'ಸಿದ್ದರಾಮಯ್ಯ ಕಾಂಗ್ರೆಸ್ನ ಕೊನೆ ಮುಖ್ಯಮಂತ್ರಿ'
ಬೆಳಗಾವಿ, ಜು. 08: ಕರ್ನಾಟಕದ ಕೊನೆಯ ಕಾಂಗ್ರೆಸ್ ಸಿಎಂ ಯಾರು? ಇದಕ್ಕೆ ಉತ್ತರ ಸಿದ್ದರಾಮಯ್ಯ. ಹೀಗೆಂದು ಆಡಳಿತ ಪಕ್ಷ ಮತ್ತು ಮುಖ್ಯಮಂತ್ರಿಯನ್ನು ಲೇವಡಿ ಮಾಡುತ್ತಲೇ ರಾಜ್ಯ ಸರ್ಕಾರವನ್ನು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಬುಧವಾರ ತರಾಟೆಗೆ ತೆಗೆದಿಕೊಂಡರು.
ಬೆಳಗಾವಿ ಸುವರ್ಣ ಸೌಧ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ಜಟಾಪಟಿಗೆ ಕಾರಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಇನ್ನು ಕೇವಲ ಅಧಿಕಾರ ಕನಸು ಮಾತ್ರ ಕಾಣಬಹುದು. ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ ಎಂದು ಬರೆದಿಡಲು ಅಡ್ಡಿ ಇಲ್ಲ ಎಂದು ಹೇಳಿದರು.[ವಿಧಾನ ಪರಿಷತ್ತಿನಲ್ಲಿ ಹಾಸಿಗೆ, ದಿಂಬು ಖರೀದಿ ಬಗ್ಗೆ ಚರ್ಚೆ]
ಸಾಕಷ್ಟು ಆಶ್ವಾಸನೆ, ಭರವಸೆಗಳ ಮಾಹಾಪೂರವನ್ನೇ ಹರಿಸಿದ್ದ ಕಾಂಗ್ರೆಸ್ ನಾಯಕರು ಎಲ್ಲವನ್ನು ಮರೆತು ತಮ್ಮ ಅಧಿಕಾರ ಕಾಪಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಜನರ ಹಿತ ಇವರಿಗೆ ಬೇಕಿಲ್ಲ. ಸಮಾಜ ಕಲ್ಯಾಣ ಇಲಾಖೆ ಹಗರಣ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.[ಸರ್ಕಾರಿ ಆಸ್ಪತ್ರೆ ವೈದ್ಯರ ಸಂಬಳ ಎಷ್ಟು ಹೆಚ್ಚಾಗಿದೆ ಗೊತ್ತೆ?]
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಹಾಸಿಗೆ ಮತ್ತು ದಿಂಬು ಖರೀದಿಯಲ್ಲಿ 19 ಕೋಟಿ ಅವ್ಯವಹಾರ ನಡೆದಿದೆ ಎಂದು ಸ್ವತಃ ಸಚಿವ ಅಂಜನೇಯ ಅವರೇ ಒಪ್ಪಿಕೊಂಡಿದ್ದಾರೆ. ಇದರ ತನಿಖೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ? ಎಂದು ಪ್ರಶ್ನೆ ಮಾಡಿದರು.