ಷೇರುಪೇಟೆ ಆಘಾತ: ಸೆನ್ಸೆಕ್ಸ್ 25 ಸಾವಿರಕ್ಕಿಂತ ಕೆಳಕ್ಕೆ
ಮುಂಬೈ, ಸೆಪ್ಟೆಂಬರ್. 07: ಷೇರು ಪೇಟೆಯಲ್ಲಿ ಕುಸಿತ ಮುಂದುವರಿದಿದೆ. ಸೋಮವಾರ ಅಂತ್ಯಕ್ಕೆ ಸೆನ್ಸೆಕ್ಸ್ 308 ಅಂಕ ಕುಸಿತ ಕಂಡು 24,893 ಕ್ಕೆ ಇಳಿಯಿತು. ನಿಫ್ಟಿ 96 ಅಂಕ ಕಳೆದುಕೊಂಡು 7,558 ರಲ್ಲಿ ಅಂತ್ಯವಾಯಿತು.
ಸೋಮವಾರ ಆರಂಭದಲ್ಲಿ ಮಾರುಕಟ್ಟೆ ಏರಿಕೆ ಕಂಡರೂ ನಂತರ ಕುಸಿತದ ಹಾದಿ ಹಿಡಿಯಿತು. ರಿಯಲ್ ಎಸ್ಟೇಟ್, ಆಟೋ, ಬ್ಯಾಂಕಿಂಗ್, ಐಟಿ ಮತ್ತು ಎಫ್ಎಂಸಿಜಿ ವಲಯಗಳ ಷೇರು ಏರಿಕೆ ಕಂಡರೂ ನಂತರ ಚೇತರಿಕೆ ದಾಖಲಿಸಲು ಸಾಧ್ಯವಾಗಲಿಲ್ಲ.[ಬಂಧನ್ ಬ್ಯಾಂಕ್ ಎಂದರೇನು? ಯಾಕಾಗಿ?]
ಬ್ಯಾಂಕಿಂಗ್ ಷೇರುಗಳು ಇಳಿಕೆ ಕಂಡವು, ಚೀನಾದ ಶಾಂಘೈ ಮಾರುಕಟ್ಟೆಯ ನೇರ ಪರಿಣಾಮ ಭಾರತದ ಮಾರುಕಟ್ಟೆ ಮೇಲಾಗಿದ್ದು ಸೋಮವಾರದ ಪ್ರಮುಖ ಅಂಶ. ಬೆಳಗ್ಗೆ ಏರಿಕೆ ಕಂಡರೂ ನಂತರ ಚೀನಾದ ಮಾರುಕಟ್ಟೆಯೊಂದಿಗೆ ಇಳಿಕೆ ದಾಖಲಿಸಿದ್ದರಿಂದ ಬಂಡವಾಳ ಹೂಡಿಕೆದಾರರು ಹಿಂದಕ್ಕೆ ಸರಿದರು.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]
ಪರಿಣಾಮ 14 ತಿಂಗಳ ಹಿಂದಕ್ಕೆ ಮಾರುಕಟ್ಟೆ ಕುಸಿದಿದೆ. ಜಾಗತಿಕ ಮಾರುಕಟ್ಟೆ, ಚೀನಾ ಮತ್ತು ಜಪಾನ್ ಮಾರುಕಟ್ಟೆ ಸಹ ಅಂಕಗಳನ್ನು ಕಳೆದುಕೊಂಡವು. ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಭಾರತದ ಅರ್ಥ ವ್ಯವಸ್ಥೆ ಭದ್ರವಾಗಿದೆ ಎಂದು ಹೇಳಿದ್ದರೂ ಇಳಿಕೆ ತಡೆ ಸಾಧ್ಯವಾಗಿಲ್ಲ. ಸಾಂಸ್ಥಿಕ ಹೂಡಿಕೆದಾರರು ಮಾರುಕಟ್ಟೆಯಿಂದ ವಿಮುಖರಾಗುತ್ತಿದ್ದು ಪರ್ಯಾಯ ಹೂಡಿಕೆಯತ್ತ ಗಮನ ನೀಡುತ್ತಿದ್ದಾರೆ.