ಬಗರ್ ಹುಕುಂ ಅರ್ಜಿದಾರರಿಗೆ ಭೂಮಿ ಮಂಜೂರು: ಕಾಗೋಡು
ಬೆಳಗಾವಿ, ನವೆಂಬರ್, 24: ಸರ್ಕಾರಿ ಗೋಮಾಳ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಈಗಾಗಲೇ ಅರ್ಜಿ ನಮೂನೆ 50 ಹಾಗೂ 53 ರಲ್ಲಿ ಭೂಮಿಗಾಗಿ ಮನವಿ ಸಲ್ಲಿಸಿದ್ದರೆ, ಕೂಡಲೇ ಅವರಿಗೆ ಭೂಮಿ ಮಂಜೂರು ಮಾಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಹಾವೇರಿ ಜಿಲ್ಲೆಯ 82,702 ರೈತರಿಗೆ ಬೆಳೆ ವಿಮೆ ಪರಿಹಾರ
2015ರ ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯಲ್ಲಿ 10,2936 ರೈತರು 1099.78 ಲಕ್ಷ ರೂ.ಗಳ ಬೆಳೆ ವಿಮೆ ಕಂತು ಪಾವತಿಸಿ ರಾಷ್ಟ್ರೀಯ ವಿಮಾ ಯೋಜನೆಗೆ ಒಳಪಟ್ಟಿದ್ದರು.
ಇದರಲ್ಲಿ ಅರ್ಹ 82,702 ರೈತರಿಗೆ 12,359.33 ಲಕ್ಷ ರೂ.ಗಳ ಬೆಳೆ ವಿಮೆ ನಷ್ಟ ಪರಿಹಾರವನ್ನು ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರದ ನೆರವಿಗೆ ಪ್ರಸ್ತಾವನೆ
ಹಾವೇರಿ ಜಿಲ್ಲೆಯಲ್ಲಿ 2,41,452 ರೈತರ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ. 28,0227.56 ಹೆಕ್ಟೇರ್ ಗಳಲ್ಲಿ ಬೆಳೆಹಾನಿಯಾಗಿದೆ. ರಾಜ್ಯದಲ್ಲಿ ಬರಪರಿಹಾರ ಕಾರ್ಯಗಳಿಗೆ 4702.54 ಕೋಟಿ ರೂ.ಗಳ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.