ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೀರೋ ಮತ್ತೆ ರಾಜ್ಯಕ್ಕೆ ಬಂದೇ ಬರುತ್ತದೆ : ಸಿದ್ದರಾಮಯ್ಯ

By Prasad
|
Google Oneindia Kannada News

ಬೆಳಗಾವಿ, ಡಿ. 18 : ಯಾವುದೇ ಕಾರಣಕ್ಕೂ ಕೈಗಾರಿಕೆಗಳು ರಾಜ್ಯದಿಂದ ಕೈತಪ್ಪಿ ನೆರೆಯ ರಾಜ್ಯಕ್ಕೆ ಹೋಗಲು ಅವಕಾಶ ನೀಡುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‌ನಲ್ಲಿಂದು ಸದಸ್ಯೆ ತಾರಾ ಅನುರಾಧ ಅವರು ಧಾರವಾಡದಲ್ಲಿ ಸ್ಥಾಪನೆಗೊಳ್ಳಬೇಕಿದ್ದ ಹೀರೋ ಮೊಟೋ ಕಾರ್ಪ್ಸ್ ಲಿಮಿಟೆಡ್ ಕಂಪನಿ ಹೈದರಾಬಾದ್‌ಗೆ ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ಹೀರೋ ಹೋಂಡಾ ಕಂಪನಿಯವರು ತಪ್ಪು ನಿರ್ಧಾರ ಮಾಡಿ ನಮ್ಮ ರಾಜ್ಯವನ್ನು ಬಿಟ್ಟು ನೆರೆಯ ರಾಜ್ಯಕ್ಕೆ ಹೋಗಿದ್ದಾರೆ. ಅವರೇ ಮತ್ತೆ ನಮ್ಮ ರಾಜ್ಯಕ್ಕೆ ಮರುಳುತ್ತಾರೆ ನೋಡಿ ಎಂದರು. [ಹೀರೋ ಮೋಟೊಕಾರ್ಪ್ ಗೆ ಕೈ ಕೊಟ್ಟ ಕರ್ನಾಟಕ]

Hero will come back to Karnataka : Siddaramaiah

ಆಂಧ್ರಕ್ಕೆ ರಾಜ್ಯದಿಂದ ಒಂದು ಕೈಗಾರಿಕೆ ಹೋದರೆ ಅಲ್ಲಿಂದ 50 ಔಷಧ ಕಂಪನಿಗಳು ನಮ್ಮ ರಾಜ್ಯದಲ್ಲಿ ಕಂಪನಿ ಸ್ಥಾಪಿಸಲು ಮುಂದೆ ಬಂದಿವೆ. ಹೀರೋ ಹೋಂಡಾ ಕಂಪನಿಯವರಿಗೆ ಸರ್ಕಾರದ ವತಿಯಿಂದ 300 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು. ಹೆಚ್ಚುವರಿಯಾಗಿ 200 ಎಕರೆ ಜಮೀನು ನೀಡಲು ನಿರ್ಧರಿಸಲಾಗಿತ್ತು. ಹಾಗೆಯೇ ಹೊಸ ಕೈಗಾರಿಕಾ ನೀತಿಯಡಿ ನೀಡಬಹುದಾದ ಎಲ್ಲಾ ಸವಲತ್ತುಗಳನ್ನು ನೀಡಲು ಸರ್ಕಾರವು ಬದ್ಧವಾಗಿತ್ತು. ಆದಾಗ್ಯೂ ಅವರು ನೆರೆ ರಾಜ್ಯಕ್ಕೆ ಹೋಗಿದ್ದಾರೆ. ಆಂಧ್ರ ಸರ್ಕಾರದ ಉಚಿತ ಭೂಮಿ ತೆರಿಗೆ ವಿನಾಯಿತಿಯ ಭರವಸೆಯನ್ನು ನಂಬಿ ಹೋಗಿದ್ದಾರೆ. ಸದ್ಯದಲ್ಲೇ ತಪ್ಪಿನ ಅರಿವಾಗಿ ಖಂಡಿತವಾಗಿಯೂ ಅವರು ನಮ್ಮ ರಾಜ್ಯಕ್ಕೆ ಬರುತ್ತಾರೆಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ತಯಾರಿಸಿರುವ ಹೊಸ ಕೈಗಾರಿಕಾ ನೀತಿ 2014-19ರಲ್ಲಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚುವರಿ ರಿಯಾಯಿತಿ ಮತ್ತು ಉತ್ತೇಜನವನ್ನು ಪ್ರಕಟಿಸಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಮಹಿಳೆಯರು, ಹಿಂದುಳಿದ ವರ್ಗದವರಿಗೆ ಆಕರ್ಷಕ ಸಬ್ಸಿಡಿಯನ್ನು ನೀಡಲಾಗಿದೆ. ಅಲ್ಲದೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ನೀಡುವಂತಹ ವಿಶೇಷ ಕೈಗಾರಿಗಾ ಪ್ಯಾಕೇಜ್ ಅನ್ನು ನಮ್ಮ ರಾಜ್ಯಕ್ಕೂ ನೀಡುವಂತೆ ಪ್ರಧಾನಿಯವರಿಗೆ ಕೋರಿದ್ದೇನೆ ಎಂದು ತಿಳಿಸಿದರು.

ಸದಸ್ಯೆ ತಾರಾ ಅವರಿಗೆ ಯಾರೋ ತಪ್ಪು ಮಹಿತಿ ನೀಡಿದ್ದಾರೆ, ಅಥವಾ ಈ ಬಗ್ಗೆ ಅಪಪ್ರಚಾರವಾಗಿದೆ. ಸರ್ಕಾರವು ಯವುದೇ ಕಾರಣಕ್ಕೂ ಕೈಗಾರಿಕೆಗಳು ರಾಜ್ಯದಿಂದ ತಪ್ಪಿ ಹೋಗಲು ಬಿಡುವುದಿಲ್ಲ. ಆದ್ದರಿಂದ ತಾವು ಈ ಬಗ್ಗೆ ನಿಶ್ಚಿಂತೆಯಿಂದ ಇರಬಹುದೆಂದು ಮುಖ್ಯಮಂತ್ರಿಯವರು ಭರವಸೆ ನೀಡಿದರು.

English summary
Karnataka chief minister Siddaramaiah is confident that Hero MotoCorp will come back to Dharwad. He was answering a question raised by actress and MLC Tara in upper house regarding industries which are opting out of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X