ಬೆಳಗಾವಿಯಲ್ಲಿ ಮಳೆ ಅವಾಂತರ, 6 ಸೇತುವೆಗಳು ಜಲಾವೃತ
ಬೆಳಗಾವಿ, ಆಗಸ್ಟ್ 04 : ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು 6 ಸೇತುವೆಗಳು ಜಲಾವೃತವಾಗಿವೆ. 'ಜಿಲ್ಲೆಯಲ್ಲಿನ ಶಿಥಿಲ ಮತ್ತು ಅಪಾಯಕಾರಿ ಸೇತುವೆಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ' ಸಚಿವ ರಮೇಶ ಜಾರಕಿಹೊಳಿ ಅವರು ಸೂಚನೆ ನೀಡಿದ್ದಾರೆ.
ಬೆಳಗಾವಿ ಮತ್ತು ಖಾನಾಪುರದಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆಯಾಗುತ್ತಿದೆ. ಅತ್ತ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ 1,00,775 ಕ್ಯುಸೆಕ್ಗೆ ಏರಿಕೆಯಾಗಿದೆ. ಇದರಿಂದಾಗಿ ಚಿಕ್ಕೋಡಿ ತಾಲೂಕಿನ 4 ಸೇತುವೆಗಳು ಸೇರಿ ಜಿಲ್ಲೆಯ 6 ಸೇತುವೆ ಮುಳುಗಡೆಯಾಗಿದೆ.[ಸಾವಿತ್ರಿ ಪ್ರವಾಹದಲ್ಲಿ ಕೊಚ್ಚಿಹೋದ 4 ನಾಲ್ವರ ಪತ್ತೆ]
ಚಿಕ್ಕೋಡಿ ತಾಲೂಕಿನ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಂಶಿ, ಬೋಜವಾಡಿ-ಕನ್ನೂರು, ಕಾರದಗಾ-ಭೋಜ್ ಸೇತುವೆಗಳು ಮುಳುಗಡೆಯಾಗಿವೆ. ಬುಧವಾರ ಕಲ್ಲೋಳ-ಯಡೂರ ಹಾಗೂ ಮಲ್ಲಿಕವಾಡ-ದತ್ತವಾಡ ಸೇತುವೆಗಳು ಮುಳುಗಡೆಯಾಗಿದ್ದವು.[ಮುಂಬೈ-ಗೋವಾ ಸೇತುವೆ ಧ್ವಂಸ, ಸಹಾಯವಾಣಿ ಇಲ್ಲಿದೆ]
ಮುಂಬೈನಲ್ಲಿ ನಡೆದ ಸೇತುವೆ ದುರಂತದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಶಿಥಿಲ, ಅಪಾಯಕಾರಿ ಸೇತುವೆಯನ್ನು ತಕ್ಷಣ ಪರಿಶೀಲಿಸಿ ವರದಿ ಸಲ್ಲಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೂಚನೆ ನೀಡಿದ್ದಾರೆ.