ಕೊಳವೆಬಾವಿಗೆ ಬಿದ್ದ ಮಗು: ನಾನೇನು ದೇವ್ರಾ, ಸಚಿವರ ಉಡಾಫೆ
ಸಾರ್ ನೀವು ಸ್ವಲ್ಪ ಬೇಗ ಬರಬಹುದಿತ್ತಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ನಾನೇನು ದೊಡ್ಡ ತಪ್ಪು ಮಾಡಿದೆ? ನಾನೇನು ದೇವರಾ? ಎಂದು ರಮೇಶ್ ಜಾರಕೊಹೊಳೆ ಪ್ರತ್ಯುತ್ತರ
ಅಥಣಿ (ಬೆಳಗಾವಿ), ಏ 23 : ತಾಲೂಕಿನ ಝಂಜರವಾಡ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯೊಳಗೆ ಬಿದ್ದ 6 ವರ್ಷದ ಕಂದಮ್ಮ ಕಾವೇರಿಯನ್ನು ಪತ್ತೆಹಚ್ಚುವ ಕಾರ್ಯ ಭರದಿಂದ ಸಾಗುತ್ತಿದ್ದ, ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಮಾಧ್ಯಮದ ಪ್ರಶ್ನೆಗೆ ಉಡಾಫೆಯ ಉತ್ತರವನ್ನು ನೀಡಿದ್ದಾರೆ.
ರಕ್ಷಣಾ ಸ್ಥಳಕ್ಕೆ ತಡವಾಗಿ ಆಗಮಿಸಿದ ರಮೇಶ್ ಜಾರಕಿಹೊಳೆ ಅವರನ್ನು, ಸಾರ್ ನೀವು ಸ್ವಲ್ಪ ಬೇಗ ಬರಬಹುದಿತ್ತಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಜಾರಕಿಹೊಳೆ, ನಾನೇನು ದೊಡ್ಡ ತಪ್ಪು ಮಾಡಿದೆ? ನಾನೇನು ದೇವರಾ ಎಂದು ಪ್ರತ್ಯುತ್ತರ ನೀಡಿದ್ದಾರೆ. [ಕೊಳವೆ ಬಾವಿಯಲ್ಲಿ ಬಿದ್ದ ಬಾಲಕಿ ಬದುಕಿ ಬರಲಿ]
ಇಡೀ ರಾಜ್ಯಕ್ಕೆ ಒಳ್ಳೆ ಪ್ರಶ್ನೆ ಕೇಳ್ದೆ ಬಿಡಪ್ಪಾ ನೀನು, ಅಲ್ಲಯ್ಯಾ ನಿನ್ನೆಯಿಂದ ಸತತವಾಗಿ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದೇನೆ. ಬೇಗ ಬಂದು ಕೆಲಸ ಸಾಧಿಸೋಕೆ ನಾನೇನು ದೇವರಾ ಎನ್ನುವ ಉತ್ತರವನ್ನು ರಮೇಶ್ ಜೊರಕಿಹೊಳೆ ನೀಡಿದ್ದಾರೆ.
ನಿನ್ನೆಯಿಂದ ಟೆಲಿಫೋನ್ ಮೂಲಕ ಸಲಹೆ ಸೂಚನೆ ನೀಡುತ್ತಿದ್ದೇನೆ. ಸ್ಥಳಕ್ಕೆ ಬರೋದೇ ಇರೋದು ಅದೇನು ದೊಡ್ಡತಪ್ಪಾ? ನಮ್ಮ ಜಿಲ್ಲಾಡಳಿತದ ಮೇಲೆ ನಮಗೆ ವಿಶ್ವಾಸವಿದೆ. ಎಷ್ಟು ಖರ್ಚು ಮಾಡಿದ್ರೂ, ಮಗು ಬದುಕಿಬರೋಕೆ ಸಾಧ್ಯವಿಲ್ಲ. ಬದುಕಿ ಬಂದ್ರೆ ಸಂತೋಷ.
ಮಗು ಬದುಕಿ ಬರಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಕೆಟ್ಟ ವಿಚಾರ ಈಗ ಚರ್ಚಿಸೋದು ಬೇಡ. ಮಗುವಿನ ತಂದೆತಾಯಿಗೆ ಪರಿಹಾರ ಕೊಡುವ ವಿಚಾರದಲ್ಲಿ ಸರಕಾರದ ಜೊತೆ ಮಾತುಕತೆ ನಡೆಸುತ್ತೇನೆ ಎಂದು ರಮೇಶ್ ಜಾರಕಿಹೊಳೆ ಹೇಳಿದ್ದಾರೆ.
ಘಟನೆಯ ವಿವರ: ಇಲ್ಲಿನ ಝಂಜರವಾಡ ಗ್ರಾಮದ ಜಮೀನಿನೊಂದರಲ್ಲಿ ತೋಡಿಸಲಾಗಿದ್ದ ಕೊಳವಿ ಬಾವಿಯಲ್ಲಿ ಕಾವೇರಿ ಎಂಬ 6 ವರ್ಷದ ಹೆಣ್ಣು ಮಗು ಶನಿವಾರ ಸಂಜೆ (ಏ 22) ಬಿದ್ದಿತ್ತು. ಕಾವೇರಿಯನ್ನು ಜೀವಂತ ಹೊರತೆಗೆಯುವ ಕಾರ್ಯ ಭಾನುವಾರ ಬೆಳಗ್ಗಿನಿಂದ ಭರದಿಂದ ಸಾಗಿದೆ.
ತಮ್ಮನೊಂದಿಗೆ ಆಟವಾಡುತ್ತಿದ್ದಾಗ ಕಾವೇರಿ ಅಕಸ್ಮಾತಾಗಿ ತೆರೆದ ಬಾವಿಯೊಳಗೆ ಬಿದ್ದಿದ್ದಳು. ಕೊಳವೆಬಾವಿಯನ್ನು ಸರಿಯಾಗಿ ಮುಚ್ಚಿರದಿದ್ದರಿಂದ ಈ ದುರಂತ ಸಂಭವಿಸಿದೆ. ಕಾವೇರಿ ಜೀವಂತ ಬರಲೆಂದು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ.
NDRF, ಮರಾಠಾ ಲಘು ಪದಾತಿ ದಳ, ಅಗ್ನಿಶಾಮಕ ದಳ, ಪೊಲೀಸರು ಸೇರಿದಂತೆ ಒಟ್ಟು 175 ಮಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.