ಏರ್ ಇಂಡಿಯಾ, ಒಎನ್ ಜಿಸಿ ವಿಚಾರದಲ್ಲಿ ವಾಜಪೇಯಿ ಅನುಕರಿಸಿದ ಮೋದಿ
ಏರ್ ಇಂಡಿಯಾ ಪರಭಾರೆಗೆ ನಿರ್ಧಾರ ಹಾಗೂ ಎಚ್ ಪಿಸಿಎಲ್ ನಲ್ಲಿನ ಷೇರುಗಳನ್ನು ಒಎನ್ ಜಿಸಿಗೆ ಮಾರಾಟ ಮಾಡುವ ನಿರ್ಧಾರಗಳನ್ನು ಕೈಗೊಂಡ ಮೋದಿ ಸರ್ಕಾರ. ಈ ನಿರ್ಧಾರಗಳ ಹಿಂದಿನ ಹೆಗ್ಗಳಿಕೆ ಮೂಲತಃ ವಾಜಪೇಯಿ ಸರ್ಕಾರಕ್ಕೆ ಸಲ್ಲಬೇಕು ಎನ್ನುತ್ತಿದ್ದಾರೆ
ನವದೆಹಲಿ, ಜುಲೈ 20: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಒ ಎನ್ ಜಿಸಿ (ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್) ಹಾಗೂ ಎಚ್ ಪಿಸಿಎಲ್ ಗಳ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಪರಸ್ಪರ ಮಿಲನಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ (ಜುಲೈ 19) ಸಂಜೆ ಅಧಿಕೃತ ಒಪ್ಪಿಗೆ ನೀಡಿದೆ.
ಭಾರತೀಯ ಕಂಪನಿಗಳ ಸಿಇಒಗಳ ವೇತನ 416 ಪಟ್ಟು ಹೆಚ್ಚು: ಸಮೀಕ್ಷೆ
ಈ ವಿಚಾರ ದೇಶಾದ್ಯಂತ ಸದ್ದು ಮಾಡುವ ಮೊದಲೇ ಈ ನಿರ್ಧಾರದ ಹಿಂದಿನ 17 ವರ್ಷಗಳ ಇತಿಹಾಸವನ್ನು ನೆನೆಯಲೇಬೇಕೆಂದು ಹಲವಾರು ರಾಜಕೀಯ ಪರಿಣಿತರು ಹೇಳಿದ್ದಾರೆ. ಈ ಆಲೋಚನೆ ಮೂಲತಃ 1998ರಿಂದ 2004ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಆಲೋಚನೆ ಎಂದು ಅವರು ಹೇಳಿದ್ದಾರೆ.
ಆನ್ ಲೈನ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೇಗೆ?
ಒಎನ್ ಜಿಸಿ- ಎಚ್ ಪಿಸಿಎಲ್ ವಿಲೀನ ಮಾತ್ರವಲ್ಲ, ಇಪ್ಪತ್ತು ದಿನಗಳ ಹಿಂದಷ್ಟೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಪರಭಾರೆ ಮಾಡಲು ಸಜ್ಜಾಗಿರುವ ನಿರ್ಧಾರದ ಹಿಂದೆಯೂ ವಾಜಪೇಯಿ ಸರ್ಕಾರದ ಆಶಯಗಳೇ ಕಾರಣ ಎಂದು ಪಂಡಿತರು ವಿಶ್ಲೇಷಿಸಿದ್ದಾರೆ.
ವಿಮಾನ ಯಾನ ಸಂಸ್ಥೆಗಳ ಸಮ್ಮಿಲನ
1999ರ ಹೊತ್ತಿಗೆ ಕೇಂದ್ರ ಸರ್ಕಾರವು ಎರಡು ವಿಮಾನ ನಿಲ್ದಾಣ ಸಂಸ್ಥೆಗಳನ್ನು ನಡೆಸುತ್ತಿತ್ತು. ಇಂಡಿಯನ್ ಏರ್ ಲೈನ್ಸ್ ಹಾಗೂ ಏರ್ ಇಂಡಿಯಾ. ಈ ಎರಡೂ ಸಂಸ್ಥೆಗಳನ್ನು ವಿಲೀನಗೊಳಿಸಬೇಕೆಂಬ ಆಶಯವನ್ನು ಕೈಗೊಂಡಿದ್ದೇ ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ.
ಆಗಲೀ ಸಿಕ್ಕ ಮುನ್ನುಡಿ
ವಾಜಪೇಯಿ ಕಾಲದಲ್ಲಿ, ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು, 'ಇಂಡಿಯನ್ ಏರ್ ಲೈನ್ಸ್' ಹಾಗೂ 'ಏರ್ ಇಂಡಿಯಾ' ಸಂಸ್ಥೆಗಳ ವಿಲೀನದ ಬಗ್ಗೆ ಭಾರೀ ಆಸಕ್ತಿ ಹೊಂದಿದ್ದರು. ಅವರ ಪ್ರಯತ್ನದ ಫಲವಾಗಿಯೇ ಎರಡೂ ಸಂಸ್ಥೆಗಳ ವಿಲೀನಕ್ಕೆ ಮುನ್ನುಡಿ ಬರೆಯಲ್ಪಟ್ಟಿದ್ದು. ಆದರೆ, ಆ ಸಂಸ್ಥೆಗಳು ಅಧಿಕೃತವಾಗಿ ವಿಲೀನಗೊಂಡು, 'ಏರ್ ಇಂಡಿಯಾ' ಎಂದು ಮರು ನಾಮಕರಣವಾಗಿದ್ದು, 2007ರಲ್ಲಿ.
ತೈಲ ಕಂಪನಿಗಳ ಸಬಲೀಕರಣಕ್ಕಾಗಿ ಕೈಗೊಂಡ ನಿರ್ಧಾರ
ಇನ್ನು, ತೈಲ ಕಂಪನಿಗಳಾದ ಒಎನ್ ಜಿಸಿ, ಎಚ್ ಪಿ ಸಿಎಲ್ ಹಾಗೂ ಜಿಎಐಎಲ್ (ಗೇಲ್) ಗಳಲ್ಲಿ ಇರುವ ಸರ್ಕಾರಿ ಷೇರುಗಳನ್ನು ಪರಸ್ಪರ ಆಯಾ ಕಂಪನಿಗಳಿಗೇ ತಮ್ಮ ಕೈಲಾದಷ್ಟು ಕೊಳ್ಳುವ ಹೊಸ ಕ್ರಾಂತಿಕಾರಿ ಆಲೋಚನೆಗೆ ಅಂದಿನ ವಾಜಪೇಯಿ ಸರ್ಕಾರ ನಾಂದಿ ಹಾಡಿತು. ಈ ಐಡಿಯಾವನ್ನು ಅಂದು ಕೇಂದ್ರ ಸರ್ಕಾರದ ಮುಂದಿಟ್ಟಿದ್ದು ಆಗ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿದ್ದ ವಿಜಯ್ ಎಲ್. ಕೇಳ್ಕರ್. ಅದನ್ನು ಅನುಮೋದಿಸಿದ್ದು ಹಣಕಾಸು ಸಚಿವ ಯಶವಂತ್ ಸಿನ್ಹಾ.
ಕೇಂದ್ರದ ಚಿಂತನೆಯ ಲಾಭ ಪಡೆದ ಕಂಪನಿಗಳು
ಪರಸ್ಪರ ಷೇರು ಖರೀದಿ ಪ್ರಸ್ತಾವನೆ ಹಿನ್ನೆಲೆಯಲ್ಲಿ ಒಎನ್ ಜಿಸಿ ಸಂಸ್ಥೆಯು ಐಒಸಿ (ಇಂಡಿಯನ್ ಆಯಿಲ್ ಕಾರ್ಪೊರೇಷನ್) ನಲ್ಲಿನ ಶೇ. 9.1ರಷ್ಟು ಷೇರುಗಳನ್ನು ಹಾಗೂ ಗೇಲ್ ನ ಶೇ. 4.8ರಷ್ಟು ಷೇರುಗಳನ್ನು ಖರೀದಿಸಿತು. ಅದರಂತೆ, ಐಒಸಿಯು ಒಎನ್ ಜಿಸಿಯಲ್ಲಿನ 9.6 ಷೇರುಗಳನ್ನು ಹಾಗೂ ಗೇಲ್ ಕಡೆಯ ಶೇ. 4.8ರಷ್ಟು ಷೇರುಗಳನ್ನು ಖರೀದಿ ಮಾಡಿತು. ಇನ್ನು, ಗೇಲ್ ಸಂಸ್ಥೆಯು ಒನ್ ಜಿಸಿಯ ಶೇ. 2.4ರಷ್ಟು ಷೇರುಗಳನ್ನು ತನ್ನದಾಗಿಸಿಕೊಂಡಿತು. ದೇಶೀಯ ತೈಲೋದ್ಯಮದಲ್ಲಿ ಇದೊಂದು ಮಹತ್ವದ ಹೆಜ್ಜೆ. ಆ ಬೆಳವಣಿಗೆಯ ನಂತರ, ಒಎನ್ ಜಿಸಿ ಸಂಸ್ಥೆಯು ಇಂದು ಆರ್ಥಿಕವಾಗಿ ಸಬಲವಾಗುವಷ್ಟರ ಮಟ್ಟಕ್ಕೆ ಬೆಳೆದು ನಿಲ್ಲಲು ಸಾಧ್ಯವಾಗಿದ್ದು.
ಇಂದು ದೊಡ್ಡ ತೈಲ ಸಂಸ್ಥೆಯ ಜನನಕ್ಕೆ ಕಾರಣ
ಅಂದು ವಾಜಪೇಯಿ ಸರ್ಕಾರ ಕೈಗೊಂಡಿದ್ದ ನಿರ್ಧಾರದಿಂದ, ಎಚ್ ಪಿಸಿಎಲ್ ನಲ್ಲಿನ ಸರ್ಕಾರಿ ಸ್ವಾಮ್ಯದ ಷೇರುಗಳಲ್ಲಿ ಶೇ. 51ರಷ್ಟನ್ನು ತನ್ನದೇ ಸ್ವಾಮ್ಯದ ಒಎನ್ ಜಿಸಿ ಸಂಸ್ಥೆಗೆ ಮಾರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಪರಿಣಾಮವಾಗಿ, ಎಚ್ ಪಿಸಿಎಲ್ ಸಂಸ್ಥೆಯು ಒಎನ್ ಜಿಸಿಯ ಸಹ ಸಂಸ್ಥೆಯಾಗಿ ಬೆರೆತು, ಇದು ದೈತ್ಯ ತೈಲ ಕಂಪನಿಯೊಂದಾಗಿ (ಒಎನ್ ಜಿಸಿ) ಮಾರ್ಪಡಲು ಸಹಕಾರಿಯಾಗಲಿದೆ. ಮಾರಕಟ್ಟೆಯಲ್ಲಿ ಇದರ ಸಾಧಕ-ಬಾಧಕಗಳು ಏನೇ ಇರಲಿ. ಆದರೆ, ತೈಲೋದ್ಯಮದಲ್ಲಿ ಒಂದು ದೊಡ್ಡ ಮಾರ್ಪಾಟು ಮಾಡಲು ಮೋದಿ ಸರ್ಕಾರ ಮುಂದಾಗಿರುವುದರ ಹಿಂದೆ ವಾಜಪೇಯಿ ಸರ್ಕಾರದ ಆಶಯವಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.