ಉದ್ಯಮಿಗಳ 81 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿತೇ ಕೇಂದ್ರ?
ಕೇಂದ್ರ ಸರ್ಕಾರದಿಂದ ಉದ್ಯಮಿಗಳ ಸುಮಾರು 81 ಸಾವಿರ ಕೋಟಿ ರು. ಸಾಲ ಮನ್ನಾ. ಅನುತ್ಪಾದಕ ಆಸ್ತಿಗಳಾಗಿದ್ದ ಹಲವಾರು ಉದ್ಯಮಿಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತೆಗೆದುಕೊಂಡಿದ್ದ ಸಾಲವನ್ನು ಮನ್ನಾ ಮಾಡಲು ನಿರ್ಧಾರ.
ನವದೆಹಲಿ, ಆಗಸ್ಟ್ 8: ಬ್ಯಾಂಕುಗಳಿಗೆ ಹೊರೆಯಾಗಿದ್ದ ಸುಮಾರು 81 ಸಾವಿರ ಕೋಟಿ ರು.ಗಳ ಮೊತ್ತದ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಹಣಕಾಸು ಇಲಾಖೆ ಹೇಳಿದೆ.
ಬ್ಯಾಂಕುಗಳಿಂದ ವಿವಿಧ ಉದ್ದಿಮೆಗಳು, ವ್ಯಕ್ತಿಗಳು ತೆಗೆದುಕೊಂಡಿದ್ದ ಸಾಲಗಳು ಸುದೀರ್ಘ ಕಾಲದಿಂದಲೂ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಅನುಭವಿಸುತ್ತಿದ್ದ ವಸೂಲಿ ಹೊರೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು 'ದ ಲಾಜಿಕಲ್ ಇಂಡಿಯನ್' ಎಂಬ ಜಾಲತಾಣ ವರದಿ ಮಾಡಿದೆ. ಆದರೆ, ಇದು ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ನಿಂದ ಕೈಬಿಡಲಾದ ಲೆಕ್ಕವೇ ಹೊರತು ಕಾನೂನಿನ ವ್ಯಾಪ್ತಿಯಿಂದ ಕೈಬಿಡಲಾದ ವಿಚಾರವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಲಾಗಿದೆ.
ಐಟಿ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ
ಅಂದಹಾಗೆ, 2016-17ರ ಹಣಕಾಸು ವರ್ಷದಲ್ಲಿ ಸುಮಾರು 81,683 ಕೋಟಿಯಷ್ಟು ಸಾಲವನ್ನು ಕೈಬಿಡಲಾಗಿದ್ದು, ಇದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗಿದೆ. 2015-16ನೇ ಹಣಕಾಸು ವರ್ಷದಲ್ಲಿ ಮಾಫಿ ಮಾಡಿದ ಉದ್ಯಮಪತಿಗಳ ಸಾಲಕ್ಕೆ ಹೋಲಿಸಿದರೆ, 2016-17ರಲ್ಲಿ ಕೈಬಿಟ್ಟ ಇಂಥ ಸಾಲದ ಪ್ರಮಾಣ ಶೇ. 43ರಷ್ಟು ಹೆಚ್ಚಾಗಿದೆ.
'ಇಂಡಿಯನ್ ಎಕ್ಸೆಪ್ರೆಸ್' ತನ್ನ ವರದಿಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 2012-13ರಲ್ಲಿ 27,231 ಕೋಟಿ ರು.ಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿತ್ತು. ಆ ಅವಧಿಯಲ್ಲಿ ಬ್ಯಾಂಕುಗಳ ಒಟ್ಟಾರೆ ಲಾಭವು 45,849 ಕೋಟಿ ರು. ಆಗಿತ್ತು. ಆದರೆ, 2016-17ರಲ್ಲಿ 81 ಸಾವಿರ ಕೋಟಿ ರು. ಮೊತ್ತವನ್ನು ಮನ್ನಾ ಮಾಡಲಾಗಿದೆ. ಆದರೆ, ಈ ಅವಧಿಯಲ್ಲಿ ಬ್ಯಾಂಕುಗಳು ಗಳಿಸಿರುವ ಲಾಭವು 474 ಕೋಟಿ ರುಪಾಯಿ ಮಾತ್ರ ಎಂದು ಹೇಳಲಾಗಿದೆ. ಹೀಗೆ, ಬ್ಯಾಂಕುಗಳ ಆದಾಯ ಇಳಿದಿದ್ದರೂ, ಅತ್ಯಧಿಕ ಸಾಲ ಮೊತ್ತವನ್ನು ಮನ್ನಾ ಮಾಡಲಾಗಿರುವುದು ಎಲ್ಲರ ಹುಬ್ಬೇರಿಸಿದೆ.
ಆರ್ ಬಿಐನಿಂದ ರೆಪೋ ದರ ಇಳಿಕೆ, ಸಾಲದ ಬಡ್ಡಿದರ ಇಳಿಕೆ ಸಾಧ್ಯತೆ!
ಹಾಗಾದರೆ, ಏನು ಈ ವಿಚಾರ, ಕೇಂದ್ರ ಸರ್ಕಾರ ಏಕೆ ಇಂಥ ನಿರ್ಧಾರ ಕೈಗೊಳ್ಳುತ್ತದೆ, ಇದರಿಂದ ಬ್ಯಾಂಕುಗಳ ಮೇಲೆ ಆಗುವ ಪರಿಣಾಮಗಳೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಉದ್ಯಮಗಳ ವಿರುದ್ಧ ಪ್ರಕರಣ ದಾಖಲಿಸಬಹುದು
ಅಂದಹಾಗೆ, ಈ ಸಾಲ ಮನ್ನಾ ಮಾಡಿದ ಕೂಡಲೇ ಎಲ್ಲವೂ ಮುಗಿಯಿತೆಂದು ಅರ್ಥವಲ್ಲ. ಸಾಲ ಮನ್ನಾವು ಬ್ಯಾಂಕುಗಳಿಗೆ ಸಾಲ ವಸೂಲಾತಿಯ ಹೊರೆಯನ್ನು ಕಡಿಮೆ ಮಾಡುವುದೇ ಆಗಿದೆ. ಆದರೆ, ಉದ್ದೇಶಪೂರಿತ ಸಾಲಗಾರರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವು ಬ್ಯಾಂಕುಗಳಿಗೆ ಇರುವುದರಿಂದ ಬ್ಯಾಂಕುಗಳು ತಮಗೆ ಕೊಡಬೇಕಾದ ಸಾಲದ ಬಾಕಿ ಉಳಿಸಿಕೊಂಡಿರುವ ಉದ್ಯಮಗಳ ವಿರುದ್ಧ ಪ್ರಕರಣ ದಾಖಲಿಸಬಹುದು.
ಬ್ಯಾಂಕುಗಳ ನಿಯಮಗಳೇ ಹೀಗೆ!
ಇಂಥ ಕ್ರಮಗಳನ್ನು ಕೇಂದ್ರ ಹಣಕಾಸು ಇಲಾಖೆಯು ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ, ಬ್ಯಾಂಕುಗಳಿಂದ ನೀಡಲಾಗುವ ಸಾಲವನ್ನು ಆಯಾ ಬ್ಯಾಂಕುಗಳು 'ಆಸ್ತಿ' ಎಂದು ಪರಿಗಣಿಸುತ್ತವೆ. ಅದರಿಂದ ಬರುವ ಬಡ್ಡಿಯನ್ನು 'ಆದಾಯ' ಎಂದು ಪರಿಗಣಿಸುತ್ತವೆ. ಸಾಲ ತೆಗೆದುಕೊಂಡವರು ಬ್ಯಾಂಕುಗಳಿಗೆ ನಿಯಮಿತವಾಗಿ, ಬಡ್ಡಿ ಸಮೇತ ಕಂತುಗಳನ್ನು ಕಟ್ಟುತ್ತಾ ಸಾಗಿದರೆ, ಬ್ಯಾಂಕುಗಳಿಗೂ 'ಆದಾಯ' ಬರುತ್ತಲೇ ಇರುತ್ತದೆ.
ಅನುತ್ಪಾದಕ ಆಸ್ತಿ ಎಂದಾಗುವುದೂ ಇದೇ ಕಾರಣಕ್ಕೆ!
ಆದರೆ, ಸಾಲಗಾರರು ಕಂತುಗಳನ್ನು ಕಟ್ಟದಿದ್ದಾಗ, ಬ್ಯಾಂಕುಗಳ ಆದಾಯ ತಪ್ಪಿಹೋಗುತ್ತದೆ. ಭಾರೀ ವರ್ಷಗಳವರೆಗೆ ಹೀಗೆ ಕಂತುಗಳನ್ನು ಬಾಕಿ ಉಳಿಸಿಕೊಂಡಾಗ, ಅಸಲು ಹಾಗೂ ಬಡ್ಡಿ ಎರಡೂ ಬರುವುದಿಲ್ಲ. ಹಾಗೆ, ವಸೂಲು ಆಗದ ಹಣ ಹಾಗೂ ಅದರ ಮೇಲಿನ ಬಡ್ಡಿಯನ್ನು ಒಟ್ಟಾಗಿ, 'ಅನುತ್ಪಾದಕ ಆಸ್ತಿ'ಗಳೆಂದು ಬ್ಯಾಂಕುಗಳು ಪರಿಗಣಿಸುತ್ತವೆ.
ಕಾನೂನು ಕ್ರಮದ ಮೂಲಕ ವಶಪಡಿಸಿಕೊಳ್ಳಬೇಕಿದೆ!
ಪ್ರತಿ ವರ್ಷದ ಆಡಿಟಿಂಗ್ ನಲ್ಲಿ ಈ ಅನುತ್ಪಾದಕ ಆಸ್ತಿಯು ಪದೇ ಪದೇ ಬ್ಯಾಂಕುಗಳಿಗೆ ತಲೆನೋವಾಗಿ ಪರಿಣಮಿಸುತ್ತದೆ. ಹಾಗಾಗಿ, ಮೊದಲಿಗೆ ಈ ಅನುತ್ಪಾದಕ ಆಸ್ತಿಯನ್ನು ಬ್ಯಾಲೆನ್ಸ್ ಶೀಟ್ ನಿಂದ ತಗೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತದೆ. ಇದೇ ಸಾಲ ಮನ್ನಾ ಎಂಬ ಸ್ವರೂಪ ಪಡೆದುಕೊಳ್ಳುತ್ತದೆ. ಇದನ್ನು ಕಾನೂನಾತ್ಮಕ ಹೋರಾಟ ನಡೆಸುವ ಮೂಲಕ ಬ್ಯಾಂಕುಗಳು, ನ್ಯಾಯಾಲಯದ ಆದೇಶ ಬ್ಯಾಂಕುಗಳ ಪರವಾಗಿ ಬಂದರೆ, ಸಾಲಗಾರರ ಆಸ್ತಿ ಮುಟ್ಟುಗೋಲು ಮುಂತಾದ ಕ್ರಮಗಳ ಮೂಲಕ ತಮ್ಮ ಸಾಲ ಹಾಗೂ ಬಡ್ಡಿಯನ್ನು ವಸೂಲಿ ಮಾಡಬಹುದಾಗಿದೆ.