ನಾರಾಯಣ ಮೂರ್ತಿ ಕಿರಿಕಿರಿಯಿಂದಲೇ ಸಿಕ್ಕಾ ರಾಜಿನಾಮೆ: ಇನ್ಫೋಸಿಸ್
ಇನ್ಫೋಸಿಸ್ ಮುಖ್ಯಸ್ಥ ಸ್ಥಾನದಿಂದ ವಿಶಾಲ್ ಸಿಕ್ಕಾ ರಾಜಿನಾಮೆಗೆ ನಾರಾಯಣ ಮೂರ್ತಿ ಕಾರಣ. ಕಂಪನಿಯ ಸಹ ಸಂಸ್ಥಾಪಕ ಮೂರ್ತಿ ಅವರು, ಸಿಕ್ಕಾ ವಿರುದ್ಧ ಪತ್ರ ವ್ಯವಹಾರ ನಡೆಸಿದ್ದೇ ಕಾರಣ. ಬಿಎಸ್ ಇ ಗೆ ಪತ್ರ ಬರೆದ ಇನ್ಫೋಸಿಸ್ ಆಡಳಿತ ಮಂಡಳಿ.
ಬೆಂಗಳೂರು, ಆಗಸ್ಟ್ 18: ಇನ್ಫೋಸಿಸ್ ಮುಖ್ಯಸ್ಥರಾಗಿದ್ದ ವಿಶಾಲ್ ಸಿಕ್ಕಾ ಅವರ ರಾಜಿನಾಮೆಗೆ, ಇನ್ಫೋಸಿಸ್ ನ ಸಹ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಸ್ಥ ನಾರಾಯಣ ಮೂರ್ತಿಯವರ ನಿರಂತರ ಕಿರಿಕಿರಿಯೇ ಕಾರಣ ಎಂದು ಇನ್ಫೋಸಿಸ್ ಸಂಸ್ಥೆಯ ಆಡಳಿತ ಮಂಡಳಿಯೇ ದೂರಿದೆ.
ಇನ್ಫೋಸಿಸ್ ಸಿಇಒ, ಎಂಡಿ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ
ಸಿಕ್ಕಾ ರಾಜಿನಾಮೆ ಹಿನ್ನೆಲೆಯಲ್ಲಿ, ದೇಶೀಯ ಷೇರು ಮಾರುಕಟ್ಟೆಯಾದ ಬಿಎಸ್ ಇ ಗೆ ಪತ್ರ ಬರೆದಿರುವ ಇನ್ಫೋಸಿಸ್, ಸಿಕ್ಕಾ ರಾಜಿನಾಮೆಯ ಹಿಂದಿನ ಕಾರಣಗಳನ್ನು ಉಲ್ಲೇಖಿಸಿದೆ.
ಅದರಲ್ಲಿ, ಸಿಕ್ಕಾ ಅವರು, ಇನ್ಫೋಸಿಸ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಕಗೊಂಡ ನಂತರ, ಹಲವಾರು ಬದಲಾವಣೆಗಳನ್ನು ತಂದಿದ್ದರು. ಇದರ ವಿರುದ್ಧ ಕಿಡಿ ಕಾರಿದ ನಾರಾಯಣ ಮೂರ್ತಿ, ಸಿಕ್ಕಾ ವಿರುದ್ಧ ಪತ್ರ ಚಳುವಳಿಯನ್ನೇ ಆರಂಭಿಸಿದರು. ಇಂಥದ್ದೊಂದು 'ಹಾದಿ ತಪ್ಪಿದ' ಅಭಿಯಾನದ ಕಾರಣದಿಂದಲೇ ಸಿಕ್ಕಾ ಅವರು ರಾಜಿನಾಮೆ ಸಲ್ಲಿಸಬೇಕಾಯಿತು ಎಂದು ಆಡಳಿತ ಮಂಡಳಿ ಹೇಳಿದೆ.
ಇದರ ಜತೆಗೆ, ಸಿಕ್ಕಾ ಅವರ ರಾಜಿನಾಮೆಯು ಈಗಾಗಲೇ ಅಂಗೀಕಾರವಾಗಿದ್ದು ಯು.ಬಿ. ಪ್ರವೀಣ್ ರಾವ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಕಾರ್ಪೊರೇಟ್ ದರ್ಜೆಗನುಗುಣವಾಗಿಯೇ ಇನ್ಫೋಸಿಸ್ ತನ್ನ ಕಾಯಕ ಮುಂದುವರಿಸಲಿದೆ ಎಂದು ಅದು ಹೇಳಿದೆ.