ಹಂಪಿಗೆ ಭೇಟಿ ನೀಡಿದ್ದ ರಾಮನಾಥ್ ಕೋವಿಂದ್ ರ ಅಪರೂಪದ ಚಿತ್ರಗಳು
ಬಳ್ಳಾರಿ, ಜುಲೈ 21: ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ್ ಅವರಿಗೆ ಕರ್ನಾಟಕ ಪ್ರಖ್ಯಾತ ಸಾಂಸ್ಕೃತಿಕ ತಾಣ ಹಂಪಿ ಜತೆಗೆ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿಯಾಗಿ ಹಂಪಿ ಸುತ್ತ ಮುತ್ತ ತೆಗೆದ ರಾಮನಾಥ್ ಕೋವಿಂದ್ ರ ಅಪರೂಪದ ಹಲವಾರು ಚಿತ್ರಗಳು ನಮ್ಮ ಬಳಿ ಇವೆ.
ಪ್ರಥಮ ಪ್ರಜೆಯಾಗಿ ರಾಮನಾಥ್ ಕೋವಿಂದ್: ಕನ್ನಡ ಪತ್ರಿಕೆಗಳು ಕಂಡಂತೆ
ರಾಮನಾಥ್ ಕೋವಿಂದ್ 2011 ಹಾಗೂ 2012ರಲ್ಲಿ ಎರಡೆರಡು ಬಾರಿ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವ ಹಂಪಿಗೆ ಭೇಟಿ ನೀಡಿದ್ದರು. ಅವರು ಹಂಪಿಗೆ ಬಂದು ಇಲ್ಲಿನ ಶಿಲ್ಪಕಲಾ ವೈಭವಕ್ಕೆ ಮನಸೋತಿದ್ದರು. ಇದಕ್ಕಾಗಿ ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡಿದ್ದರು.
ಭದ್ರತೆ ಇಲ್ಲದೆ ಹಂಪಿಗೆ ಭೇಟಿ
ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದರೂ ಯಾರಿಗೂ ವಿಷಯ ತಿಳಿಸದೇ ಹಾಗೂ ಯಾವುದೇ ಭದ್ರತೆ ಇಲ್ಲದೆ ನೇರವಾಗಿ 2011ರಲ್ಲಿ ಕೋವಿಂದ್ ಹಂಪಿಗೆ ಭೇಟಿ ನೀಡಿದ್ದರು.
2012ರಲ್ಲಿ ಮತ್ತೆ ಭೇಟಿ
2011ರಲ್ಲಿ ರಾಮನಾಥ್ ಕೋವಿಂದ್ ರಿಗೆ ಹಂಪಿಯ ಸ್ಮಾರಕಗಳಲ್ಲಿ ಸರಿಯಾಗಿ ನೋಡಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ 2012ರಲ್ಲಿ ಪುನಃ ಹಂಪಿ ಪ್ರವಾಸ ಕೈಗೊಂಡಿದ್ದರು.
ಸದ್ದಿಲ್ಲದೆ ಭೇಟಿ
2012ರಲ್ಲಿ ಕೋವಿಂದ್ ಪಕ್ಷದ ರಾಷ್ಟ್ರೀಯ ವಕ್ತರರಾಗಿದ್ದರೂ ಬಿಜೆಪಿಯ ಯಾವೊಬ್ಬ ಮುಖಂಡರಿಗೂ ಅವರು ಬರುವ ವಿಷಯ ತಿಳಿದಿರಲಿಲ್ಲ.
ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಕೋವಿಂದ್ ಬರುವ ವಿಷಯ ತಿಳಿದು ಹೊಸಪೇಟೆ ಈಗಿನ ನಗರಸಭೆ ಸದಸ್ಯ ಚಂದ್ರಕಾಂತ್ ಕಾಮತ್ ಹಂಪಿಗೆ ಭೇಟಿ ನೀಡಿ ಅವರನ್ನು ಬರಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಮೂರು ದಿನ ಹಂಪಿ ಸ್ಮಾರಕಗಳನ್ನು ವೀಕ್ಷಿಸಿದ್ದ ರಾಮನಾಥ ಕೋವಿಂದ್, ಲೋಕಕಲ್ಯಾಣಕ್ಕಾಗಿ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
ಹಂಪಿ ಶಿಲ್ಪ ಸೌಂದರ್ಯದ ಬಗ್ಗೆ ಅಪಾರ ಮೆಚ್ಚುಗೆ
"ಹಂಪಿ ಶಿಲ್ಪ ಸೌಂದರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದ ಕೋವಿಂದ್ ಅವರ ಹಂಪಿ ಭೇಟಿ ನಿಜಕ್ಕೂ ಅವಿಸ್ಮರಣೀಯ. ಅವರೊಂದಿಗೆ ಕಳೆದ ಮೂರು ದಿನಗಳನ್ನು ಇಂದಿಗೂ ನೆನಪಿಸಿಕೊಳ್ಳಬೇಕೆನಿಸುತ್ತದೆ," ಎನ್ನುತ್ತಾರೆ ಚಂದ್ರಕಾಂತ್ ಕಾಮತ್.
ಸ್ಮಾರಕಗಳನ್ನು ಆಸ್ವಾದಿಸಿದ್ದ ಕೋವಿಂದ್
ಇಲ್ಲಿನ ವಿಜಯ ವಿಠಲ, ಸಂಗೀತ ಮಂಟಪ, ಕಲ್ಲಿನ ರಥ, ಮಹಾನವಮಿ ದಿಬ್ಬ, ಕೃಷ್ಣ ದೇಗುಲ, ಬಡವಿಲಿಂಗ, ಆನೆಸಾಲು ಮಂಟಪ, ಕೃಷ್ಣ ಬಜಾರ್ ಸೇರಿದಂತೆ ಹಲವು ಸ್ಮಾರಕಗಳನ್ನು ಆಸ್ವಾದಿಸಿದ್ದರು.
'ಮುಂದಿನ ಪೀಳಿಗೆಗೆ ಇದನ್ನು ಉಳಿಸಬೇಕು'
"ದೇಶದ ಹಲವಾರು ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಹಂಪಿಯಂಥ ಸ್ಮಾರಕ ಸೌಂದರ್ಯವನ್ನು ಎಲ್ಲಿಯೂ ಕಂಡಿರಲಿಲ್ಲ. ಮುಂದಿನ ಪೀಳಿಗೆಗೆ ಇದನ್ನು ಸಂಗ್ರಹಿಸುವ ಕೆಲಸ ಆಗಬೇಕು," ಎಂದು ಕೋವಿಂದ್ ನನ್ನ ಬಳಿ ಮಾತನಾಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಕಾಮತ್.
ಅನ್ನದ ಮಹತ್ವ ತಿಳಿಸಿಕೊಟ್ಟಿದ ರಾಮನಾಥ್
"ಸರಳ, ಸಜ್ಜನಿಕೆ ವ್ಯಕ್ತಿಯಾಗಿರುವ ರಾಮನಾಥ್ ಅವರು ಅನ್ನದ ಮಹತ್ವವವನ್ನು ಚನ್ನಾಗಿ ಅರಿತುಕೊಂಡಿದ್ದರು. ಊಟ ಮಾಡುವಾಗ ತಟ್ಟೆಯಲ್ಲಿ ಒಂದಗಳು ಅನ್ನವನ್ನೂ ಬಿಡುತ್ತಿರಲಿಲ್ಲ. ಅವರೊಂದಿಗೆ ಊಟ ಮಾಡುತ್ತಿದ್ದವರ ತಟ್ಟೆಯಲ್ಲಿ ಅನ್ನ ಉಳಿದಿದ್ದರೆ ಅದನ್ನು ಸೇವಿಸುವವರೆಗೂ ಬಿಡುತ್ತಿರಲಿಲ್ಲ. ಅಗತ್ಯವಿದ್ದಷ್ಟು ಮಾತ್ರ ಬಡಿಸಿಕೊಂಡು ಊಟ ಮಾಡಬೇಕು ಎನ್ನುತ್ತಿದ್ದರು," ಎಂದು ಹೇಳಿದ್ದಾಗಿ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು ಚಂದ್ರಕಾಂತ್ ಕಾಮತ್.