9ನೇ ದಿನಕ್ಕೆ ಚಿನ್ನಾಭರಣ ಮಾಲೀಕರ ಮುಷ್ಕರ, ಗ್ರಾಹಕ ತತ್ತರ
ಬೆಂಗಳೂರು, ಮಾರ್ಚ್, 10: ಎರಡು ಲಕ್ಷಕ್ಕಿಂತ ಹೆಚ್ಚಿನ ವಹಿವಾಟಿಗೆ ಪಾನ್ ಕಾರ್ಡ್ ಕಡ್ಡಾಯ ಮತ್ತು ಆಭರಗಳ ವಹಿವಾಟಿನ ಮೇಲೆ ಶೇ. 1ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಚಿನ್ನಾಭರಣ ವರ್ತಕರು ದೇಶದಾದ್ಯಂತ ನಡೆಸುತ್ತಿರುವ ಮುಷ್ಕರ 9 ನೇ ದಿನಕ್ಕೆ ಕಾಲಿರಿಸಿದೆ.
ಬೆಂಗಳೂರಿನ ಅವೆನ್ಯೂ ರಸ್ತೆಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೈಕ್ ರ್ಯಾಲಿ ನಡೆಯಲಿದೆ. ಬಳಿಕ ಉದ್ಯಾನದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದ್ದು ಮೆಜೆಸ್ಟಿಕ್ ಸುತ್ತ ಮುತ್ತ ಟ್ರಾಫಿಕ್ ಸಮಸ್ಯೆ ಎದುರಾಗಿದೆ.
ಒಂದೆಡೆ ಮದುವೆ ಸೀಸನ್ ಆರಂಭವಾಗಿದ್ದು ಗ್ರಾಹಕರು ಚಿನ್ನ ಖರೀದಿಗೆ ಎಲ್ಲಿಗೆ ತೆರಳಬೇಕು ಎಂದು ತೋಚದ ಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ 2 ರಿಂದಲೇ ವರ್ತಕರು ಮುಷ್ಕರ ಆರಂಭಿಸಿದ್ದರು. [ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]
ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿ, ಕೋಲ್ಕತ್ತ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನಾಭರಣ ವರ್ತಕರು ಮಳಿಗೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನಿಮ್ಮ ನಗರದ ಇಂದಿನ ಚಿನ್ನದ ದರ ತಿಳಿದುಕೊಳ್ಳಿ
ಯಾಕಾಗಿ ಪ್ರತಿಭಟನೆ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಶೇ. 1ರಷ್ಟು ಅಬಕಾರಿ ಸುಂಕವನ್ನು ಚಿನ್ನಾಭರಣ ಮರಳಿ ವಿಧಿಸುವುದಾಗಿ ಹೇಳಿರುವುದು ಚಿನ್ನಾಭರಣ ತಯಾರಿಕೆ ಮತ್ತು ಮಾರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಎಷ್ಟು ಜನರ ಜೀವನಕ್ಕೆ ಆಧಾರ
ದೇಶದಲ್ಲಿ 10 ಲಕ್ಷ ಆಭರಣ ಮಾರಾಟಗಾರರಿದ್ದಾರೆ. ರಾಜ್ಯದಲ್ಲಿ 25 ಸಾವಿರ ಮಾರಾಟಗಾರರಿದ್ದು, ಈ ಉದ್ಯಮ ನಂಬಿಕೊಂಡು 3 ಲಕ್ಷಕ್ಕೂ ಅಧಿಕ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಇವರೆಲ್ಲರ ದುಡಿಮೆಗೆ ಈಗ ತೊಂದರೆಯಾಗಿದೆ.
ಬೈಕ್ ಜಾಥಾ ನಡೆಸಿ ಆಕ್ರೋಶ
ಅಬಕಾರಿ ಸುಂಕ ವಿಧಿಸಲು ಹೊರಟಿರುವ ಕೇಂದ್ರದ ನೀತಿಯನ್ನು ಖಂಡಿಸಿ ಮಾರ್ಚ್ 10 ಬೆಂಗಳೂರಿನಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆಭರಣ ಮಾರಾಟಗಾರರ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ.
ಚಿನ್ನಾಭರಣ ಅಂಗಡಿಗಳು ಬಂದ್
ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ಮತ್ತು ಸಣ್ಣ ಚಿನ್ನಾಭರಣ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ. ಅಲ್ಲದೇ ಹಲವು ಕಡೆ ವರ್ತಕರು ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದ್ದಾರೆ.