ಇದೋ ನೋಡಿ ಬಂತು ಕಪ್ಪುಹಣ ಬಿಳುಪಾಗಿಸಲು ಮತ್ತೊಂದು ಅವಕಾಶ
ಈವರೆಗೆ ತಮ್ಮಲ್ಲಿನ ಕಪ್ಪುಹಣದ ಲೆಕ್ಕವನ್ನು ತೋರಿಸಿ ಆನಂತರ ಅದಕ್ಕೆ ಅನ್ವಯಸಲಾಗುವ ತೆರಿಗೆಯನ್ನು ಕಾಳಧನಿಕರು ಕಟ್ಟಬೇಕಿತ್ತು. ಆದರೆ, ಈ ಬಾರಿ ಮೊದಲು ತೆರಿಗೆ ಕಟ್ಟಬೇಕು. ಆನಂತರ, ಕಾಳಧನ ಪಾವತಿ ಮಾಡಬೇಕು.
ನವದೆಹಲಿ, ಫೆಬ್ರವರಿ 7: ಈ ಹಿಂದೆ ಕೇಂದ್ರ ಸರ್ಕಾರದಿಂದ ನೀಡಲಾಗಿದ್ದ ಗಡುವುಗಳನ್ನು ಮೀರಿಯೂ ಯಾರಾದರೂ ತಮ್ಮಲ್ಲಿ ಕಪ್ಪುಹಣವನ್ನು ಇನ್ನೂ ಇಟ್ಟುಕೊಂಡಿದ್ದರೆ ಅಂಥವರಿಗೆ ಈಗ ತಮ್ಮ ಹಣವನ್ನು ಬಿಳಿಯಾಗಿಸುವ ಸುವರ್ಣಾವಕಾಶವೊಂದನ್ನು ಮೋದಿ ಸರ್ಕಾರ ನೀಡಿದೆ.
ಕಪ್ಪು ಧನ ಕ್ಷಮಾದಾನದ ಹೆಸರಿನಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ (ಪಿಎಂಜಿಕೆವೈ) ಯೋಜನೆಯಲ್ಲಿ ಸಾರ್ವಜನಿಕರು ತಮ್ಮಲ್ಲಿರುವ ಕಪ್ಪುಹಣವನ್ನು ಇದೇ ವರ್ಷ ಮಾರ್ಚ್ 31ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಈ ಹಣಕ್ಕೆ ಶೇ. 50ರಷ್ಟು ತೆರಿಗೆ ಕಟ್ಟಿದರಷ್ಟೇ ಸಾಕು ನಿಮ್ಮ ಹಣ ಬಿಳಿಯಾಗಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವಾಲಯ, "ದೇಶದಲ್ಲಿನ ಕಪ್ಪು ಹಣಕೋರರಿಗೆ ತಮ್ಮ ಹಣವನ್ನು ಬಿಳಿಯಾಗಿಸಲು ಇದೊಂದು ಕಡೆಯ ಅವಕಾಶವಾಗಿದೆ" ಎಂದು ಹೇಳಿದೆ.
ಆದರೆ, ಇಲ್ಲೊಂದು ಗಮನಿಸಬೇಕಾದ ವಿಶೇಷ ಅಂಶವಿದೆ. ಈವರೆಗೆ ತಮ್ಮಲ್ಲಿನ ಕಪ್ಪುಹಣದ ಲೆಕ್ಕವನ್ನು ತೋರಿಸಿ ಆನಂತರ ಅದಕ್ಕೆ ಅನ್ವಯಸಲಾಗುವ ತೆರಿಗೆಯನ್ನು ಕಾಳಧನಿಕರು ಕಟ್ಟಬೇಕಿತ್ತು. ಆದರೆ, ಈ ಬಾರಿ ಮೊದಲು ತೆರಿಗೆ ಕಟ್ಟಬೇಕು. ಆನಂತರ, ತೆರಿಗೆ ಸಂದಾಯ ಮಾಡಿದ ರಸೀದಿ ತೋರಿಸಿದ ನಂತರ, ಕಾಳಧನವನ್ನು ಠೇವಣಿ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.