ಚಂದ್ರಗ್ರಹಣದ ವೇಳೆ ಸ್ಮಶಾನದಲ್ಲಿ ಸಚಿವರ ಉಪಹಾರ ಕೂಟ
ಬೆಳಗಾವಿ, ಏ 4: ಈ ಹಿಂದೆ ಸ್ಮಶಾನದಲ್ಲಿ ವಾಸ್ತವ್ಯ ಹೂಡಿ, ಭೋಜನ ಕೂಟ ಆಯೋಜಿಸಿ ಸುದ್ದಿ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಚಂದ್ರ ಗ್ರಹಣದಂದು (ಏ 4) ಸಂಜೆ ಉಪಹಾರ ಕೂಟ ಆಯೋಜಿಸಿ ಮತ್ತೆ ಸುದ್ದಿ ಮಾಡಿದ್ದಾರೆ.
ಗ್ರಹಣದ ಸಮಯದಲ್ಲಿ ಊಟೋಪಚೋರ ಮಾಡದೇ, ಭಗವಂತನ ಸ್ಮರಣೆ ಮಾಡಬೇಕೆನ್ನುವುದು ಬಹು ಜನರಲ್ಲಿ ಇರುವ ನಂಬಿಕೆ. ಇದೊಂದು ಮೂಢನಂಬಿಕೆ ಎನ್ನುವುದು ಸಚಿವರ ವಾದ. (ಸ್ಮಶಾನದಲ್ಲಿ ಸಚಿವರ ವಾಸ್ತವ್ಯ)
ರಾಹುಗ್ರಸ್ತ ಖಗ್ರಾಸ ಚಂದ್ರಗ್ರಹಣದ ಹಿನ್ನಲೆಯಲ್ಲಿ, ನಗರದ ಸದಾಶಿವ ನಗರದಲ್ಲಿರುವ ವೈಕುಂಠ ಧಾಮ ಹಿಂದೂ ರುದ್ರಭೂಮಿಯಲ್ಲಿ ಸಚಿವ ಜಾರಕಿಹೊಳಿ, ಚಿಂತನಾ ಸಭೆಯ ಜೊತೆ ಉಪಹಾರ ಕೂಟ ಆಯೋಜಿಸಿದ್ದಾರೆ.
ಗ್ರಹಣದ ಸಮಯದಲ್ಲಿ ಭೋಜನ ನಿಷಿದ್ಧ, ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಿ, ದೇವರಿಗೆ ಎಳ್ಳು ದೀಪ ಹಚ್ಚಿ ನಂತರ ಊಟ ಮಾಡಬೇಕೆನ್ನುವುದು ಜನರ ನಂಬಿಕೆ.
ಇಂತಹ ಮೌಢ್ಯಗಳನ್ನು ದೂರಮಾಡುವ ಉದ್ದೇಶದಿಂದ ಗ್ರಹಣದ ವೇಳೆ ಸಭೆಯ ಜೊತೆ ಉಪಹಾರ ಕೂಟ ಆಯೋಜಿಸಿದ್ದೇವೆ. ಗ್ರಹಣದ ವೇಳೆ ಊಟ ಮಾಡಬಾರದು ಎನ್ನುವುದು ಬರೀ ಮೂಢನಂಬಿಕೆ ಎಂದು ಸಚಿವ ಜಾರಕಿಹೊಳಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಡಿಸೆಂಬರ್ ಆರರಂದು ಡಾ.ಅಂಬೇಡ್ಕರ್ ಪುಣ್ಯಸ್ಮರಣೆಯ ದಿನದಂದು ಬೆಳಗಾವಿಯ ಸ್ಮಶಾನದಲ್ಲಿ ಸರಕಾರೀ ಪ್ರಾಯೋಜಿತ ಕಾರ್ಯಕ್ರಮವನ್ನು ಜಾರಕಿಹೊಳಿ ಹಮ್ಮಿ ಕೊಂಡು ರಾಜ್ಯಾದ್ಯಂತ ಸುದ್ದಿ ಮಾಡಿದ್ದರು.