ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರ ದಿನಾಚರಣೆ: ಕನ್ನಡ ಭಾಷೆಗೆ ಎಲ್ಲಿದೆ ಬೆಲೆ?

By ವಿನಯ್ ಕುಮಾರ್ ಸೋಡದ್, ಹಗರಿಬೊಮ್ಮನಹಳ್ಳಿ
|
Google Oneindia Kannada News

ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಂದು, ಗ್ರಾಹಕರ ಸುರಕ್ಷತೆಯಲ್ಲಿ ಭಾಷಾ ಆಯಾಮಕ್ಕೆ ಆದ್ಯತೆ ಕೊಡುವ ಬಗ್ಗೆ ವಿನಯ್ ಕುಮಾರ್ ಸೋಡದ್ ಬರೆದಿರುವ ಇಲ್ಲಿದೆ ಓದಿ...

ಡಿಸೆಂಬರ್ 24, 1986ರಂದು ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಭಾರತ ಸರಕಾರ ಜಾರಿಗೆ ತಂದಿತು. ಆ ದಿನದ ಸವಿನೆನಪಿಗಾಗಿ ಡಿಸೆಂಬರ್ 24ನ್ನು ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ಗ್ರಾಹಕ ಸಂರಕ್ಷಣಾ ಕಾಯ್ದೆಯು ಸಂವಿಧಾನದ ಅನುಚ್ಛೇದ 14 ರಿಂದ 19ರ ವರೆಗೆನ ಮೂಲಭೂತ ಹಕ್ಕುಗಳ ಮೇಲೆ ಆಧಾರಿತವಾಗಿದೆ. ಈ ಕಾಯಿದೆಯು ವ್ಯಾಪ್ತಿ ಸರಕಾರಿ, ಖಾಸಗಿ ಹಾಗೂ ಕಾರ್ಪೋರೇಟ್ ವಲಯಗಳಿಗೂ ಹರಡುತ್ತದೆ. [ಗ್ರಾಹಕರಾಗಿ ನಮ್ಮ ಹಕ್ಕುಗಳೇನು?]

ಮೋಸ ಹೋಗ್ಬೇಡ: ಗ್ರಾಹಕನ ಹಕ್ಕು ಎಂದರೆ ರೊಕ್ಕ ಕೊಟ್ಟದ್ದಕ್ಕೆ ತಕ್ಕ ಅಳತೆಯ, ತೂಕದ ಹಾಗೂ ಗುಣಮಟ್ಟದ ವಸ್ತು ಅಥವಾ ಸೇವೆ ಪಡೆಯುವುದು ಎಂಬ ಪರಿಕಲ್ಪನೆ ಸಾಮಾನ್ಯ ಜನರಲ್ಲಿ ಇದೆ. ಆದರೆ ಅವನು ಪಡೆಯುವ ಸೇವೆಗಳು ಹಾಗೂ ವಸ್ತುಗಳಿಗೆ ಸಂಬಂದ ಪಟ್ಟ ಮಾಹಿತಿಗಳು ಗ್ರಾಹಕನ ಭಾಷೆಯಲ್ಲಿ ಸಿಗದೇ ಹೋದಾಗ ಗ್ರಾಹಕನಿಗೆ ಆಗುವ ಲಾಭಕ್ಕಿಂತ ಅವಘಡಗಳೇ ಹೆಚ್ಚು. ಕೆಲ ಸನ್ನಿವೇಶಗಳನ್ನು ಗಮನಿಸಿದಾಗ ಗ್ರಾಹಕ ಕಾಯಿದೆಯಲ್ಲಿ ಭಾಷಾ ಆಯಾಮವೂ ಇರಬೇಕೆಂದು ಮನವರಿಕೆಯಾಗುತ್ತೆ.

National Consumer Rights Day kannada language protection

ಸನ್ನಿವೇಶ1 : ಒಬ್ಬ ರೋಗಿ ಮದ್ದನ್ನು(ಔಷಧಿ) ಕೊಂಡಾಗ ಅವನಿಗೆ ಆ ಮದ್ದು ಯಾವುದು, ಆ ಮದ್ದಿನಲ್ಲಿರುವ ರಸಾಯನಿಕಗಳಾವುವು, ಮದ್ದನ್ನು ಬಳಸುವ ಬಗೆ ಹೇಗೆ ಎಂಬುದು ಇಂದು ಕನ್ನಡ ಗ್ರಾಹಕನಿಗೆ ಕನ್ನಡದಲ್ಲಿ ಸಿಗುತ್ತಿಲ್ಲ. ಇದರ ಪರಿಣಾಮ ಗ್ರಾಹಕ(ರೋಗಿ) ಮದ್ದಿನ ತಲೆ ಬುಡ ಗೊತ್ತಿರದೇ ಮದ್ದನ್ನು ಸೇವಿಸುವಂತಾಗಿದೆ. ಇದರ ಪರಿಣಾಮ ಕೆಲವೊಮ್ಮೆ ಭೀಕರವಾಗಿಯೂ ಇರುತ್ತದೆ.

ಸನ್ನಿವೇಶ2: ಗ್ಯಾಸ್ ಸಿಲಿಂಡರ್ ಅನ್ನು ಹೇಗೆ ಬಳಸಬೇಕು ಎಂಬುದು ಇಂದು ಕೇವಲ ಹಿಂದಿ ಹಾಗೂ ಇಂಗ್ಲೀಷಿನಲ್ಲಿ ಅಚ್ಚೊತ್ತಲಾಗಿರುತ್ತದೆ. ಅಲ್ಲದೇ ಇತರೇ ಮನೆಬಳಕೆಯ ಸಾಮಾನುಗಳಾದ ಸೀರುಅಲೆ ಒಲೆ(ಮೈಕ್ರೋವೇವ್ ಒವೆನ್), ಫ್ರಿಜ್, ತೊಳೆಯುವ ಗುರಾಣಿ(ವಾಷಿಂಗ್ ಮಷಿನ್) ಇಂತಹ ಅನೇಕ ಉಪಕರಣಗಳ ಬಳಕೆಯ ಮಾಹಿತಿಗಳೂ ಸಹ ಕನ್ನಡದಲ್ಲಿರುವುದಿಲ್ಲ. ಇದರಿಂದಾಗಿ ಮನೆಯಲ್ಲಿರುವ ತಾಯಿಗೆ ಸುರಕ್ಷತೆಯ ಅರಿವೇ ಇಲ್ಲದೇ ಅವಘಡಗಳು ಸಂಭವಿಸುವುದು ಹೆಚ್ಚು. ಮಾಹಿತಿ ಕನ್ನಡದಲ್ಲಿದ್ದರೆ ಇದರಿಂದಾಗುವ ಅವಘಡ ಗಳನ್ನು ತಡೆಯಬಹುದು.

ಸನ್ನಿವೇಶ3: ಇನ್ನು ಕೇಂದ್ರ ಸರಕಾರದ ಭಾಷಾನೀತಿಯಿಂದಾಗಿ ಸರಕಾರಿ ಒಡೆತನದ ಬ್ಯಾಂಕ್, ಅಂಚೆ, ಎಲ್.ಐ.ಸಿ, ರೈಲ್ವೆಗಳಂತಹ ಇಲಾಖೆಗಳಲ್ಲಿ ಕನ್ನಡ ಮಾಯವಾಗಿ ಕರ್ನಾಟಕದ ಗ್ರಾಹಕ ಒಂದು ಬ್ಯಾಂಕ್ ಖಾತೆಯನ್ನು ತೆರೆಯಬೇಕಾದರೆ, ಖಾತೆಗೆ ಹಣ ತುಂಬ ಬೇಕಾದರೆ ಆಂಗ್ಲ/ಹಿಂದಿ ಭಾಷೆ ಬಲ್ಲವರ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

National Consumer Rights Day

ಇನ್ನು ನಮಗೆ ಸಿಗುವ ಚೆಕ್ಕು, ಎಲ್ಐಸಿ ಬಾಂಡು, ಅಂಚೆ ಚೀಟಿ, ರೈಲ್ವೆ ಟಿಕೇಟು ಇನ್ನೂ ಅನೇಕ ಕಡೆ ಕನ್ನಡ ಗ್ರಾಹಕನಿಗೆ ಅನ್ಯಾಯವಾಗುತ್ತಿದೆ, ಅವನು ಪಾವತಿಸಿದ ಹಣಕ್ಕೆ ತಕ್ಕ ಸೇವೆ ಕನ್ನಡ ಗ್ರಾಹಕನ ನುಡಿಯಲ್ಲಿ ಸಿಗುತ್ತಿಲ್ಲ.

ಇಂತಹ ಹತ್ತು ಹಲವು ತೊಡಕುಗಳು ದಿನ ನಿತ್ಯ ಒಬ್ಬ ಕನ್ನಡ ಗ್ರಾಹಕನ ಮುಂದೆ ಬಂದು ಹಾದು ಹೋಗುತ್ತವೆ. ಇನ್ನು ಇತರೇ ರಾಜ್ಯದ ನುಡಿ ಸಮುದಾಯದವರದೂ ಇದೇ ಗೋಳು.

ಇದಕ್ಕೆಲ್ಲ ಪರಿಹಾರವಾಗಿ ಸರಕಾರ ಭಾಷಾ ವಿಚಾರವಾಗಿ ಗಂಭೀರವಾದ ಚಿಂತನೆ ನಡೆಸಿ, ಗ್ರಾಹಕರ ರಕ್ಷಣಾ ಕಾಯಿದೆಯಲ್ಲಿ ಭಾಷಾ ಆಯಾಮವನ್ನು ಜೋಡಿಸಿ, ಮಾಡುಗರು (ಉತ್ಪಾದಕರು) ಮಾಡುವ ವಸ್ತುಗಳ ಮೇಲೆ, ವಸ್ತುಗಳನ್ನು ಬಳಸುವ ರೀತಿ, ಸುರಕ್ಷತಾ ಮಾಹಿತಿ, ದೂರನ್ನು ಸ್ವೀಕರಿಸಲು ಮೀಸಲಿಟ್ಟಿರುವ ಐ.ವಿ.ಆರ್.ಎಸ್/ಮಿಂಬಲೆ (website)ಯಂಥ ಸೇವೆಗಳು ಆಯಾ ರಾಜ್ಯದ ನುಡಿಯಲ್ಲಿಯೇ ನೀಡಬೇಕೆಂಬ ನಿಯಮ ಮಾಡಿದರೆ ಒಳಿತು

ರಾಜ್ಯದಲ್ಲಿರುವ ಕೇಂದ್ರ ಸರಕಾರಿ ಒಡೆತನದ ಕಚೇರಿಗಳಲ್ಲಿ ದೊರೆಯುವ ಅರ್ಜಿ, ಕಾಸೋಲೆ(ಚೆಕ್ಕು), ಟಿಕೆಟ್, ಎಲ್ಐಸಿ ಬಾಂಡ್ ಗಳಂತಹ ಕಾಗದ ಪತ್ರಗಳಲ್ಲಿ ಕನ್ನಡವನ್ನು ಬಳಸಿ ಕನ್ನಡ ಗ್ರಾಹಕನಿಗೆ ಯಾವುದೇ ತೊಡಕಿಲ್ಲದೆ ವ್ಯವಹಾರ ಮಾಡುವ ವಾತಾವರಣವನ್ನು ಸೃಷ್ಟಿಸುವ ದೊಡ್ಡ ಜವಾಬ್ದಾರಿ ಸರಕಾರದ ಮೇಲಿದೆ. ಹೀಗಾದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಗೆ ಅರ್ಥಪೂರ್ಣವಾಗಿರುತ್ತದೆ.

English summary
‘National Consumer Rights Day' is celebrated on December 24 every year,Consumer Protection Act is designed to protect consumer rights to ensure fair competition and free flow of truthful information in the market place. But celebration will be meaningless Kannada language speakers interest is not protected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X