ಶಿಶು ಶವ ಹಸ್ತಾಂತರಕ್ಕೆ ಲಂಚ: ವಿಮ್ಸ್ ಆಸ್ಪತ್ರೆಯ ನಾಲ್ವರು ನೌಕರರ ವಜಾ
ಹೆರಿಗಾಗಿ ಭಾನುವಾರ ವಿಮ್ಸ್ ಆಸ್ಪತ್ರೆಗೆ ಬಂದು ಸೇರಿದ್ದ ಸಂಡೂರಿನ ನಿವಾಸಿ ಸುಜಾತ; ಆದರೆ,
ಬಳ್ಳಾರಿ, ಮಾರ್ಚ್ 6: ಬಳ್ಳಾರಿಯಲ್ಲಿನ ವಿಜಯ ನಗರ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ವಿಮ್ಸ್) ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟಿದ್ದ ಬಾಣಂತಿ ಹಾಗೂ ನವಜಾತ ಶಿಶುವಿನ ಮೃತದೇಹಗಳನ್ನು ಸಂಬಂಧಿಕರಿಗೆ ಒಪ್ಪಿಸಲು ಲಂಚ ಪಡೆದ ಆರೋಪ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನಾಲ್ವರು ಹೊರಗುತ್ತಿಗೆ ನೌಕರರನ್ನು ವಜಾಗೊಳಿಸಲಾಗಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಮ್ಸ್ ನಿರ್ದೇಶಕ ಕೃಷ್ಣಮೂರ್ತಿ, ನೌಕರರ ವಜಾ ಆದೇಶದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಬಾಣಂತಿ, ಮಗುವಿನ ಸಾವಿನ ಬಗ್ಗೆ ತನಿಖೆ ನಡೆಸಲು ತ್ರಿಸದಸ್ಯ ಪೀಠವೊಂದನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಮೂಲಗಳ ಪ್ರಕಾರ, ಶನಿವಾರ (ಮಾ. 4), ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಡೂರು ತಾಲೂಕು ಮೂಲದ ಸುಜಾತ (27) ಎಂಬ ಬಾಣಂತಿ ಮಗುವಿಗೆ ಜನ್ಮ ನೀಡುತ್ತಲೇ ಸಾವನ್ನಪ್ಪಿದ್ದರು. ಮಗುವೂ ಸಾವನ್ನಪ್ಪಿತ್ತು.
ಈ ಹಿನ್ನೆಲೆಯಲ್ಲಿ, ದುಃಖದ ಮಡುವಿನಲ್ಲಿದ್ದ ಅವರ ಸಂಬಂಧಿಕರಿಗೆ ತಾಯಿ, ಮಗುವಿನ ಮೃತ ದೇಹಗಳನ್ನು ಹಸ್ತಾಂತರಿಸುವಾಗ ಅಮಾನವೀಯತೆ ಮೆರೆದಿದ್ದ ನಾಲ್ವರು ಸಿಬ್ಬಂದಿ ಹಣ ಪಡೆದಿದ್ದರು.
ಇದರಿಂದ ಆಕ್ರೋಶಗೊಂಡಿದ್ದ ಬಾಣಂತಿ ಸಂಬಂಧಿಕರು ಆಸ್ಪತ್ರೆಯ ಮುಂದೆ ಶವಗಳನ್ನಿಟ್ಟು ಪ್ರತಿಭಟನೆ ನಡೆಸಿದ್ದರು.