ಬಿಜೆಪಿಗೆ ಭರ್ಜರಿ ಗೆಲುವು, ಮಂಗಳವಾರ ತಿಳಿಯಲಿದೆ ಷೇರುಪೇಟೆಯ ಒಲವು
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದೆ. ಆ ಪೈಕಿ ನಾಲ್ಕು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಈ ಸನ್ನಿವೇಶಕ್ಕೆ ಷೇರುಪೇಟೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ತಜ್ಞರಾದ ಕೆಜಿ ಕೃಪಾಲ್ ವಿವರಿಸಿದ್ದಾರೆ
ಷೇರುಪೇಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಅಥವಾ ನಿಫ್ಟಿಯಾಗಲಿ ವಾರ್ಷಿಕ ಗರಿಷ್ಠಕ್ಕೆ ಸಮೀಪ ಇದೆ. ಐದು ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಕಂಡ ಅಭೂತಪೂರ್ವ ಜಯವು ಸೋಮವಾರದ ಹೋಳಿ ಸಂಭ್ರಮದ ರಜೆಯ ನಂತರ ಮಂಗಳವಾರದ ಷೇರುಪೇಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸೂಚ್ಯಂಕಗಳು ಗರಿಷ್ಠದ ದಾಖಲೆ ನಿರ್ಮಿಸುವ ನಿರೀಕ್ಷೆ ಹೆಚ್ಚಾಗಿದೆ.
ಈ ಅನಿರೀಕ್ಷಿತ ಮಟ್ಟದ ಬೆಳವಣಿಗೆಗೆ ಪೇಟೆಯ ತಕ್ಷಣದ ಪ್ರತಿಕ್ರಿಯೆ ಅಚ್ಚರಿ ಮೂಡಿಸುವಂತಹದ್ದೇ ಅಗಬಹುದು. ಚುನಾವಣೋತ್ತರ ಸಮೀಕ್ಷೆಗಳಲ್ಲಿಯೂ ಈ ಮಟ್ಟದ ಫಲಿತಾಂಶದ ನಿರೀಕ್ಷೆ ಇರಲಿಲ್ಲ. ಬಿಜೆಪಿಗೆ ಉತ್ತಮ ಜನಬೆಂಬಲ ದೊರೆಯುವ ನಂಬಿಕೆಯಿಂದ ಹಲವಾರು ಅಗ್ರಮಾನ್ಯ ಕಂಪನಿಗಳು ಷೇರು ಪೇಟೆಯಲ್ಲಿ ಉತ್ತಮವಾದ ಏರಿಕೆಯಿಂದ ಸ್ಥಿರತೆ ಕಂಡುಕೊಂಡಿದ್ದವು.[ಉತ್ತರಪ್ರದೇಶದಲ್ಲಿ ಕೇಸರಿ ರಂಗು, ಇದು ಮೋದಿ ಬ್ರ್ಯಾಂಡ್ ಮ್ಯಾಜಿಕ್]
ಈಗ ಅದು ದೃಢವಾದ ನಂತರ ತಕ್ಷಣದ ಸ್ಪಂದನೆಯು ಅನಿರೀಕ್ಷಿತ ಮಟ್ಟದ ಏರಿಕೆಯಿಂದ ಬಿಂಬಿತವಾಗುವುದು. ಈ ರೀತಿ ಏರಿಕೆಗೆ ಮತ್ತೊಂದು ಪ್ರಮುಖ ಕಾರಣ ಹೆಚ್ಚಿನ ಸಂಸ್ಥೆಗಳಲ್ಲಿ, ಹೈ ನೆಟ್ ವರ್ಥ್ ವ್ಯಕ್ತಿಗಳಲ್ಲಿ ಲಭ್ಯವಾಗುವ ನಗದು ಹೆಚ್ಚಾಗಿದ್ದು, ಬೇರೆ ಯಾವುದೇ ವ್ಯವಹಾರಗಳಲ್ಲಿ ದೊರೆಯದೆ ಇರುವ ಪ್ರಮಾಣದ ಆದಾಯವನ್ನು ಷೇರುಪೇಟೆಯಲ್ಲಿ ಗಳಿಸಲು ಸಾಧ್ಯವಿದೆ. ಮತ್ತು ಅವುಗಳ ಕೊಳ್ಳುವಿಕೆ ಗಾತ್ರ ಹೆಚ್ಚಾಗಿರುವುದರಿಂದ ಕೊಂಡ ಷೇರುಗಳಿಗೆ ಬೇಡಿಕೆ ಹೆಚ್ಚಾಗಿ ಬೆಲೆಯೂ ಹೆಚ್ಚಾಗುವಂತೆ ಮಾಡುತ್ತದೆ.
ಅಂತಹ ಸಮಯದಲ್ಲಿ ವಿಶ್ಲೇಷಣೆಗಳಿಗೆ ಮಾರುಹೋಗದೆ, ಅನಿರೀಕ್ಷಿತ ಮಟ್ಟದ ಲಾಭ ಲಭ್ಯವಾದಲ್ಲಿ ತಕ್ಷಣ ಅದನ್ನು ಮಾರಿ, ಹಣ ಇಟ್ಟುಕೊಳ್ಳುವುದು ಸುರಕ್ಷಿತ. ಹಣವಿದೆ ಎಂದು ವಿನಿಯೋಗಿಸದೆ, ಅವಕಾಶಕ್ಕಾಗಿ ಕಾಯುವುದು ಸೂಕ್ತ. ವ್ಯಾಲ್ಯೂ ಪಿಕ್ ಪ್ರಾಫಿಟ್ ಆಧಾರಿತ ಚಟುವಟಿಕೆಯೊಂದಿಗೆ ಹೂಡಿಕೆ ಹಣ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಬಹುದು.[ವಿಜಯೋತ್ಸವ ಭಾಷಣದಲ್ಲಿ ನರೇಂದ್ರ ಮೋದಿ ಟಾಪ್ 10 ಹೇಳಿಕೆಗಳು]
ಕೊಟಕ್ ಮಹಿಂದ್ರಾ ಬ್ಯಾಂಕ್ ಷೇರಿನ ಬೆಲೆ ವಾರ್ಷಿಕ ಗರಿಷ್ಠ
ಹಿಂದಿನವಾರ ಕೊಟಕ್ ಮಹಿಂದ್ರಾ ಬ್ಯಾಂಕ್ ಪ್ರಮೋಟರ್ಸ್ ಶೇ 1.50 ಅಷ್ಟು ಷೇರನ್ನು ಮಾರಾಟ ಮಾಡಿದ ಸಂದರ್ಭದಲ್ಲಿ ಷೇರಿನ ಬೆಲೆಯೂ ವಾರ್ಷಿಕ ಗರಿಷ್ಠವನ್ನು ತಲುಪಿತು. ಆದರೆ ಇದು ಅಲ್ಪ ಸಮಯ ಮಾತ್ರ. ಆ ನಂತರ ಇಳಿಕೆಯತ್ತ ತಿರುಗಿತು. ಭಾರತ್ ಫೈನಾನ್ಷಿಯಲ್ ಇಂಕ್ಲುಷನ್ ಕಂಪನಿಯನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲು ಖಾಸಗಿ ಬ್ಯಾಂಕ್ ಗಳಾದ ಇಂಡಸ್ ಇಂಡ್ ಬ್ಯಾಂಕ್, ರತ್ನಾಕರ್ ಬ್ಯಾಂಕ್ ಗಳು ಪ್ರಯತ್ನಿಸುತ್ತಿವೆ ಎಂಬ ಕಾರಣ ಷೇರಿನ ಬೆಲೆಯು ರು.884ರವರೆಗೂ ಏರಿಕೆ ಕಂಡಿತ್ತು. ಇದರೊಂದಿಗೆ ಇಂಡಸ್ ಇಂಡ್ ಬ್ಯಾಂಕ್, ರತ್ನಾಕರ್ ಬ್ಯಾಂಕ್ ಗಳು ಸಹ ಉತ್ತಮ ಚಟುವಟಿಕೆಯಿಂದ ಏರಿಕೆ ಕಂಡುಕೊಂಡವು.
ಮೂರ್ನಾಲ್ಕು ತಿಂಗಳಲ್ಲಿ ರು.400ರಷ್ಟು ಏರಿಕೆ
ಈ ಮಧ್ಯೆ ಕೊಟಕ್ ಮಹಿಂದ್ರಾ ಬ್ಯಾಂಕ್ ಅನಾಲಿಸ್ಟ್ ಸಭೆಯಲ್ಲಿ ಶೇ 4.5ರಷ್ಟು ಸಾಲಗಳು ಕಳಪೆ ಮಟ್ಟದ್ದಾಗಿವೆ ಎಂಬ ಅಂಶವು ಷೇರಿನ ಬೆಲೆಯನ್ನು ಶೇ 6ರಷ್ಟು ಕುಸಿಯುವಂತೆ ಮಾಡಿತು. ಷೇರಿನ ಬೆಲೆಯು ರು.754ರವರೆಗೂ ಕುಸಿದು, ನಂತರದ ದಿನ ಪುಟಿದೆದ್ದು ರು.828ರಲ್ಲಿ ವಾರಾಂತ್ಯ ಕಂಡಿತು. ಅಂದರೆ ರು..754ರಿಂದ ರು.861 ರವರೆಗಿನ ಏರಿಳಿತ ಒಂದೇ ವಾರದಲ್ಲಿ ಪ್ರದರ್ಶಿತವಾಗಿರುವುದು ಪೇಟೆಯ ಹರಿತತೆಯನ್ನು ತೋರುತ್ತದೆ. ಈ ಕಂಪನಿಯ ಷೇರಿನ ಬೆಲೆಯು ಡಿಸೆಂಬರ್ ನಲ್ಲಿ ರು..465ರ ಸಮೀಪವಿದ್ದು ಅಲ್ಲಿಂದ ರು.400ರಷ್ಟು ಏರಿಕೆಯನ್ನು ಕಂಡಿರುವುದು ಗಮನಾರ್ಹವಾಗಿದೆ.
ಷೇರುಗಳನ್ನು ಮಾರಾಟ ಮಾಡಿ ಲಾಭ ಪಡೆಯಬಹುದು
ಒಟ್ಟಾರೆ ಷೇರುಪೇಟೆಯಲ್ಲಿ ವಹಿವಾಟು ಯಾವ ರೀತಿಯಿರುತ್ತದೆ ಎಂಬುದು ಪೂರ್ವಭಾವಿಯಾಗಿ ನಿರ್ಧರಿಸುವುದು ಸರಿಯಲ್ಲ. ಈಗ ಉತ್ತರಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಬಿಜೆಪಿ ಕಂಡ ಅಭೂತಪೂರ್ವ ಜಯವು ಏರಿಕೆಗೆ ದಾರಿ ಮಾಡಿಕೊಟ್ಟರೆ, ಏರಿಕೆ ಪ್ರಮಾಣ ಹೆಚ್ಚಾದಲ್ಲಿ ನಮ್ಮ ಸ್ಥಳೀಯ ವಿತ್ತೀಯ ಸಂಸ್ಥೆಗಳು ಬಹುದಿನಗಳಿಂದ ಸಂಗ್ರಹಿಸಿಕೊಂಡಿರುವ ಷೇರುಗಳನ್ನು ಮಾರಾಟ ಮಾಡಿ ಲಾಭ ಪಡೆದುಕೊಳ್ಳಬಹುದು. ಕಂಪನಿಗಳ ಮ್ಯಾನೇಜ್ ಮೆಂಟ್ ಗಳು ಸಹ ಈ ಅವಕಾಶದ ಲಾಭ ಪಡೆದುಕೊಳ್ಳಲು ಹಾತೊರೆಯಬಹುದು. ಹಾಗೂ ಕೇಂದ್ರ ಸರಕಾರವು ತನ್ನ ಬಂಡವಾಳ ಹಿಂತೆಗೆತ ಕಾರ್ಯಕ್ರಮವನ್ನು ಚುರುಕುಗೊಳಿಸಿ, ಪರಿಸ್ಥಿತಿಯನ್ನು ಉಪಯೋಗಿಸಿಕೊಳ್ಳಬಹುದು.
ಹೆಚ್ಚಿನ ಏರಿಳಿತ ಸಾಧ್ಯತೆ
ಷೇರುಪೇಟೆಯ ಪ್ರಮುಖ ಗುಣವಾದ 'ಲಿಕ್ವಿಡಿಟಿ' ಅಂದರೆ ಷೇರುಗಳನ್ನು ಬೇಕಾದಾಗ ಮಾರಾಟ ಮಾಡಿ, ಶೀಘ್ರ ಹಣ ಪಡೆದುಕೊಳ್ಳುವ ಗುಣವು ಗರಿಷ್ಠ ಮಟ್ಟದಲ್ಲಿರುವಾಗ ಹೆಚ್ಚು ಉಪಯೋಗಕಾರಿಯಾಗುವುದು. ಮಾರ್ಚ್ ಅಂತ್ಯದ ಸಮಯ ಸಮೀಪಿಸಿರುವುದರಿಂದ ಹೆಚ್ಚಿನ ಏರಿಳಿತಗಳು ಪ್ರದರ್ಶಿತವಾಗುವ ಸಾಧ್ಯತೆಯೇ ಹೆಚ್ಚು.
ಹೂಡಿಕೆದಾರರು ಈಗಿನ ಪೇಟೆಗಳಲ್ಲಿ ಎಚ್ಚರ ವಹಿಸಬೇಕು
ಶ್ವಾನ ನಿದ್ಧೆ, ಬಕ ಧ್ಯಾನ, ಗಜಸ್ನಾನ ರೀತಿ ಅಂದರೆ ನಾಯಿಯು ನಿದ್ದೆ ಮಾಡುತ್ತಿರುವಂತಿದ್ದರೂ ಎಚ್ಚರವಾಗಿರುವ ಗುಣ ಹೊಂದಿರುತ್ತದೆ. ಅದೇ ರೀತಿ ಹೂಡಿಕೆದಾರರು ಈಗಿನ ಪೇಟೆಗಳಲ್ಲಿ ಎಚ್ಚರ ವಹಿಸಬೇಕು, ಬಕ ಧ್ಯಾನದಂತೆ ಸದಾ ಲಾಭಗಳಿಕೆಯತ್ತ ಗಮನಹರಿಸಿದರೆ ಗಜಸ್ನಾನದ ತೃಪ್ತಿ ದೊರೆಯುತ್ತದೆ. ಈಗಿನ ಪದ್ಧತಿ ಗುರಿ ಮುಖ್ಯವೇ ಹೊರತು ಅದಕ್ಕೆ ಅನುಸರಿಸಬೇಕಾದ ದಾರಿ ನಗಣ್ಯವಾಗಿರುವುದರಿಂದ ಮತ್ತಷ್ಟು ಎಚ್ಚರ ವಹಿಸಿದಲ್ಲಿ ಮಾತ್ರ ಹೂಡಿಕೆ ಅಲ್ಪಮಟ್ಟಿನ ಸುರಕ್ಷತೆ ಕಾಣಬಹುದು. ಅಮೆರಿಕಾದ ಎಫ್ ಡಿಎ ಕ್ರಮವು ಫಾರ್ಮಾ ವಲಯದ ಕಂಪನಿಗಳಲ್ಲಿ ಹೆಚ್ಚಿನ ಏರಿಳಿತ ಉಂಟುಮಾಡಿದೆ. ವೊಕಾರ್ಡ್, ಡಾಕ್ಟರ್ ರೆಡ್ಡಿ ಲ್ಯಾಬ್, ದಿವೀಸ್ ಲ್ಯಾಬ್, ಅಲ್ಕೆಮ್ ಲ್ಯಾಬ್ ಮುಂತಾದವು ಕುಸಿತ ಕಂಡರೆ, ಕ್ಯಾಡಿಲ್ಲ ಹೆಲ್ತ್ ಕೇರ್, ಅಲೆಂಬಿಕ್ ಫಾರ್ಮಾ ಮುಂತಾದವು ಏರಿಕೆ ಕಂಡಿವೆ.
ರಿಲಯನ್ಸ್ ಇಂಡಸ್ಟ್ರೀಸ್ ನ ಷೇರಿನ ಏರಿಕೆ ಉತ್ತಮ ಉದಾಹರಣೆ
ಅಂತರರಾಷ್ಟ್ರೀಯ ಇನ್ವೆಸ್ಟ್ ಮೆಂಟ್ ಬ್ಯಾಂಕಿಂಗ್ ಕಂಪನಿಗಳಾದ ಸಿಎಲ್ ಎಸ್ ಎ, ಕ್ರೆಡಿಟ್ ಸೂಸ್ ಮುಂತಾದವುಗಳು ನೀಡುವ ಶಿಫಾರಸುಗಳು ಸಹ ಷೇರಿನ ಬೆಲೆಗಳಲ್ಲಿ ಏರುಪೇರು ಉಂಟುಮಾಡುವಷ್ಟು ಸೂಕ್ಷ್ಮತೆಯನ್ನು ಪೇಟೆ ಬೆಳೆಸಿಕೊಂಡಿದೆ. ಇದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ನ ಷೇರಿನ ಏರಿಕೆ ಉತ್ತಮ ಉದಾಹರಣೆಯಾಗಿದೆ. ಈ ಎಲ್ಲ ಬೆಳವಣಿಗೆಗಳು, ವಿಶ್ಲೇಷಣೆಗಳು ಕಾಲ್ಪನಿಕ ಮಾತ್ರ, ಶಾಶ್ವತವಲ್ಲ. ಪೇಟೆಗಳು ಗರಿಷ್ಠದಲ್ಲಿದ್ದಾಗ ಲಾಭ ತೆಗೆದುಕೊಳ್ಳುವುದು, ಅಗ್ರಮಾನ್ಯ ಕಂಪನಿಗಳ ಬೆಲೆ ಕುಸಿದಾಗ ಹೂಡಿಕೆ ಮಾಡುವುದು ಉತ್ತಮ. ಅಲಂಕಾರಿಕ ಪ್ರಚಾರದಿಂದ ದೂರವಿರುವುದು ಸುರಕ್ಷಿತ.
ವೈವಿಧ್ಯಮಯ ಕಾರಣಗಳಿಂದಾಗಿ ಬೆಲೆ ಇಳಿಕೆ
ಉತ್ತುಂಗದಲ್ಲಿರುವ ಈ ಸಮಯದಲ್ಲೂ, ಪೇಟೆಯಲ್ಲಿ ಹರಿದುಬರುತ್ತಿರುವ ಹಣವನ್ನು ಇತ್ತೀಚಿಗೆ ವೈವಿಧ್ಯಮಯ ಕಾರಣಗಳಿಂದಾಗಿ ಬೆಲೆ ಇಳಿಕೆ ಕಂಡಿರುವ ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ, ಒಎನ್ ಜಿಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಡಾಕ್ಟರ್ ರೆಡ್ಡಿ ಲ್ಯಾಬ್, ಸಿಂಜೀನ್ ಇಂಟರ್ ನ್ಯಾಷನಲ್, ಇಂಜಿನೀರ್ಸ್ ಇಂಡಿಯಾ, ಜಿಂದಾಲ್ ಸ್ಟೀಲ್ ಅಂಡ್ ಪವರ್, ಸ್ಟ್ರೈಡ್ಸ್ ಶಾಸೂನ್ ನಂತಹವು ಆಕರ್ಷಿಸಬಹುದು.