ಬಿಜೆಪಿ ಶಾಸಕ ರಾಜು ಕಾಗೆ ಬೆಂಬಲಿಗರಿಂದ ಯುವಕನ ಮೇಲೆ ಹಲ್ಲೆ
ಬೆಳಗಾವಿ, ಜನವರಿ. 09 : ಬೆಳಗಾವಿಯ ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಸಹೋದರ ಸಿದ್ದಗೌಡ ಹಾಗೂ ಬೆಂಬಲಿಗರು ವಿವೇಕ್ ಶೆಟ್ಟಿ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಬೆಳಗಾವಿ ಅಥಣಿ ತಾಲೂಕಿನ ಉಗಾರ ಗ್ರಾಮದಲ್ಲಿ 2017 ಜನವರಿ 1,ರಂದು ಈ ಘಟನೆ ನಡೆದಿದೆ. ಆದರೆ, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಫೇಸ್ಬುಕ್ನಲ್ಲಿ ಅವಹೇಳನಕಾರಿ ಕಾಮೆಂಟ್ ಪೋಸ್ಟ್ ಮಾಡಿದ್ದಾನೆ ಎನ್ನುವ ಕಾರಣಕ್ಕಾಗಿ ಶಾಸಕ ರಾಜು ಕಾಗೆ ಅವರ ಸಹೋದರ ಸಿದ್ದಗೌಡ ಹಾಗೂ ಬೆಂಬಲಿಗರು ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ದೊಣ್ಣೆ, ಕುಡಗೋಲಿ ನಿಂದ ಥಳಿಸುತ್ತಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಗೆ ಒಳಗಾದ ವಿವೇಕ್ ಶೆಟ್ಟಿ ಹಾಗೂ ಅವರ ತಾಯಿ ಮೀರಜ್ ಶೆಟ್ಟಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೇಸ್ ಬುಕ್ ನಲ್ಲಿ ಅಶ್ಲೀಲ ಕಮೆಂಟ್ ಹಾಕಿದ್ದೇನೆ ಎಂಬುದು ಸುಳ್ಳು ಆರೋಪ. ರಾಜಕೀಯದಲ್ಲಿ ನನ್ನ ಬೆಳವಣಿಗೆ ಸಹಿಸದೇ ರಾಜು ಕಾಗೆ ಈ ರೀತಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಹಲ್ಲೆಗೊಳಗಾದ ವಿವೇಕ್ ಶೆಟ್ಟಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸೂಕ್ತ ಕ್ರಮ : ಶಾಸಕರಾಗಲಿ,ಸಂಸದರಾಗಲಿ ಯಾರೇ ಆದರೂ ಕಾನೂನು ಎಲ್ಲರಿಗೂ ಒಂದೇ. ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರ ಕುಟುಂಬದವರು ಮತ್ತು ಬೆಂಬಲಿಗರು ಯುವಕನ ಮೇಲೆ ನಡೆಸಿರುವ ದೌರ್ಜನ್ಯ ಸಂಬಂಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ಹಲ್ಲೆ ನಡೆಸಿಲ್ಲ ರಾಜುಕಾಗೆ ಸ್ಪಷ್ಟನೆ: ವಿವೇಕ್ ಶೆಟ್ಟಿ ನನಗೆ ಗೊತ್ತು, ಆದರೆ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನ ಮಗಳ ಫೇಸ್ ಬುಕ್ ಬಗ್ಗೆಯೂ ಗೊತ್ತಿಲ್ಲ.
ಈ ವಿಚಾರದ ಬಗ್ಗೆ ನನ್ನ ಪುತ್ರಿ, ಬೆಂಬಲಿಗರ ಜೊತೆ ಮಾತನಾಡುವೆ ಎಂದು ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ.