ಸವದತ್ತಿಯಲ್ಲಿ ಕುಖ್ಯಾತ ಆನೆ ದಂತ ಚೋರರ ಬಂಧನ
ಬೆಳಗಾವಿ, ಜನವರಿ 22 : ತ್ವರಿತವಾಗಿ ಹಣ ಮಾಡುವ ಉದ್ದೇಶದಿಂದ ಖಾನಾಪುರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಆನೆಗಳನ್ನು ಬೇಟೆಯಾಡಿ, ಕಳ್ಳತನದಿಂದ ಆನೆ ದಂತಗಳನ್ನು ಸಾಗಿಸುತ್ತಿದ್ದ ಇಬ್ಬರು ಕುಖ್ಯಾತ ದಂತಚೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿಯ ಬಸ್ ನಿಲ್ದಾಣದಲ್ಲಿರುವ ಮಿಶ್ರಪೇಡಾ ಅಂಗಡಿ ಬಳಿ ದಾಳಿ ನಡೆಸಿ ಆರೋಪಿಗಳು ಅಕ್ರಮವಾಗಿ ಮಾರಾಟಕ್ಕಾಗಿ ತಂದಿದ್ದ 7 ಆನೆ ದಂತದ ತುಂಡುಗಳು, ಒಂದು ದ್ವಿಚಕ್ರ ವಾಹನ ಹಾಗೂ 2 ಸ್ಯಾಮ್ಸಂಗ್ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸಿ, ಮಸಾಲೆ ಅಂಗಡಿಯಲ್ಲಿ ಮತ್ತು ಪೇಂಟಿಂಗ್ ಕೆಲಸ ಮಾಡಿಕೊಂಡಿರುವ 23 ವರ್ಷದ ಸಂತೋಷ್ ಅಲಿಯಾಸ್ ಗಣಪತಿ ಗಾಯಕವಾಡ್ ಮತ್ತು ಗೋಕಾಕ್ ನಿವಾಸಿಯಾಗಿರುವ, ನಕಲಿ ಕೀ ತಯಾರಿಸುವುದನ್ನು ದಂಧೆ ಮಾಡಿಕೊಂಡಿರುವ 25 ವರ್ಷದ ಸೂರಜ್ ಅಲಿಯಾಸ್ ಗಣಪತಿ ಮಧುಕರ್ ಬಂಧಿತರು.
ಇವರಿಬ್ಬರು ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಆನೆಗಳ ಬೇಟೆಯಾಡಿ, ದಂತಗಳನ್ನು ಕದ್ದು ಮಾರುವುದನ್ನು ದಂಧೆ ಮಾಡಿಕೊಂಡಿದ್ದರು. ಇವರಿಬ್ಬರ ವಿರುದ್ಧ ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸವದತ್ತಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಿಂಬಾಳ್ಕರ್ ಹೇಮಂತ್ ಎಂ, ಐಪಿಎಸ್, ಪೊಲೀಸ್ ಮಹಾನಿರೀಕ್ಷಕರು, ಸಿಐಡಿ, ಅರಣ್ಯ ಘಟಕ, ಬೆಂಗಳೂರು ರವರ ಮಾರ್ಗದರ್ಶನದಲ್ಲಿ ಹಾಗೂ ಪಿ.ಓ. ಶಿವಕುಮಾರ್, ಪೊಲೀಸ್ ಉಪಾಧೀಕ್ಷಕರು, ಸಿಐಡಿ, ಅರಣ್ಯ ಘಟಕ, ಬೆಂಗಳೂರು ರವರ ನೇತೃತ್ವದಲ್ಲಿ ಜನವರಿ 21ರಂದು, ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಲಾಗಿತ್ತು.
ಅರಣ್ಯ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಕೆ.ಎಂ.ರಮೇಶ್, ಹಾಗೂ ಪಿ.ಎಸ್.ಐ ರವರುಗಳಾದ ವಿ. ಗಜೇಂದ್ರ, ನಾಗೇಂದ್ರ ನಾಯ್ಕ್. ಟಿ.ಹೆಚ್ ಮತ್ತು ಸಿಬ್ಬಂದಿಗಳಾದ ಎಂ.ಎಸ್. ರಾಮಮೂರ್ತಿ, ಹೆಚ್.ಸಿ, ಜಗದೀಶ್, ರಾಜಶೇಖರ್, ರಾಮಕೃಷ್ಣ, ಜಾಧವ್ ಹಾಗೂ ಹುಬ್ಬಳ್ಳಿ ಅರಣ್ಯ ಸಂಚಾರಿದಳದ ಶ್ರೀಶೈಲ ಎನ್ ಗಾಬಿ, ಪಿ.ಎಸ್.ಐ ಹಾಗೂ ಅವರ ಸಿಬ್ಬಂದಿ ದಾಳಿ ನಡೆಸಿದ್ದರು. (ಪೊಲೀಸ್ ಸುದ್ದಿ)