ಬೆಳಗಾವಿ : 5ನೇ ದಿನದ ಕಲಾಪದ ಮುಖ್ಯಾಂಶಗಳು
ಬೆಳಗಾವಿ, ಡಿ. 15 : ರಾಜ್ಯದಲ್ಲಿ ಖಾಲಿಯಿರುವ ಹುದ್ದೆಗಳ ಪೈಕಿ 1401 ವಿವಿಧ ವೈದ್ಯ ಹುದ್ದೆಗಳನ್ನು ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಮಹಾಂತೇಶ್ ಕೌಜಲಗಿ ಅವರ ಪ್ರಶ್ನೆಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರ ಪರವಾಗಿ ಉತ್ತರ ನೀಡಿದ ಅವರು, 980 ತಜ್ಞ ವೈದ್ಯರು, 331 ಸಾಮಾನ್ಯ ವೈದ್ಯರು ಹಾಗೂ 87 ದಂತ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಸದನಕ್ಕೂ ತಟ್ಟಿದ ಪವರ್ ಕಟ್ ಬಿಸಿ : ಪವರ್ ಕಟ್ ಬಿಸಿ ವಿಧಾನಸಭೆ ಮತ್ತು ಪರಿಷತ್ ಕಲಾಪಕ್ಕೂ ಸೋಮವಾರ ತಟ್ಟಿತ್ತು. ಉಭಯ ಸದನದಲ್ಲಿ ಎರಡು ನಿಮಿಷಗಳ ಕಾಲ ವಿದ್ಯುತ್ ಕೈ ಕೊಟ್ಟಿದ್ದರಿಂದ ಕಲಾಪವನ್ನು ಸ್ಥಗಿತಗೊಳಿಸಲಾಗಿತ್ತು.
ವಿಧೇಯಕಕ್ಕೆ ಅಂಗೀಕಾರ : ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯಗಳ ವ್ಯವಸ್ಥಾಪಕ ಮಂಡಳಿಗೆ ಸದಸ್ಯರನ್ನು ನೇಮಕಾತಿ ಮಾಡುವ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಇಂದು ಅಂಗೀಕಾರ ನೀಡಿದೆ. ಪಶುಸಂಗೋಪನೆ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಧೇಯಕವನ್ನು ಮಂಡಿಸಿದ್ದರು.
ಮೇಕೆದಾಟು ಡ್ಯಾಂ ಬಗ್ಗೆ ಸಭೆ : ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ನೀರಿನ ಶೇಖರಣಾ ಜಲಾಶಯ ನಿರ್ಮಿಸುವ ಸಂಬಂಧ ಆ ಭಾಗದ ಜನಪ್ರತಿನಿಧಿಗಳ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಗೆ ತಿಳಿಸಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಸಕ್ಕರೆ ಕಾರ್ಖನೆ ಮಾಲೀಕರು ನೆಂಟರೆ : ಸಕ್ಕರೆ ಕಾರ್ಖಾನೆ ಮಾಲೀಕರು ನಿಮ್ಮ ನೆಂಟರೇ? ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸಕ್ಕರೆ ಹಾಗೂ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರನ್ನು ಪ್ರಶ್ನಿಸಿದರು. ಕಬ್ಬು ಬೆಳೆಗಾರರ ಪಾವತಿ ವಿಷಯವಾಗಿ ನಿರ್ದಿಷ್ಟ ಕಾಲಾವಧಿ ನಿಗದಿ ಮಾಡುವಂತೆ ಪ್ರತಿಪಕ್ಷಗಳ ನಾಯಕರು ಪಟ್ಟು ಹಿಡಿದಾಗ ಸಚಿವ ಮಹದೇವಪ್ರಸಾದ್ ಮುಂದಿನ ಮಾರ್ಚ್ನಿಂದ ಜೂನ್ ಅವಧಿಯೊಳಗೆ ಕಬ್ಬು ಬಾಕಿ ಕೊಡಿಸುವುದಾಗಿ ಹೇಳಿದರು. ಏಕೆ ಇಷ್ಟು ವಿಳಂಬ ಅವರು ನಿಮ್ ನೆಂಟರೆ ಎಂದು ಸ್ಪೀಕರ್ ಪ್ರಶ್ನಿಸಿದರು.
ಕಾಗದ ರಹಿತ ಕಂದಾಯ ಇಲಾಖೆ : ಕಂದಾಯ ಇಲಾಖೆಯನ್ನು ಕಾಗದ ರಹಿತ ಇಲಾಖೆಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ, ಕಂದಾಯ ಇಲಾಖೆ, ಭೂಮಾಪನ ಇಲಾಖೆ, ಆಯುಕ್ತರ ಕಚೇರಿಗಳಲ್ಲಿ ಈಗಾಗಲೇ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು. [ಸುವರ್ಣ ಸೌಧ ಕಟ್ಟಿದ್ದು ಏಕೆ?]
ಬಿಜೆಪಿ-ಜೆಡಿಎಸ್
ಸಭಾತ್ಯಾಗ
:
ಕಬ್ಬು
ಬೆಳಗಾರರ
ಸಮಸ್ಯೆ
ಬಗ್ಗೆ
ಸದನದಲ್ಲಿ
ಸೋಮವಾರ
ಚರ್ಚೆ
ಆರಂಭವಾಯಿತು.
ಕಬ್ಬು
ಬೆಳೆಗಾರರ
ಬಾಕಿ
ಪಾವತಿ
ಕುರಿತು
ಉತ್ತರ
ನೀಡಿದ
ಸಿಎಂ
ಸಿದ್ದರಾಮಯ್ಯ
ಅವರು
ಮಾರ್ಚ್
2015ರೊಳಗೆ
ಬಾಕಿ
ಪಾವತಿ
ಮಾಡುತ್ತೇವೆ
ಎಂದು
ಸದನಕ್ಕೆ
ಮಾಹಿತಿ
ನೀಡಿದರು.
ಸಿಎಂ
ಮಾತಿನಿಂದ
ತೃಪ್ತರಾಗದ
ಬಿಜೆಪಿ
ಮತ್ತು
ಜೆಡಿಎಸ್
ಶಾಸಕರು
ಸಭಾತ್ಯಾಗ
ಮಾಡಿದರು.
ಶಾಸಕರ ಮೊಬೈಲ್ ಹೊರಗೆ : ಬೆಳಗಾವಿ ಚಳಿಗಾಲದ ಅಧಿವೇಶನದನ 5ನೇ ದಿನದ ಕಲಾಪ ಆರಂಭವಾಗಿದೆ. ಸದನದೊಳಗೆ ಮೊಬೈಲ್ ನಿಷೇಧಿಸಲಾಗಿದ್ದು, ಶಾಸಕರು ಮೊಬೈಲ್ ಇಡಲು ಸದನದ ಹೊರಗೆ ಕಪಾಟಿನ ವ್ಯವಸ್ಥೆ ಮಾಡಲಾಗಿದೆ.
ಸೋಮವಾರದ ಕಲಾಪ ಆರಂಭವಾಗುತ್ತಿದ್ದಂತೆ ಇಂದು ನಿಧನರಾದ ಟೈಮ್ಸ್ ಆಫ್ ಇಂಡಿಯಾದ ವರದಿಗಾರ ಎನ್.ಡಿ.ಶಿವಕುಮಾರ್ (40) ಅವರಿಗೆ ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎನ್.ಡಿ.ಶಿವಕುಮಾರ್ ಟೈಮ್ಸ್ ಆಫ್ ಇಂಡಿಯಾದ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಳಗಾವಿ ಅಧಿವೇಶನದ ವರದಿಗಾರಿಕೆಗೆ ತೆರಳಿದ್ದರು. ಸೋಮವಾರ ಮುಂಜಾನೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಶಿವಕುಮಾರ್ ನಿಧನಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ಸಂತಾಪ ಸೂಚಿಸಿದೆ.