ಟಪಾಲ್ ಗಣೇಶ್ ಹತ್ಯೆಗೆ ಸುಪಾರಿ ಆರೋಪ, ಸುರೇಶ್ ಬಾಬು ಹೇಳುವುದೇನು?
ಬಳ್ಳಾರಿ, ಆಗಸ್ಟ್. 23 : 'ಟಪಾಲ್ ಗಣೇಶ್ ಅವರನ್ನು ನಾನು ಇದುವರೆಗೆ ಮಾಧ್ಯಮಗಳಲ್ಲಿ ಮಾತ್ರ ನೋಡಿದ್ದೇನೆ. ಸುಪಾರಿ ಕೊಟ್ಟು ಹತ್ಯೆ ಮಾಡಿಸಲು ನನಗೂ ಅವರಿಗೂ ಏನು ಸಂಬಂಧ?. ಅವರ ಆರೋಪದ ಬಗ್ಗೆ ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ' ಎಂದು ಕಂಪ್ಲಿ ಶಾಸಕ ಸುರೇಶ್ ಬಾಬು ಹೇಳಿದರು.
ಟಪಾಲ್ ಗಣೇಶ್ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸುರೇಶ್ ಬಾಬು, 'ನಾನೇನು ಗಣಿ ಹೊಂದಿಲ್ಲ. ಟ್ರಾನ್ಸ್ಪೋರ್ಟ್ ಉದ್ಯಮವಿಲ್ಲ, ಅವರೊಡನೆ ಯಾವುದೇ ವ್ಯವಹಾರವಿಲ್ಲ. ಅವರ ಹತ್ಯೆ ಮಾಡಿಸಿದರೆ ನನಗೆ ಸಿಗುವುದು ಏನು?' ಎಂದು ಪ್ರಶ್ನಿಸಿದರು.
'ಅವರು ನನ್ನ ಮೇಲೆ ಮಾಡಿರುವ ಆರೋಪದ ಬಗ್ಗೆ ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಾಗಿದ್ದೇನೆ. ಸುಪಾರಿ ಕೊಟ್ಟಿರುವುದು ಖಚಿತವಾದರೆ ಯಾರಿಗೆ ಕೊಟ್ಟಿದ್ದೇನೆ ಎಂದು ಪೊಲೀಸರಿಗೆ ಹೇಳಲಿ. ಆ ಬಗ್ಗೆ ತನಿಖೆಗಳು ನಡೆಯಲಿ' ಎಂದು ಸವಾಲು ಹಾಕಿದರು.
'ಚುನಾವಣೆಗಳು ಹತ್ತಿರವಾಗುತ್ತಿವೆ, ಕ್ಷೇತ್ರದಲ್ಲಿ ನಾನು ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇನೆ. ರಾಜಕೀಯವಾಗಿ ನನ್ನ ಹೆಸರಿಗೆ ಮಸಿ ಬಳಿಯಲು ಇಂತಹ ಆರೋಪ ಮಾಡುತ್ತಿದ್ದಾರೆ. ಚುನಾವಣೆ ಬರುತ್ತಿರುವುದರಿಂದ ಅವರಿಗೂ ಪ್ರಚಾರ ಬೇಕಾಗಿದೆ. ಅದಕ್ಕಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ' ಎಂದು ದೂರಿದರು.