ಜನಾ ರೆಡ್ಡಿಗೆ ಕುಡಿದು-ಕುಣಿದು ಅದ್ಧೂರಿ ಸ್ವಾಗತ, ಕೇಸು ಹಾಕಿದ ಪೊಲೀಸರು
ನನ್ನ ವಿರುದ್ಧದ ಆರೋಪ ಕಾಂಗ್ರೆಸ್ ನ ಪಿತೂರಿ. ನಾನು ಜಡ್ಜ್ ಅವರಲ್ಲಿ ಕೇಳಿದ್ದೆ: ಜೈಲಲ್ಲಿಟ್ಟಿರೂ ಪರ್ವಾಗಿಲ್ಲ, ಆದರೆ ಬಳ್ಳಾರಿಯಲ್ಲೇ ಇರಿಸಿ ಎಂದಿದ್ದೆ: ಜನಾರ್ದನ ರೆಡ್ಡಿ
ಬಳ್ಳಾರಿ, ನವೆಂಬರ್ 2: ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆದು, ಮಂಗಳವಾರ ನಗರ ಪ್ರವೇಶಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಅದ್ಧೂರಿ ಸ್ವಾಗತ ದೊರೆತರೂ ವಾಹನ ಸಂಚಾರಕ್ಕೆ ತೊಂದರೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಗರದ ಮೂರು ಮುಖ್ಯ ವೃತ್ತಗಳಲ್ಲಿ ವಾಹನ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದರು.
ಇನ್ನು ಇಲ್ಲಿನ ಗಡಿಗಿ ಚೆನ್ನಪ್ಪ ಸರ್ಕಲ್ ನಲ್ಲಿ ವಾಹನ ಸವಾರರು, ಪಾದಚಾರಿಗಳು ಎಲ್ಲರ ಮಧ್ಯೆ ಸಂಭ್ರಮಾಚರಣೆ ನೆಪದಲ್ಲಿ ಕೆಲವರು ಮದ್ಯ ಸೇವಿಸಿ, ವಿಚಿತ್ರವಾಗಿ ವರ್ತಿಸಿದರು. ಭಾರಿ ಸದ್ದಿನ ಪಟಾಕಿಗಳನ್ನು ಸಿಡಿಸಿದರು. ಈ ಸಂಭ್ರಮವನ್ನು ನಿಯಂತ್ರಿಸಲು ಸಾಧ್ಯವಾಗದೆ ಕೈ ಚೆಲ್ಲಿದ ಪೊಲೀಸರು, ವಾಹನ ಸಂಚಾರ ಸುಗಮಗೊಳಿಸಿದರೆ ಸಾಕು ಎಂದು ಹೆಣಗಾಡಿದರು.[ಬಳ್ಳಾರಿಗೆ ಜನಾರ್ದನ ರೆಡ್ಡಿ ಪುನರ್ ಪ್ರವೇಶ, ರಾಮುಲು ಖುಷ್!]
ಗಡಿಗಿ ಚೆನ್ನಪ್ಪ ವೃತ್ತ, ಕನಕದುರ್ಗಮ್ಮ ಗುಡಿ ವೃತ್ತ, ಬಿಜೆಪಿ ಜಿಲ್ಲಾ ಘಟಕದ ಕಚೇರಿ ಇರುವ ಎಸ್ ಪಿ ಸರ್ಕಲ್ ನಲ್ಲಿ ಪೊಲೀಸರು ವಾಹನ ಸಂಚಾರ ಬಂದ್ ಮಾಡಿದ್ದರು. ಚೆನ್ನಪ್ಪ ವೃತ್ತದಲ್ಲಿ ಟ್ರಾಫಿಕ್ ಲೈಟ್ ಆರಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಸಾರ್ವಜನಿಕರಿಗೆ ಸಮಸ್ಯೆ ಎದುರಾಯಿತು.
ಸಂಜೆ 4ರ ಹೊತ್ತಿಗೆ ನಗರ ಹೊರವಲಯದ ಪಿಡಿಹಳ್ಳಿಯಿಂದ ಮೆರವಣಿಗೆ ಆರಂಭಿಸಿದ ಜನಾರ್ದನ ರೆಡ್ಡಿ, ಬಳಿಕ ಅಲ್ಲಿಂದ 5 ಕಿಮೀ ದೂರದ ನಗರಕ್ಕೆ ಬರುವವರೆಗೆ ವಾಹನದ ದಟ್ಟಣೆ ಹೆಚ್ಚಿತ್ತು. ಇದೇ ವೇಳೆ ಮಾತನಾಡಿದ ರೆಡ್ಡಿ, ನನ್ನ ವಿರುದ್ಧದ ಆರೋಪ ಕಾಂಗ್ರೆಸ್ ನ ಪಿತೂರಿ. ನಾನು ಜಡ್ಜ್ ಅವರಲ್ಲಿ ಕೇಳಿದ್ದೆ: ಜೈಲಲ್ಲಿಟ್ಟಿರೂ ಪರ್ವಾಗಿಲ್ಲ, ಆದರೆ ಬಳ್ಳಾರಿಯಲ್ಲೇ ಇರಿಸಿ ಎಂದಿದ್ದೆ ಎಂದರು.[ಟ್ರೋಲ್ ಹೈಕ್ಳಿಗೆ ಆಹಾರವಾದ ಜನಾರ್ದನ ರೆಡ್ಡಿ ಪುತ್ರಿಯ ಮದುವೆ!]
ಇನ್ನೂ ಮಾತನಾಡುವ ಉತ್ಸಾಹದಲ್ಲಿದ್ದ ಜನಾರ್ದನ ರೆಡ್ಡಿಯನ್ನು ಸಂಸದ ಶ್ರೀರಾಮುಲು ತಡೆದರು. ರೆಡ್ಡಿ ಮಗಳು ಬ್ರಹ್ಮಿಣಿ ಮದುವೆ ಇದೇ ತಿಂಗಳು ಇದ್ದು, ಅದಕ್ಕಾಗಿ ಕೋರ್ಟ್ ಅನುಮತಿ ಪಡೆದು ಬಳ್ಳಾರಿಗೆ ಬಂದಿದ್ದಾರೆ. ಈ ಮದುವೆಯ ಅದ್ಧೂರಿ ಖರ್ಚಿನ ಕಾರಣಕ್ಕೆ ಗಮನ ಸೆಳೆದಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.[ಜನಾ ರೆಡ್ಡಿಗೆ ಇಷ್ಟು ದುಡ್ಡು ಎಲ್ಲಿಂದ ಬಂತು?: ಟಪಾಲ್ ಪ್ರಶ್ನೆ]
ಮೆರವಣಿಗೆ ನಡೆಸುವುದಕ್ಕೆ ಮುಂಚೆಯೇ ಅನುಮತಿ ಪಡೆದಿರಲಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆ ಕಾರಣಕ್ಕೆ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.