ಹಂಪಿ ಉತ್ಸವ: ಮೈ ನವಿರೇಳಿಸಿದ ಕುಸ್ತಿ ಸ್ಪರ್ಧೆ
ಹಂಪಿ, ನವೆಂಬರ್, 4: ವಿಶ್ವ ಪ್ರಸಿದ್ಧ ಹಂಪಿ ಉತ್ಸವ ಅಂಗವಾಗಿ ಹೊಸಮಲಪನಗುಡಿಯ ವಿದ್ಯಾರಣ್ಯಪೀಠದ ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಲಾಗಿದ್ದ ಕುಸ್ತಿ ಅಖಾಡದಲ್ಲಿ ಕುಸ್ತಿ ಸ್ಪರ್ಧೆ, ಕಲ್ಲು ಎತ್ತುವ ಸ್ಪರ್ಧೆ, ಮಲ್ಲಕಂಬ, ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕುಸ್ತಿ ಸ್ಪರ್ಧೆಗಳು ನೋಡುಗರ ಮೈನವಿರೇಳಿಸಿದವು. ಸ್ಪರ್ಧೆಯಲ್ಲಿ ವಿವಿಧ ಪಟ್ಟುಗಳ ಮೂಲಕ ಪೈಲ್ವಾನರು ಪೈಪೋಟಿ ಸಾಧಿಸಲು ಪ್ರಯತ್ನಿಸಿದ ರೊಚಕ ದೃಶ್ಯಗಳನ್ನು ಸಾರ್ವಜನಿಕರು ಯಾತ್ರಿಗಳು ನೋಡಿ ಸಂತಸ ಪಟ್ಟರು. ಕುಸ್ತಿ ಪಂದ್ಯಗಳು ವಿಜಯನಗರದ ಗತವೈಭವದ ಸಾಮ್ರಾಜ್ಯವನ್ನು ನೆನಪಿಸಿದವು.
ಪ್ರತಿಷ್ಠಿತ ಹಂಪಿ ಕೇಸರಿ ಪ್ರಶಸ್ತಿಗೆ ಮುಂಬಯಿನ ಸತೀಶ್ ಪಡತಾರೆ, ಹಂಪಿ ಕಿಶೋರಿ ಪ್ರಶಸ್ತಿಗೆ ಶಾಹೀದಾ ಬೇಗಂ ಬಳಿಗಾರ, ವೆಂಕಟಾಪುರ ಹಾಗೂ ಬಳ್ಳಾರಿ ಜಿಲ್ಲಾಮಟ್ಟದ ಹಂಪಿ ಕುಮಾರ ಸ್ಪರ್ಧೆಗೆ ಹೊಸಪೇಟೆ ಚಿತ್ರಕೇರಿಯ ಪ್ರಭು ಆಯ್ಕೆಯಾದರು.
ವಿಜೇತರಿಗೆ ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪಾರಿತೋಷಕ, ನಗದು ಬಹುಮಾನ, ಪ್ರಶಸ್ತಿ ಪತ್ರ ವಿತರಿಸಿ ಕುಸ್ತಿಪಟುಗಳನ್ನು ಸನ್ಮಾನಿಸಿದರು.
ರಾಜ್ಯಮಟ್ಟದ 57 ಕೆಜಿ ವಿಭಾಗದ ಪುರುಷರ ಕುಸ್ತಿ ಸ್ಪರ್ಧೆಯಲ್ಲಿ ಧಾರವಾಡದ ಪ್ರಶಾಂತಗೌಡ ಪ್ರಥಮ, ಮುಧೋಳದ ಈಶ್ವರ ಢೆಂಗಿ ದ್ವಿತೀಯ ಹಾಗೂ ಲಕ್ಕುಂಡಿಯ ಸಂತೋಷ ಕವಲೂರು ತೃತೀಯ ಸ್ಥಾನ ಪಡೆದು ಸಂಭ್ರಮಿಸಿದರು.
61 ಕೆಜಿ ವಿಭಾಗದ ಪುರುಷರ ಸ್ಪರ್ಧೆಯಲ್ಲಿ ಧಾರವಾಡದ ಶ್ರವಣ ಪ್ರಥಮ, ಸಚಿನ್ ಅಂಬೋಜಿ ದ್ವಿತೀಯ ಹಾಗೂ ವಿನಾಯಕ ಜಮಖಂಡಿ ಮೂರನೇ ಸ್ಥಾನ ಪಡೆದರು. 65 ಕೆಜಿ ವಿಭಾಗದ ಸ್ಪರ್ಧೆಗಳಲ್ಲಿ ಪಾಲಾಕ್ಷಗೌಡ ಪ್ರಥಮ, ಮಹೇಶ ಗಂಗಾಧರ ಚಲುವಾದಿ ದ್ವಿತೀಯ, ಶಿವಾನಂದ ಭಂಗಿ ಮೂರನೇ ಸ್ಥಾನ ಗಳಿಸಿದರು.
44 ಕೆಜಿ ವಿಭಾಗದ ಬಾಲಕಿಯರ ಕುಸ್ತಿ ಸ್ಪರ್ಧೆಯಲ್ಲಿ ಪ್ರೇಮಾ ಹುಚ್ಚಣ್ಣವರ್ ಪ್ರಥಮ, ಜಯಶ್ರೀ ಗುಡಗುಂಟಿ ದ್ವಿತೀಯ, ಶಾಹೀರಾಬಾನು ಅಸುಂಡಿ ಮೂರನೇ ಸ್ಥಾನ ಪಡೆದರು.
48 ಕೆಜಿ ವಿಭಾಗದ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಬಷೀರಾ ವಕಾರದ ಪ್ರಥಮ, ಧನಶ್ರೀ ಪಾಟೀಲ ದ್ವಿತೀಯ ಹಾಗೂ ಸೋನಿಯಾ ಜಾಧವ ಮೂರನೇ ಸ್ಥಾನ ಗಳಿಸಿದರು.
52 ಕೆಜಿ ವಿಭಾಗದ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಲಕ್ಷ್ಮಿ ರೇಡೇಕರ್ ಪ್ರಥಮ, ಶಶಿಕಲಾ ತಳವಾರ ದ್ವಿತೀಯ ಹಾಗೂ ಸಹನಾ ಮಂಗಳೂರು ತೃತೀಯ ಸ್ಥಾನ ಪಡೆದರು.
ರಾಷ್ಟ್ರಮಟ್ಟದ ಹಂಪಿ ಕಿಶೋರಿ ಪ್ರಶಸ್ತಿಗಾಗಿ ಅಂತಿಮ ಸುತ್ತಿನಲ್ಲಿಪ್ರೇಮಾ ಹುಚ್ಚಣ್ಣವರ್ ಹಾಗೂ ಶಾಹೀದಾಬೇಗಂ ಬಳಿಗಾರ ಅವರ ಮಧ್ಯೆ ತೀವ್ರ ಸೆಣಸಾಟ ನಡೆಯಿತು.
6-3 ಅಂಕಗಳಿಂದ ಶಾಹೀದಾ ಪ್ರಶಸ್ತಿ ಗಳಿಸಿದರು. ಪವಿತ್ರಾ ಮಂಗಳೂರು ಮೂರನೇ ಸ್ಥಾನಕ್ಕೆ ತೃಪ್ತಿ ಗಳಿಸಬೇಕಾಯಿತು. ರಾಷ್ಟ್ರಮಟ್ಟದ ಹಂಪಿ ಕೇಸರಿ ಪ್ರಶಸ್ತಿಗಾಗಿ ಕೊನೇಯ ಸುತ್ತಿನಲ್ಲಿ ಸತೀಶ್ ಪಡತಾರೆ ಮತ್ತು ಶಿವಕುಮಾರ್ ಶಿವಮೊಗ್ಗ ಅವರ ನಡುವೆ ಭಾರಿ ಪೈಪೋಟಿ ನಡೆದು ಸತೀಶ್ ಪಡತಾರೆ ವಿಜಯದ ಮಾಲೆ ಧರಿಸಿದರು. ಮತ್ತೋರ್ವ ಪೈಲ್ವಾನ್ ಸುನೀಲ್ ಪಡತಾರೆ ಮೂರನೇ ಸ್ಥಾನ ಪಡೆದರು.
ಬಳ್ಳಾರಿ ಜಿಲ್ಲಾಮಟ್ಟದ ಹಂಪಿ ಕುಮಾರ ಸ್ಪರ್ಧೆಗೆ ಚಿತ್ರಕೇರಿಯ ಪ್ರಭು ಬಹಿರಂಗ ಸವಾಲು ಎಸೆದು ಕುಸ್ತಿ ಅಖಾಡದಲ್ಲಿ ತಮ್ಮೊಂದಿಗೆ ಪೈಪೋಟಿಗೆ ಇಳಿಯಲು ಪ್ರತಿಸ್ಪರ್ಧಿಗಳಿಗೆ ಪಂಥಾಹ್ವಾನ ನೀಡಿದರು.
ಸ್ಪರ್ಧೆಗೆ ಯಾರೂ ಮುಂದಾಗದೇ ಇದ್ದುದರಿಂದ ಕಳೆದ ಬಾರಿಯ ವಿಜೇತ ಪ್ರಭು ಚಿತ್ರಕೇರಿ ಮತ್ತೊಮ್ಮೆ ಹಂಪಿಕುಮಾರ ಪ್ರಶಸ್ತಿ ಗಳಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 80 ಕ್ಕೂ ಹೆಚ್ಚು ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಎಳೆಯರಿಂದ ಹಿಡಿದು ವಯಸ್ಕರವರೆಗೆ ಎಲ್ಲ ವಯೋಮಾನದ ಕುಸ್ತಿಪಟುಗಳು ಅಖಾಡಕ್ಕಿಳಿದು ಸಾಮರ್ಥ್ಯ ಪ್ರದರ್ಶಿಸಿದರು.
ಕುಸ್ತಿಪಟುಗಳ ಜಾಣ್ಮೆಯ ಪಟ್ಟುಗಳು, ಹಿಡಿತಗಳು ನೆರೆದಿದ್ದ ಸಹಸ್ರಾರು ಜನರ ಮನಗೆದ್ದವು. ಚಿತ್ ಪಟ್ ಹಾಗೂ ಅಂಕಗಳ ಆಧಾರಿತ ಸ್ಪರ್ಧೆಗಳು ಪ್ರತ್ಯೇಕವಾಗಿ ಜರುಗಿದವು. ಜೋಡಿ ಜಂಗೀ ನಿಕಾಲಿ ಕುಸ್ತಿಗಳಲ್ಲಿ ಹಲವಾರು ಪೈಲ್ವಾನ್ರು ಭಾಗವಹಿಸಿದ್ದರು.
ಮಲ್ಲಕಂಬದ ರೋಮಾಂಚಕ ಪ್ರದರ್ಶನ:
ಲಕ್ಷ್ಮೇಶ್ವರದ ರಾಜ್ಯಮಲ್ಲಕಂಬ ಸಂಸ್ಥೆಯ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ, ಗದಗ ಜಿಲ್ಲೆಯ ಅಂತೂರು-ಬೆಂತೂರು ಹಾಗೂ ಲಕ್ಷ್ಮೇಶ್ವರದಿಂದ ಆಗಮಿಸಿದ 15 ಕ್ಕೂ ಅಧಿಕ ಮಲ್ಲಕಂಬ ಸಾಧಕರು ಅದ್ಭುತ ಪ್ರದರ್ಶನ ನೀಡಿದರು.
ವಿಜಯ ಹಾಗೂ ಅಜಯ ಶಿಬರೂರು ಸಹೋದರರು, ಭಾಗ್ಯ, ಅನುಪಮಾ, ಗಂಗಾ ಉತ್ತಮ ಪ್ರದರ್ಶನ ನೀಡಿದರು. ಎಂ.ಐ.ಕಣಕೆ, ಎಸ್.ಎಸ್.ದಾಸಣ್ಣವರ್, ಜೆ.ಎಂ.ನದಾಫ್, ಪಿ.ಎಸ್.ಗಿಡ್ಡಣ್ಣವರ್, ಗಿರೀಶ್ ಜಿಡ್ಡಿಮನಿ ತರಬೇತುದಾರರಾಗಿ ಕಾರ್ಯನಿರ್ವಹಿಸಿದರು.
ಕಲ್ಲು ಎತ್ತುವ ಸ್ಪರ್ಧೆಯ ವಿಜೇತರು:
ಇಬ್ರಾಹೀಂ ಜಮಖಂಡಿ ಪ್ರಥಮ, ಪೀಕನಗೌಡ ಪಾಟೀಲ ಲಿಂಗಸುಗೂರು ದ್ವಿತೀಯ ಹಾಗೂ ಗಣೇಶ್ ಬೆಳಗಾವಿ ತೃತೀಯ ಸ್ಥಾನ ಗಳಿಸಿದರು.
ಟಿ.ಎಂ.ಖಾಜಾ, ಕೆ.ದುರಗೋಜಿ, ಆರ್.ಕುಬೇರ, ಅಕ್ಬರ್, ವೆಂಕಟೇಶ್, ಹಾಗೂ ಶರಣಗೌಡ ಬೇಲೇರಿ ಮತ್ತಿತರರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.