ಗೃಹ ಸಚಿವ ಕೆ ಜೆ ಜಾರ್ಜ್ ಒಂದು ಒಳ್ಳೆ ಕೆಲ್ಸ ಮಾಡಿದ್ರು
ಬೆಳಗಾವಿ, ಡಿ 19: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೃಹ ಸಚಿವರು ನಾಲಾಯಕ್ ಎಂದು ವಿಪಕ್ಷಗಳ ಟೀಕೆಗೆ ಗುರಿಯಾಗುತ್ತಿದ್ದ ರಾಜ್ಯ ಗೃಹ ಸಚಿವ ಕೆ ಜೆ ಜಾರ್ಜ್ ಉತ್ತಮ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಗರ್ಭಿಣಿ ಮಹಿಳೆಯರನ್ನು ಬಂದೋಬಸ್ತಿಗೆ ನೇಮಿಸಬಾರದೆಂದು ಗೃಹ ಸಚಿವರು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಮೂಲಕ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. (ಜಾರ್ಜ್ ಗೆ ಬುಲೆಟ್ ಪ್ರೂಫ್ ಕಾರು)
ನಾಲಾಯಕ್ ಎಂದು ಟೀಕಿಸುತ್ತಿದ್ದ ವಿಪಕ್ಷಗಳು ಗೃಹ ಸಚಿವರು ಒಂದು ಒಳ್ಳೆ ಕೆಲಸ ಮಾಡಿದ್ದಾರೆಂದು ಪಕ್ಷಭೇದ ಮೆರೆತು ಉಘೇ..ಉಘೇ ಎಂದಿದ್ದಾರೆ.
(ಸಾಂದರ್ಭಿಕ ಚಿತ್ರ)
ಪ್ರಸಕ್ತ ಬೆಳಗಾವಿಯ ಚಳಿಗಾಲದ ಅಸೆಂಬ್ಲಿ ಅಧಿವೇಶನದಲ್ಲಿ ಆರು ಮಂದಿ ಗರ್ಭಿಣಿಯರು ಬಂದೋಬಸ್ತ್ ಕರ್ತವ್ಯದಲ್ಲಿದ್ದರು, ಕೂಡಲೇ ಅವರನ್ನು ಡ್ಯೂಟಿಯಿಂದ ಮುಕ್ತಗೊಳಿಸಿ ವಾಪಸ್ ಕಳುಹಿಸಲಾಗಿದೆ ಎಂದು ಜಾರ್ಜ್ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದಾರೆ.
ಮೇಲ್ಮನೆಯಲ್ಲಿ ಬಿಜೆಪಿಯ ತಾರಾ ಅನುರಾಧ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಜಾರ್ಜ್, ಭದ್ರತೆಗೆ ನಿಯೋಜಿಸಲಾಗಿದ್ದ ಒಬ್ಬ ಗರ್ಭಿಣಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ವಾಪಸ್ ಕಳುಹಿಸಲಾಗಿದೆ ಎಂದು ಉತ್ತರಿಸಿದ್ದಾರೆ.
ಭದ್ರತೆಗೆ ನಿಯೋಜಿಸಲಾಗಿರುವ ಮಹಿಳೆಯರಿಗೆ ಯಾವ ಸೌಕರ್ಯ ಕಲ್ಪಿಸಿದ್ದೀರಾ ಎನ್ನುವ ತಾರಾ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಮಹಿಳಾ ಪೊಲೀಸರಿಗೆ ಸೂಕ್ತ ಸೌಕರ್ಯ ಕಲ್ಪಿಸಲಾಗಿದೆ. (ನೆಪ ಮಾತ್ರ ಜಾರ್ಜ್ ಗೃಹ ಸಚಿವರು)
ನಗರದ ಕೆಎಸ್ಆರ್ಪಿ ಕ್ವಾರ್ಟರ್ಸ್ ನಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಅವರಿದ್ದ ಜಾಗಕ್ಕೇ ತಲುಪಿಸಲಾಗುತ್ತಿದೆ ಎಂದು ಜಾರ್ಜ್, ತಾರಾ ಪ್ರಶ್ನೆಗೆ ಉತ್ತರಿಸಿದ್ದಾರೆ.
ಒಟ್ಟಿನಲ್ಲಿ ಮಹಿಳಾ ಮತ್ತು ಪುರುಷ ಸಿಬ್ಬಂದಿಗಳಿಗೂ ಈ ಬಾರಿಯ ಅಧಿವೇಶನದ ಅವಧಿಯಲ್ಲಿ ಯಾವುದೇ ತೊಂದರೆಯಾಗದಂತೆ ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ಜಾರ್ಜ್, ತಾರಾ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.