ಕಳಂಕಿತ ಸಚಿವರ ಚರ್ಚೆಗೆ ಬಿಜೆಪಿ ಪಟ್ಟು, ಕಲಾಪ ಮುಂದಕ್ಕೆ
ಬೆಳಗಾವಿ, ಡಿ. 20: ಬಿಜೆಪಿ ಸದಸ್ಯರ ಧರಣಿಯ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಭೂ ಹಗರಣದಲ್ಲಿ ಕಳಂಕಿತ ಸಚಿವರ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ಆಗ್ರಹಿಸಿತು. ಆದರೆ, ಅವಕಾಶ ನೀಡಲು ಸ್ಪೀಕರ್ ನಿರಾಕರಿಸಿದರು.
ಇದರಿಂದ ಕ್ರೋಧಗೊಂಡ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಈ ಮಧ್ಯೆ ರೈತರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕೆಂದು ಜೆಡಿಎಸ್ ಶಾಸಕರು ಆಗ್ರಹಿಸಿದರು. ಆದರೆ, ಯಾವುದಕ್ಕೂ ಅವಕಾಶ ನೀಡದ ಸ್ಪೀಕರ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಆದೇಶಿಸಿದರು.
ಧಾರ್ಮಿಕ ದತ್ತಿ ಕಾಯ್ದೆ ಮಂಡನೆ : ಇದಕ್ಕೂ ಮೊದಲು ಕರ್ನಾಟಕ ಸರೋವರ ರಕ್ಷಣೆ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2014 ಹಾಗೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಧರ್ಮದಾಯಿಗಳ ದತ್ತಿ ವಿಧೇಯಕ 2014 ವಿಧೇಯಕಗಳನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿತು. ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯ ಮೂಲಕ ಧಾರ್ಮಿಕ ಸಂಸ್ಥೆಗಳನ್ನು ವಶಕ್ಕೆ ಪಡೆಯಲು ಸರ್ಕಾರಕ್ಕೆ ಅಧಿಕಾರ ಬರಲಿದೆ.
ಈ ಕಾಯ್ದೆ ಜಾರಿಗೆ ಕಾಂಗ್ರೆಸ್ ಮುಖಂಡರೇ ಆದ ಜನಾರ್ದನ ಪೂಜಾರಿ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಜಾರಿಯಿಂದ ಕೋಟ್ಯಂತರ ಭಕ್ತರಿಗೆ ದುಃಖವುಂಟಾಗುತ್ತದೆ. ಸರ್ಕಾರ ಮಠಗಳ ವಿಚಾರಕ್ಕೆ ಕೈ ಹಾಕಬಾರದು. ಕಾಂಗ್ರೆಸ್ ಹೈಕಮಾಂಡ್ ಕೂಡ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದು ಜನಾರ್ಧನ ಪೂಜಾರಿ ಹೇಳಿದ್ದರು.
ಆದರೆ, ಇದಾವುದನ್ನೂ ಲೆಕ್ಕಿಸದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ವಿಧೇಯಕ ಮಂಡಿಸಿದೆ.