ಗದಗದಲ್ಲಿನ ಕಪ್ಪತ್ತಗುಡ್ಡ ವನ್ಯಧಾಮವೆಂದು ಘೋಷಣೆ
ಸೋಮವಾರ ವಿಧಾನಪರಿಷತ್ ನಲ್ಲಿ ನಿಯಮ 72ರ ಅಡಿ ಬಿಜೆಪಿಯ ತಾರಾ ಅನುರಾಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್.ಆರ್.ಪಾಟೀಲ್, ಕಪ್ಪತಗುಡ್ಡ ಅರಣ್ಯ ಪ್ರದೇಶ ಸಂರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಎಚ್.ಆರ್.ದೊಡ್ಡಣ್ಣನವರ ಮತ್ತು ಆಶಾ ಟ್ರಾನ್ಸ್ ಪೋರ್ಟ್ ಕಂಪನಿಗಳಿಗೆ ಗುಡ್ಡದಲ್ಲಿ ಗಣಿಗಾರಿಕೆ ನಡೆಸಲಿ ನೀಡಿದ್ದ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ.
30 ವರ್ಷಗಳಿಗೆ ನೀಡಿದ ಗುತ್ತಿಗೆ ಮುಕ್ತಾಯಗೊಂಡಿದ್ದು, ಗುತ್ತಿಗೆಯನ್ನು ನವೀಕರಣ ಮಾಡುವುದಿಲ್ಲ ಮತ್ತು ಗುಡ್ಡವ ವ್ಯಾಪ್ತಿಯಲ್ಲಿ ನೂತನವಾಗಿ ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಎಸ್.ಆರ್.ಪಾಟೀಲ್ ಉತ್ತರ ನೀಡಿದರು. ಗುಡ್ಡದಲ್ಲಿ ಅಮೂಲ್ಯ ಔಷದೀಯ ಸಸ್ಯ ಗಳಿವೆ ಮತ್ತು ವನ್ಯ ಜೀವಿಗಳಿವೆ ಇದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದು, ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. (ಸದನ ಸ್ವಾರಸ್ಯ : ಯಡಿಯೂರಪ್ಪ ರೌದ್ರಾವತಾರ)
ಗುಡ್ಡದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿದ್ದ ವಿರುಪಾಪುರ, ಕಲಕೇರಿ, ಹಾಗೂ ಹಿರೇವಡ್ಡಳ್ಳಿ ಗ್ರಾಮಗಳ ವ್ಯಾಪ್ತಿಯ 14 ಜನರ ಮೇಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಗುಡ್ಡದ 244.1 ಚ.ಕಿ.ಮೀ. ಪ್ರದೇಶವನ್ನು 'ಕಪ್ಪತ್ತಗುಡ್ಡ ವನ್ಯಧಾಮ'ವೆಂದು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪಾಟೀಲ್ ತಿಳಿಸಿದರು.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಪಶ್ಚಿಮ ಘಟ್ಟಗಳ ಬಗ್ಗೆ ಜನರಿಗೆ ಭಾವನಾತ್ಮಕ ಸಂಬಂಧವಿದೆ. ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿರುವ ಮಠಗಳು, ವಿಧ್ಯಾರ್ಥಿ ಸಂಘಟನೆಗಳು, ಜನರು ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯಲು ಅವಕಾಶ ನೀಡುವುದಿಲ್ಲ ಎಂದರು.