ಮತ್ತೆ ಚಿನ್ನಾಭರಣ ವರ್ತಕರ ಮುಷ್ಕರ ಆರಂಭ
ನವದೆಹಲಿ, ಏಪ್ರಿಲ್, 26: ಚಿನ್ನಾಭರಣ ವರ್ತಕರು ಮತ್ತೆ ಮುಷ್ಕರ ಆರಂಭ ಮಾಡಿದ್ದಾರೆ. ಚಿನ್ನಾಭರಣಗಳ ಮೇಲೆ ವಿಧಿಸಲಾಗಿರುವ ಶೇ 1ರಷ್ಟು ಅಬಕಾರಿ ಸುಂಕ ಮತ್ತು ಪಾನ್ ಕಾರ್ಡ್ ಕಡ್ಡಾಯದ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವು ಬದಲಾಯಿಸಬೇಕು ಎಂದು ಆಗ್ರಹಿಸಿ ದೇಶವ್ಯಾಪಿ ಮುಷ್ಕರ ಆರಂಭಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಹಿವಾಟು ಸ್ಥಗಿತಗೊಳಿಸಿದ ವರ್ತಕರು, ಅಕ್ಕಸಾಲಿಗರು, ಚಿನಿವಾರ ಪೇಟೆ ಸದಸ್ಯರು ಭಾಗವಹಿಸಿದ್ದರು. ರಾಜಸ್ತಾನದ ಕೋಟಾ, ಜೈಪುರ, ಜೋಧಪುರದ ಮೂರು ಸಾವಿರ ಹಾಗೂ ಕಾನ್ಪುರ ಸೇರಿದಂತೆ ದೇಶದ ವಿವಿಧೆಡೆ ಚಿನ್ನಾಭರಣ ಮಳಿಗೆಗಳು ಬಾಗಿಲು ಹಾಕಿವೆ. ಬೆಂಗಳೂರಿನ ಕೆಲ ವರ್ತಕರು ಬೆಂಬಲ ನೀಡಿದ್ದಾರೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]
ಏಪ್ರಿಲ್ 25 ರಿಂದ ಮೂರು ದಿನ ಕಾಲ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ಆಗಲೂ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಹೋರಾಟದ ಹಾದಿಯನ್ನು ಬದಲಾಯಿಸಬೇಕಾಗುತ್ತದೆ ಎಂದು ವರ್ತಕರು ಎಚ್ಚರಿಕೆ ನೀಡಿದ್ದಾರೆ.[ಚಿನ್ನಾಭರಣ ವರ್ತಕರು ಮುಷ್ಕರ ನಡೆಸಲು ಕಾರಣವೇನು?]
ಆದರೆ ಮುಷ್ಕರಕ್ಕೆ ಸಂಬಂಧಿಸಿ ವರ್ತಕರ ಸಂಘಟನೆಗಳ ಮಧ್ಯೆಯೇ ಭಿನ್ನಮತ ಶುರುವಾಗಿದೆ. ಅಖಿಲ ಭಾರತ ಹರಳು ಮತ್ತು ಚಿನ್ನಾಭರಣ ವರ್ತಕರ ಒಕ್ಕೂಟ ಹಾಗೂ ಭಾರತ ಚಿನಿವಾರ ಪೇಟೆ ಮತ್ತು ವರ್ತಕರ ಸಂಘ ಈ ಮುಷ್ಕರವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದೆ. ಹೀಗಿರುವಾಗ ಮತ್ತೆ ಮುಷ್ಕರ ಆರಂಭಿಸಿ ನಷ್ಟ ಮಾಡಿಕೊಳ್ಳುದರಲ್ಲಿ ಅರ್ಥವಿಲ್ಲ ಎಂದು ಹೇಳಿವೆ.
ನಿಮ್ಮ ನಗರದ ಚಿನ್ನದ ದರ ಒಂದೇ ಕ್ಲಿಕ್ ನಲ್ಲಿ