ಅಕ್ಷಯ ತದಿಗೆ ಚಿನ್ನದ ಬೆಲೆ ಕೆಳಕ್ಕೆ, ಆಭರಣ ಮಾರಾಟ ಮೇಲಕ್ಕೆ
ಬೆಂಗಳೂರು, ಏ.22: ಅಕ್ಷಯ ತದಿಗೆ ದಿನ ಚಿನ್ನದ ವ್ಯಾಪಾರಿಗಳಿಗೆ ಭರ್ಜರಿ ಲಾಭ ಸಿಕ್ಕಿದೆ. ಚಿನ್ನದ ದರ ಇಳಿಕೆ, ಮುಂಗಡ ಬುಕ್ಕಿಂಗ್ ಲಾಭ ಪಡೆದ ಗ್ರಾಹಕರು ಮುಗಿಬಿದ್ದು ಹಳದಿ ಲೋಹಕ್ಕೆ ಮುತ್ತಿಟ್ಟ ಕಾರಣ ಮಾರಾಟದಲ್ಲಿ ಶೇ 10 ರಿಂದ 20ರಷ್ಟು ಪ್ರಗತಿ ಕಂಡಿದೆ.
ಅಕ್ಷಯ ತದಿಗೆ ದಿನ ಚಿನ್ನ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಬಲವಾಗಿ ಬಿತ್ತಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಚಿನ್ನದ ಆಭರಣ ಖರೀದಿ ಸೇಲ್ಸ್ ರಾಕೆಟ್ ವೇಗದಲ್ಲಿ ಮೇಲಕ್ಕೇರಿದೆ.[ದೇಶದಲ್ಲಿ ಇಂದಿನ ಚಿನ್ನದ ದರ ಇಲ್ಲಿ ನೋಡಿ]
ದಕ್ಷಿಣದಲ್ಲೇ ಅಧಿಕ: ದೇಶದೆಲ್ಲೆಡೆ ಲೆಕ್ಕಾಚಾರದಂತೆ ಶೇ 10 ರಿಂದ 25 ರಷ್ಟು ಏರಿಕೆ ಕಂಡು ಬಂದಿದ್ದರೆ, ದಕ್ಷಿಣ ಭಾರತದಲ್ಲಿ ಶೇ 60ರಷ್ಟು ಮಾರಾಟದಲ್ಲಿ ಏರಿಕೆ ಕಾಣಲಾಗಿದೆ. ಕರ್ನಾಟಕದಲ್ಲಿ ಸುಮಾರು 500 ಕೋಟಿ ರು ಗಳಷ್ಟು ವಹಿವಾಟು ನಡೆದಿದೆ.
ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 40ರಷ್ಟು ಅಧಿಕ ಮಾರಾಟ ಕಂಡು ಬಂದಿದೆ ಎಂದು ಕರ್ನಾಟಕ ಜ್ಯುವೆಲ್ಲರಿ ಟ್ರೇಡರ್ ಆಂಡ್ ವರ್ಕರ್ ಅಸೋಸಿಯೇಷನ್ಗಳ ಒಕ್ಕೂಟದ ಅಧ್ಯಕ್ಷ ಬಿ. ರಾಮಾಚಾರಿ ಹೇಳಿದ್ದಾರೆ. [ಚಿನ್ನ ಖರೀದಿ ಭರಾಟೆ ಬಲು ಜೋರು]
ದೆಹಲಿಯಲ್ಲಿ ಚಿನ್ನದ ಬೆಲೆ 100 ರು ಕುಸಿದು ಪ್ರತಿ 10 ಗ್ರಾಂಗೆ 27,100ರುನಷ್ಟಿತ್ತು. ದೆಹಲಿಯಲ್ಲಿ ಶೇ 10-15ರಷ್ಟು ಮಾರಾಟ ಏರಿಕೆ ಕಂಡು ಬಂದಿತು ಎಂದು ಖನ್ನ ಜ್ಯುವೆಲ್ಲರ್ಸ್ ಮಾಲೀಕ ವಿಜಯ್ ಖನ್ನ ಹೇಳಿದರು. [ಬಂಗಾರನೇ ಖರೀದಿಸಬೇಕು ಅಂತೇನಿಲ್ಲ]
ಮುಂಬೈನಲ್ಲಿ ಶೇ 12ರಷ್ಟು, ಕೋಲ್ಕತ್ತಾದಲ್ಲಿ ಶೇ 15 ರಿಂದ 20ರಷ್ಟು ಮಾರಾಟದಲ್ಲಿ ಏರಿಕೆ ಕಾಣಲಾಗಿದೆ. ಕೇರಳ ಮೂಲದ ಕಲ್ಯಾಣ್ ಜ್ಯುವೆಲ್ಲರ್ಸ್ 66 ಮಳಿಗೆಗಳನ್ನು ಹೊಂದಿದ್ದು, ಪ್ರತಿ ಮಳಿಗೆಯಲ್ಲೂ ಶೇ 6 ರಿಂದ 7 ರಷ್ಟು ಮಾರಾಟದಲ್ಲಿ ಏಳಿಗೆ ಸಿಕ್ಕಿದೆ. [2014: ಅಕ್ಷಯ ತೃತೀಯ ಡಲ್]
ಪ್ರತಿ ವರ್ಷ ಭಾರತ ಸುಮಾರು 800-900 ಟನ್ ಗಳಷ್ಟು ಹಳದಿ ಲೋಹವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಕ್ಷಯ ತೃತೀಯ ಅಂಗವಾಗಿ ಬೇಡಿಕೆ ಹೆಚ್ಚಿದ್ದರಿಂದ ಕಳೆದ ತಿಂಗಳು 125 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. (ಪಿಟಿಐ)