ಬಿಸಿಲಿನ ಹೊಡೆತ: ಸರ್ಕಾರಿ ಕಚೇರಿ ವೇಳಾಪಟ್ಟಿ ಬದಲು
ಬಿಸಿಲಿನ ಬೇಗೆಯಲ್ಲಿ ಬೇಯುತ್ತಿರುವ ಕಲಬುರಗಿ ವಿಭಾಗದ 6 ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆ ಮಾಡಲಾಗಿದೆ.
ಬೆಂಗಳೂರು, ಮಾರ್ಚ್ 30: ಬೇಸಿಗೆಯ ಬಿಸಿಲಿನ ಝಳಕ್ಕೆ ಉತ್ತರ ಕರ್ನಾಟಕ ತತ್ತರಿಸುತ್ತಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಂತೂ ತಾಪಮಾನ ಇನ್ನಷ್ಟು ಏರಿಕೆಯಾಗುವ ಮುನ್ಸೂಚನೆ ಬಂದಿದೆ.
ಹೀಗಾಗಿ, ಬಿಸಿಲಿನ ಬೇಗೆಯಲ್ಲಿ ಬೇಯುತ್ತಿರುವ ಕಲಬುರಗಿ ವಿಭಾಗದ 6 ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಸಮಯವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾರ್ಚ್ 30 ಗುರುವಾರ ಸಂಜೆ ಈ ಕುರಿತು ಆದೇಶ ಹೊರಡಿಸಿದೆ. ಈ ಆದೇಶ 01/04/2017 ರಿಂದ ಮೇ 31/05/2017 ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ
ಕಚೇರಿ ವೇಳಾಪಟ್ಟಿ : ಶುಕ್ರವಾರ ಹೊರಡಿಸಿರುವ ಆದೇಶದಂತೆ ರಾಜ್ಯ ಸರ್ಕಾರಿ ಕಚೇರಿಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ತನಕ ಕಾರ್ಯನಿರ್ವಹಿಸಲಿವೆ. ಸಮಯ ಬದಲಾವಣೆಯಾದ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ಎಂದಿನಂತೆ ಲೋಪ/ಅಡೆ-ತಡೆಗಳಿಲ್ಲದೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕಾಗಿದೆ
ಸರ್ಕಾರದ ತುರ್ತು ಕೆಲಸವಿದ್ದಾಗ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರಿ ಕೆಲಸ ನಿರ್ವಹಿಸಲು ಆದೇಶ ಮಾಡಿದಲ್ಲಿ ಅಂತಹ ಆದೇಶಗಳನ್ನು ತಪ್ಪದೇ ಪಾಲಿಸಿ, ಸರ್ಕಾರಿ ಕೆಲಸದ ಸಮಯ ಮೀರಿದ್ದರೂ ಕೆಲಸಕ್ಕೆ ಹಾಜರಾಗತಕ್ಕದ್ದು ಎಂಬ ಷರತ್ತಿಗೊಳಪಟ್ಟು ಈ ಆದೇಶ ಹೊರಡಿಸಲಾಗಿದೆ.