ಏ. 1ರಿಂದ ನರೇಗಾ ಕೂಲಿ ಕಾರ್ಮಿಕರಿಗೂ ಆಧಾರ್ ಕಡ್ಡಾಯ
ನವದೆಹಲಿ, ಜ. 8: ಗ್ರಾಮೀಣ ಪ್ರದೇಶಗಳಲ್ಲಿ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ದುಡಿಯುವ ಕೂಲಿ ಕಾರ್ಮಿಕರಿಗೂ ಏ. 1ರಿಂದ ಆಧಾರ್ ಕಾರ್ಡ್ ಕಡ್ಡಾಯವಾಗಲಿದೆ.
ಆಧಾರ್ ಕಡ್ಡಾಯದಿಂದ ಯೋಜನೆ ಫಲಾನುಭವಿಗಳಿಗೆ ನರೇಗಾದ ಲಾಭ ನೇರವಾಗಿ ತಲುಪಲು ಹಾಗೂ ಸರ್ಕಾರ ನೀಡುವ ಸಬ್ಸಿಡಿಗಳ ಸೋರಿಕೆಯನ್ನು ತಡೆಗಟ್ಟುಲು ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಯೋಜನೆಯಡಿ ಹೆಸರು ನೋಂದಾವಣಿ ಮಾಡಿಕೊಂಡಿರುವ ಎಲ್ಲಾ ಕೂಲಿಗಾರರೂ ಮಾ. 31ರೊಳಗೆ ಕಡ್ಡಾಯವಾಗಿ ಹೊಂದಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಈಗಾಗಲೇ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವ ಗ್ರಾಹಕರು, ತಮಗೆ ನೀಡಲಾಗಿರುವ ಆಧಾರ್ ಎನ್ ರೋಲ್ ಮೆಂಟ್ ಸಂಖ್ಯೆಯುಳ್ಳ ಚೀಟಿಯನ್ನು ತೋರಿಸಿ ಕೂಲಿ ಪಡೆಯಬಹುದು.
ಏ. 1ರಿಂದ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದರೂ ಅಲ್ಲಿಯವರೆಗೆ ನೋಂದಾಯಿತ ಕೂಲಿಗಾರರು, ಪಡಿತರ ಚೀಟಿ, ಮತದಾರ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್, ಕಿಸಾನ್ ಪಾಸ್ ಬುಕ್ (ಫೋಟೋ ಸಹಿತ), ನರೇಗಾ ಜಾಬ್ ಕಾರ್ಡ್, ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಣ ಪತ್ರ ಅಥವಾ ತಹಶೀಲ್ದಾರರಿಂದ ಮಾನ್ಯತಾ ಪತ್ರಗಳನ್ನು ಯೋಜನೆ ಫಲ ಪಡೆಯಲು ಉಪಯೋಗಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನರೇಗಾ ಫಲಾನುಭವಿಗಳಿಗೆ ಆಧಾರ್ ಕಡ್ಡಾಯಗೊಳಿಸುವುದರಿಂದ ಅರ್ಹರಿಗೆ ಯೋಜನೆಯ ಲಾಭ ಸರಿಯಾಗಿ ತಲುಪುತ್ತಿದೆಯೇ, ಸರ್ಕಾರ ನೀಡುವ ಸಬ್ಸಿಡಿಗಳು ಸೋರಿಕೆಯಾಗುತ್ತಿವೆಯೇ ಎಂಬುದರ ಬಗ್ಗೆ ಕರಾರುವಾಕ್ ಆಗಿ ಮಾಹಿತಿ ಪಡೆಯುವುದು ಸರ್ಕಾರಕ್ಕೆ ಸುಲಭವಾಗಲಿದೆ ಎಂದು ಕೇಂದ್ರ ಹೇಳಿದೆ.
2015-16ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರವು ನರೇಗಾ ಯೋಜನೆಗೆ ರು. 38,500 ಕೋಟಿ ಹಣವನ್ನು ಅನುದಾನವಾಗಿ ನೀಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ರು. 3,800 ಕೋಟಿ ಹೆಚ್ಚಿನ ಅನುದಾನವಾಗಿದೆ.