ಕನ್ನಡದ ಹೆಸರಲ್ಲಿ ಹೊಟ್ಟೆಪಾಡು, ವಾಟಾಳ್ ಬಂದ್ ಕರೆಗೆ ಸಂಸದ ಅಂಗಡಿ ವ್ಯಂಗ್ಯ
ಬೆಳಗಾವಿ, ಜೂನ್ 3: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಸಂಸದ ಸುರೇಶ್ ಅಂಗಡಿ ಹೊಟ್ಟೆಪಾಡಿನ ಹೋರಾಟಗಾರ ಎಂದು ಕರೆದಿದ್ದಾರೆ. ಕನ್ನಡದ ಹೆಸರಿನಲ್ಲಿ ಬಹಳ ಜನ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇಂಥವರೆಲ್ಲ ಕರ್ನಾಟಕ ಬಂದ್ ಗೆ ಕರೆ ಕೊಟ್ಟರೆ ನಾನೇಕೆ ಪಾಲ್ಗೊಳ್ಳಬೇಕು ಎಂದು ಕೇಳಿದ್ದಾರೆ.
ವಾಟಾಳ್ ನಾಗರಾಜ್ ಜೂನ್ ಹನ್ನೆರಡರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ ವಿಷಯ ನಿಮಗೆ ಗೊತ್ತೇ ಇದೆ. ಮಹಾರಾಷ್ಟ್ರ ಪರ ಘೋಷಣೆ ಕೂಗಿದ ಎಂಇಎಸ್ ನಾಯಕರನ್ನು ಗಡೀಪಾರು ಮಾಡಬೇಕು ಎಂಬುದು ವಾಟಾಳ್ ನಾಗರಾಜ್ ಅವರ ಒತ್ತಾಯ. ಇಂಥ ಉದ್ದೇಶ ಇರಿಸಿಕೊಂಡು ಕರೆ ನೀಡಿದ ಬಂದ್ ಬಗ್ಗೆ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬಗ್ಗೆ ತುಂಬ ಲಘುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.[ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ: ವಾಟಾಳ್ ನಾಗರಾಜ್]
ಕನ್ನಡ ಭಾಷೆ, ನೆಲ-ಜಲದ ವಿಚಾರವು ಬಂದಾಗ ನಾವೆಲ್ಲ ಒಟ್ಟು ಸೇರಿ ಹೋರಾಟ ಮಾಡುತ್ತೇವೆ. ಈ ಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ ಹೋರಾಟ ನಿಜವಾದ ಕಾಳಜಿಯಿಂದ ಮಾಡುವಂತಹದ್ದಾಗಿರಬೇಕು. ಆಗಷ್ಟೇ ನಾನು ಭಾಗವಹಿಸುತ್ತೇನೆ ಎಂದು ಸಂಸದ ಸುರೇಶ್ ಅಂಗಡಿ ಮಾಧ್ಯಮದವರಿಗೆ ಹೇಳಿದ್ದಾರೆ.