ಈರುಳ್ಳಿ ಜಿಗಿತ ತಡೆಗೆ ಕೇಂದ್ರದ ಆಮದು ತಂತ್ರ
ನವದೆಹಲಿ, ಆ. 04: ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 55 ರು. ದಾಟಿದ್ದು ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಸುಮಾರು 10,000 ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ.
ಕೇಂದ್ರ ಸರಕಾರ ಆಫ್ಘಾನಿಸ್ತಾನ ಮತ್ತು ಈಜಿಪ್ಟ್ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುವುದು ಎಂದು ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಮಹಾನಗರಗಳಲ್ಲಿ ಈರುಳ್ಳಿ ದರ ಕೆಜಿಗೆ ದಿನಕ್ಕೆ 5 ರು. ನಂತೆ ಜಾಸ್ತಿಯಾಗುತ್ತಿದೆ.[ಈರುಳ್ಳಿ ದರ ದಿಢೀರ್ ಏರಿಕೆಗೆ ಕಾರಣವೇನು?]
ಕಳೆದ ವರ್ಷ ದೇಶದಲ್ಲಿ ಅಂದಾಜು 20 ದಶಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗಿತ್ತು. ಆದರೆ ಈ ಬಾರಿ ಎದುರಾದ ಮಳೆ ಕೊರತೆ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಉಂಟುಮಾಡಿದೆ. ಅರ್ಧದಷ್ಟು ಉತ್ಪಾದನೆ ಕುಂಠಿತವಾಗಿರುವುದು ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ. ಫೆಬ್ರವರಿ ಮತ್ತು ಏಪ್ರಿಲ್ ಅವಧಿಯಲ್ಲಿ ಸುರಿದ ಅಕಾಲಿಕ ಮಳೆಗೆ ಕನಿಷ್ಠ ಶೇ 25ರಷ್ಟು ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಪೂರೈಕೆ ಕೊರತೆ ಸೃಷ್ಟಿಯಾಗಿದೆ.
ಮುಂದಿನ ಬೆಳೆಯು ಮಾರುಕಟ್ಟೆ ತಲುಪುವವರೆಗೂ ಅಂದರೆ ಅಕ್ಟೋಬರ್ ತಿಂಗಳವರೆಗೂ ಈರುಳ್ಳಿ ಖರೀದಿ ಮಾಡಬೇಕಿದ್ದರೆ ಕಣ್ಣೀರು ಹಾಕುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಂಡ ನಂತರ ಕೊಂಚ ಪ್ರಮಾಣದ ದರ ಇಳಿಕೆ ನಿರೀಕ್ಷೆ ಮಾಡಬಹುದು.
ಬೆಂಗಳೂರು ಹಾಪ್ ಕಾಮ್ಸ್ ದರಪಟ್ಟಿ ನೋಡಿ