವವರು ಹೀಗೆ ನಾನಾ ಬಗೆಯಲ್ಲಿ ಹಣದ ಚಲಾವಣೆ ಆರಂಭವಾಗುತ್ತದೆ.
ಇದರಿಂದ ಅಪನಗದೀಕರಣದ ವೇಳೆಯಲ್ಲಿ ಸ್ವಲ್ಪ ಮಟ್ಟಿಗೆ ಕುಂದಿದಂತೆ ಇದ್ದ ರಿಯಲ್ ಎಸ್ಟೇಟ್ ಹಾಗೂ ಇತರ ವ್ಯವಹಾರಗಳಿಗೂ ಬಲ ಬರುವುದರಲ್ಲಿ ಅನುಮಾನ ಇಲ್ಲ. ಜನರಲ್ಲಿ ಖರೀದಿಸುವ ಹಾಗೂ ವೆಚ್ಚ ಮಾಡುವ ಶಕ್ತಿ ಹೆಚ್ಚಿದಂತೆಲ್ಲ. ಆರ್ಥಿಕ ವ್ಯವಹಾರಗಳು ಚಿಗುರತ್ತವೆ. ಜತೆ ಉದ್ಯೋಗ ಸೃಷ್ಟಿಗೆ ಅನುಕೂಲ ಆಗುತ್ತದೆ. ಈಗ ತಿಳೀತಾ ಏಳನೇ ವೇತನ ಆಯೋಗದ ಜಾರಿ ಆದರೆ ಎಷ್ಟೆಲ್ಲ ವ್ಯತ್ಯಾಸ ಆಗುತ್ತದೆ?